ಆರೆಸ್ಸೆಸ್ ಬಳಿ ತಪ್ಪಾಯ್ತು ಎಂದ ಬಿಜೆಪಿ ನಾಯಕರು
Team Udayavani, Jun 23, 2018, 6:40 AM IST
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕೆಲವೊಂದು ತಪ್ಪುಗಳಿಂದಾಗಿ ಅಧಿಕಾರದಿಂದ ವಂಚಿತರಾಗಬೇಕಾಯಿತು. ಮುಂದೆ ಅಂಥ ತಪ್ಪು ಮಾಡುವುದಿಲ್ಲ ಎಂದು ಆರ್ಎಸ್ಎಸ್ ಮುಖಂಡರಿಗೆ ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ.
ನಗರದ ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ ಕಚೇರಿ “ಕೇಶವ ಕೃಪಾ’ದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ
ಕಳೆದ 3 ತಿಂಗಳ ವರದಿ ಸಲ್ಲಿಸಿದ ಬಿಜೆಪಿ ನಾಯಕರು, ಮುಂದಿನ ಲೋಕಸಭೆ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಕೈಗೊಂಡಿರುವ ರೂಪು-ರೇಷೆ ವಿವರಿಸಿದರು. ಕಳೆದ 3 ತಿಂಗಳಿನಿಂದ ರಾಜಕೀಯವಾಗಿ ನಡೆದ ವಿದ್ಯಮಾನಗಳು, ಕಾಂಗ್ರೆಸ್,ಜೆಡಿಎಸ್ ಜತೆಗೂಡಿದ್ದರಿಂದ ಬಿಜೆಪಿಗೆ ಅವಕಾಶ ತಪ್ಪಿದ್ದರ ಬಗ್ಗೆ ಸಮಜಾಯಿಷಿ ನೀಡಿದರೆಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶವಿದ್ದರೂ ಸಂಘಟಿತ ಪ್ರಯತ್ನ ಇಲ್ಲದೆ ಹಿನ್ನಡೆ ಅನುಭವಿಸಬೇಕಾಯಿತು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ. ಹೀಗಾಗಿ, ಆ ಎರಡೂ ಪಕ್ಷಗಳನ್ನು ಎದುರಿಸಲು ಈಗಿನಿಂದಲೇ ಸಿದಟಛಿತೆ ಮಾಡಿಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಆರ್ಎಸ್ಎಸ್ ಮುಖಂಡರು ಬಿಜೆಪಿ ನಾಯಕರಿಗೆ ತಾಕೀತು ಮಾಡಿದರು ಎಂದು ಹೇಳಲಾಗಿದೆ. ರಾಜ್ಯದಲ್ಲಿ ಬಿಜೆಪಿ ನಾಯಕರ ಒಳ ಜಗಳ,ಪರಸ್ಪರ ಕಾಲೆಳೆಯುವಿಕೆಯಿಂದಾಗಿಯೇ ಪಕ್ಷಕ್ಕೆ ಹಿನ್ನಡೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಹಾಗೂ ಹಳೇ ಮೈಸೂರು ಪ್ರದೇಶದಲ್ಲಿ ಸಂಘ ಪರಿವಾರದಿಂದ ಎಲ್ಲ ರೀತಿಯ ಸಹಕಾರ ನೀಡಿದರೂ ನಿರೀಕ್ಷಿತ ಸ್ಥಾನ ಗೆಲ್ಲದಿರಲು ನಾಯಕರ “ಅಡೆjಸ್ಟ್ಮೆಂಟ್’ ರಾಜಕಾರಣವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಕಾರ್ಯಕರ್ತರಲ್ಲಿ ಅಪನಂಬಿಕೆ ಉಂಟಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದರು ಎಂದು ತಿಳಿದು ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ, ಅಶೋಕ್ ಸೇರಿ ಹಿರಿಯ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿ ಮೂರು ತಿಂಗಳಿಗೊಮ್ಮೆ ಆರ್ಎಸ್ಎಸ್ ಹಾಗೂ ಬಿಜೆಪಿ ನಾಯಕರ ನಡುವೆ ಇಂತಹ ಸಭೆ ನಡೆಯಲಿದ್ದು, ಮೂರು ತಿಂಗಳ ಚಟುವಟಿಕೆ, ಮುಂದಿನ ಕಾರ್ಯಯೋಜನೆ ಬಗ್ಗೆ ಸಮಗ್ರ ಚರ್ಚೆ ನಡೆಯುತ್ತದೆ.