ಗೋಪಾಲಯ್ಯ ಮನವೊಲಿಸಲು ಹೇಮಲತಾ ಮುಂಬೈಗೆ?
Team Udayavani, Jul 15, 2019, 3:05 AM IST
ಬೆಂಗಳೂರು: ಮುಂಬೈನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಅತೃಪ್ತ ಶಾಸಕ ಕೆ.ಗೋಪಾಲಯ್ಯ ಅವರ ಪತ್ನಿ ಹಾಗೂ ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಅವರು ಮುಂಬೈಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ದೇವೇಗೌಡರ ಕುಟುಂಬದ ಒತ್ತಡದ ಹಿನ್ನೆಲೆಯಲ್ಲಿ ತಮ್ಮ ಪತಿ, ಶಾಸಕ ಗೋಪಾಲಯ್ಯ ಅವರ ಮನವೊಲಿಸಲು ಹೇಮಲತಾ ಮಂಗಳವಾರ ಮುಂಬೈಗೆ ತೆರಳುವ ಸಾಧ್ಯತೆಯಿದೆ. ಈ ಹಿಂದೆ ರಾಜ್ಯಸಭಾ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಗೋಪಾಲಯ್ಯ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಹೇಮಲತಾ ಅವರು ದೇವೇಗೌಡರ ಮನೆಗೆ ಬಂದು ಮನವಿ ಮಾಡಿಕೊಂಡಿದ್ದರಿಂದ ಅಮಾನತ್ತನ್ನು ವಾಪಸ್ ಪಡೆಯಲಾಗಿತ್ತು. ಹೀಗಾಗಿ, ಈಗ ಗೋಪಾಲಯ್ಯ ಅವರ ಮನವೊಲಿಸುವಂತೆ ದೇವೇಗೌಡರ ಕುಟುಂಬ ಒತ್ತಡ ಹಾಕುತ್ತಿದೆ. ಆ ಕಾರಣಕ್ಕೆ ಹೇಮಲತಾ ಮುಂಬೈಗೆ ತೆರಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.