ಜಾಣ ಹೆಜ್ಜೆ ಇಟ್ಟ ಸಿಎಂ ಬೊಮ್ಮಾಯಿ
Team Udayavani, Aug 2, 2021, 6:30 AM IST
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಸಹಕಾರದಿಂದ ಮುಖ್ಯಮಂತ್ರಿ ಪಟ್ಟ ದಕ್ಕಿಸಿಕೊಂಡ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರ ಬೆಂಬಲ ಗಿಟ್ಟಿಸಿಕೊಂಡು ರಾಜಕೀಯ ಜಾಣ್ಮೆ ಮೆರೆದಿದ್ದಾರೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಈ ಸರಕಾರ ಎಷ್ಟು ದಿನ ಇರುತ್ತೋ ಎಂದು ಮಾತನಾಡಿಕೊಳ್ಳುತ್ತಿದ್ದವರು ಹಾಗೂ ಆ ರೀತಿಯ ಅನುಮಾನ ಇಟ್ಟುಕೊಂಡ ವರಿಗೆ ಗೌಡರ “ಅಭಯ’ದ ಸೂಕ್ಷ್ಮ ಸಂದೇಶ ರವಾನೆಯಾಗುವಂತೆ ನೋಡಿಕೊಂಡಿದ್ದಾರೆ.
ಜತೆಗೆ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಹೆಚ್ಚಾದರೆ ರಾಜಕೀಯ ಲಾಭ ಪಡೆದು ಅವಧಿಪೂರ್ವ ಚುನಾವಣೆಯ ಕನಸು ಕಾಣುತ್ತಿದ್ದ ವಿಪಕ್ಷ ಕಾಂಗ್ರೆಸ್ಗೂ ಒಂದು ರೀತಿ ಯಲ್ಲಿ ಶಾಕ್ ನೀಡಿದ್ದಾರೆ.
ದೇವೇಗೌಡರ ಭೇಟಿ ಸಂದರ್ಭ ಬೊಮ್ಮಾಯಿ ಅವರು ರಾಜಕೀಯ ವಿಚಾರಗಳ ಬಗ್ಗೆಯೂ ಚರ್ಚಿಸಿದ್ದಾರೆ. ಇದೇ ಕಾರಣಕ್ಕೆ ಜನತಾ ಪರಿವಾರದ ಒಡನಾಡಿ ವಿ.ಸೋಮಣ್ಣ ಅವರನ್ನು ಜತೆಯಲ್ಲಿ ಕರೆದೊಯ್ದಿದ್ದರು ಎಂದು ಮೂಲಗಳು ತಿಳಿಸಿವೆ.
ದಿಲ್ಲಿಯಿಂದ ವಾಪಸ್ಸಾದ ಬೆನ್ನಲ್ಲೇ ಬೊಮ್ಮಾಯಿ ಅವರು ದೇವೇಗೌಡರನ್ನು ಭೇಟಿ ಮಾಡಿ ರುವುದು ವಿಶೇಷ. ಹಿತೈಷಿಗಳ ಮಾರ್ಗದರ್ಶನದ ಮೇರೆಗೆ ಈ ಭೇಟಿ ನಡೆದಿದೆ ಎಂದು ಹೇಳಲಾಗಿದೆ.
ಗೌಡರು ಬಹಿರಂಗವಾಗಿಯೇ ಈ ಸರಕಾರಕ್ಕೆ ಕಷ್ಟ ಎದುರಾದರೆ ನಾವು ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಇವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಮುನ್ನುಡಿಯಾ? :
ದೇವೇಗೌಡರು ರಾಜಕೀಯ ವಿಚಾರಗಳ ಬಗ್ಗೆ ಸುಮ್ಮನೆ ಮಾತನಾಡುವವ ರಲ್ಲ. ಅದರಲ್ಲೂ ಬಿಜೆಪಿಯ ಮುಖ್ಯಮಂತ್ರಿಗೆ ಕಷ್ಟ ಬಂದರೆ ನಾನು ಜತೆಗಿರುತ್ತೇನೆ ಎಂದು ಹೇಳಿರುವುದರ ಹಿಂದೆ ಬೇರೆಯೇ ಉದ್ದೇಶವಿದೆ. ಇದು ನೇರವಾಗಿ ಕಾಂಗ್ರೆಸ್ ವಲಯಕ್ಕೆ ನೀಡಿರುವ ಸಂದೇಶ ಎಂದೇ ಹೇಳಲಾಗುತ್ತಿದ್ದು ಭವಿಷ್ಯದಲ್ಲಿ ರಾಜ್ಯ ರಾಜಕೀಯದಲ್ಲಿ ನಡೆಯಬಹುದಾದ ರಾಜಕೀಯ ಸಮೀಕರಣಕ್ಕೆ ಇದು ಮುನ್ನುಡಿ ಎಂಬ ವಿಶ್ಲೇಷಣೆಗಳೂ ಇವೆ.