ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ 50ಲಕ್ಷ ರೂ ಪರಿಹಾರ ಘೋಷಿಸಿ: ಖಂಡ್ರೆ
Team Udayavani, May 18, 2021, 4:15 PM IST
ಬೆಂಗಳೂರು: ಕೋವಿಡ್ 19 ಸೋಂಕಿನಿಂದ ಮೃತಪಟ್ಟ ಎಲ್ಲಾ ಶಿಕ್ಷಕರ ಕುಟುಂಬಗಳಿಗೆ ಕನಿಷ್ಠ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಒಬ್ಬ ಉತ್ತಮ ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನೇ ರೂಪಿಸುತ್ತಾರೆ. ಆದರೆ ಈ ಕೋವಿಡ್ ಮಹಾಮಾರಿಯ ಸಮಯದಲ್ಲಿ ಕಲ್ಯಾಣ ಕರ್ನಾಟಕದಲ್ಲಿ 156 ಶಿಕ್ಷಕರು ಮೃತಪಟ್ಟಿರುವುದು ನಿಜಕ್ಕೂ ನೋವಿನ ಸಂಗತಿ. ಈ ಭಾಗಕ್ಕೆ ಆಗಿರುವ ತುಂಬಲಾರದ ನಷ್ಟ. ಈ ಎಲ್ಲ ಶಿಕ್ಷಕರ ಆತ್ಮಕ್ಕೆ ಶಾಂತಿ- ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಜಿಲ್ಲಾಧಿಕಾರಿಗಳೇ ಕೋವಿಡ್ ವಿರುದ್ಧ ಹೋರಾಟದ ಯುದ್ಧ ಕಮಾಂಡರ್ ಗಳು: ಪ್ರಧಾನಿ ಮೋದಿ
ಶಿಕ್ಷಕರು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ನಿರ್ಭೀತಿಯಿಂದ ತಮ್ಮ ವೃತ್ತಿಯಲ್ಲಿ ತೊಡಗಿದ್ದಾರೆ. ಅವರನ್ನೂ ಕೋವಿಡ್ ಯೋಧರು ಎಂದು ಪರಿಗಣಿಸಿ ಮೃತಪಟ್ಟ ಎಲ್ಲ ಶಿಕ್ಷಕರಿಗೂ ಕನಿಷ್ಠ 50ಲಕ್ಷ ರೂ ಪರಿಹಾರ ನೀಡುವಂತೆ ಮತ್ತು ಉಪ ಚುನಾವಣಾ ಕಾರ್ಯದಲ್ಲಿ ತೊಡಗಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಶಿಕ್ಷಕರಿಗೆ 1ಕೋಟಿ ರೂ ಪರಿಹಾರ ನೀಡಬೇಕು ಎಂದು ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.