
ಚು. ಆಯೋಗಕ್ಕೆ ಕಾಂಗ್ರೆಸ್ ದೂರು; ಮತದಾರರ ದತ್ತಾಂಶ ಕಳವು; ಸಿಎಂ ವಿರುದ್ಧ ತನಿಖೆಗೆ ಮನವಿ
Team Udayavani, Nov 24, 2022, 6:50 AM IST

ಬೆಂಗಳೂರು: ರಾಜ್ಯದಲ್ಲಿ ನಡೆದ “ಮತದಾರರ ದತ್ತಾಂಶ ಕಳವು’ ಪ್ರಕರಣದ ಬಗ್ಗೆ ಕೇಂದ್ರ ಚುನಾವಣ ಆಯೋಗಕ್ಕೆ ದೂರು ಕೊಟ್ಟಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದೆ.
ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಕೆಪಿಸಿಸಿ ಮಾಧ್ಯಮ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಮತ್ತಿತರರು ಕೇಂದ್ರ ಚುನಾವಣ ಆಯೋಗಕ್ಕೆ 12 ಪುಟಗಳ ದೂರನ್ನು ಬುಧವಾರ ಸಲ್ಲಿಸಿದ್ದಾರೆ.
ಮತದಾರರ ಖಾಸಗಿ ಮಾಹಿತಿಗಳನ್ನು ಕಲೆ ಹಾಕುವ “ಲಜ್ಜೆಗೇಡಿ ವಂಚನೆ’ ಕರ್ನಾಟಕದಲ್ಲಿ ನಡೆದಿದೆ. ಇದು ಪ್ರಜಾಪ್ರಭುತ್ವದ ಮೇಲಿನ ಬಹುದೊಡ್ಡ ಚುನಾವಣ ವಂಚನೆಯಾಗಿದ್ದು, ಬಿಬಿಎಂಪಿ ಮತ್ತು ರಾಜ್ಯ ಸರಕಾರದ ಅಧಿಕಾರಿಗಳು, ಖಾಸಗಿ ಸಂಸ್ಥೆ “ಚಿಲುಮೆ’ ಸಹಕಾರದಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕೃಪಾಪೋಷಣೆಯಲ್ಲಿ ಈ ಹಗರಣ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಚುನಾವಣ ಆಯೋಗ ತತ್ಕ್ಷಣ ತನಿಖೆ ಆರಂಭಿಸ ಬೇಕು. ತ್ವರಿತವಾಗಿ ಕ್ರಿಮಿನಲ್ ಕಾನೂನು ಪ್ರಕ್ರಿಯೆ ಕೈಗೊಂಡು ಮುಖ್ಯಮಂತ್ರಿ, ಬಿಬಿಎಂಪಿ, ಸರಕಾರಿ ಅಧಿಕಾರಿಗಳು ಹಾಗೂ ಚಿಲುಮೆ ಸಂಸ್ಥೆಯ ಪದಾಧಿ ಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗು ವುದನ್ನು ಖಾತರಿಪಡಿಸಬೇಕು. ಚುನಾವಣ ಆಯೋಗವು ಸಂವಿಧಾನದ ಕಲಂ 324 ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಬಳಸಿ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಜರಗಿಸಬೇಕು ಎಂದು ಕಾಂಗ್ರೆಸ್ ಮನವಿ ಮಾಡಿದೆ.
ಟಾಪ್ ನ್ಯೂಸ್
