ಮಾಜಿ ಸಚಿವರ ಸರಳತೆ; ದನಗಳ ಕೊಟ್ಟಿಗೆಯಲ್ಲೇ ತಂಗಿದ ಸುರೇಶ್ ಕುಮಾರ್
Team Udayavani, Apr 4, 2017, 11:13 AM IST
ನಂಜನಗೂಡು : ಇಲ್ಲಿ ವಿಧಾನಸಭಾ ಚುನಾವಣಾ ಕಾವು ಏರಿದ್ದು ವಿವಿಧ ಕಾಂಗ್ರೆಸ್ , ಬಿಜೆಪಿಯ ದಿಗ್ಗಜ ನಾಯಕರುಗಳೆಲ್ಲ ಬೀಡು ಬಿಟ್ಟಿದ್ದಾರೆ. ಇದೇ ವೇಳೆ ಪ್ರಚಾರಕ್ಕೆ ತೆರಳಿದ ಮಾಜಿ ಸಚಿವ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ದನನ ಕೊಟ್ಟಿಗೆಯಲ್ಲಿ ರಾತ್ರಿ ಕಳೆದು ಇದೀಗ ಸುದ್ದಿಯಾಗಿದ್ದಾರೆ.
ಈ ವಿಚಾರವನ್ನು ಫೇಸ್ಬುಕ್ನಲ್ಲಿ ಸುರೇಶ್ ಕುಮಾರ್ ಅವರೇ ಚಿತ್ರಗಳ ಸಮೇತ ಪ್ರಕಟಿಸಿದ್ದರು.
ಕಳೆದ ನಾಲ್ಕು ದಿನಗಳಿಂದ ನಂಜನಗೂಡಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸ್ನೇಹಿತರೊಂದಿಗೆ ತೊಡಗಿದ್ದೇನೆ. ರಾತ್ರಿ ಉಳಿದಿರುವುದು ನಾವೇ ತೀರ್ಮಾನ ಮಾಡಿ ಆರಿಸಿಕೊಂಡಿರುವ (ಯಾವುದೇ ಪಂಚತಾರಾ ಹೋಟೆಲ್ ಗೆ ಕಡಿಮೆ ಇಲ್ಲದ) ಖುಷಿ ತಂದ ಗದ್ದೆಯ ವಾತಾವರಣದಲ್ಲಿ. ಒಳ್ಳೆಯ ಗಾಳಿ ನಮ್ಮ ಪಾಲಿಗೆ ದೊರಕುತ್ತಿರುವುದು ಇನ್ನಷ್ಟು ಸಂತಸ ತಂದಿದೆ.
ರಾತ್ರಿ ಮಲಗುತ್ತಿರುವುದು ಗೆಳೆಯ ಕಪಿಲೇಶ್ ರವರ ಆಲಂಬೂರು ಮುಂಟಿ ಗ್ರಾಮದ ಗದ್ದೆಯಲ್ಲಿರುವ ದನದ ಕೊಟ್ಟಿಗೆಯಲ್ಲಿ. ಸ್ನಾನಕ್ಕೆ ಗದ್ದೆಯ ಬೋರ್ ವೆಲ್ ನೀರು. ಬೆಳಿಗ್ಗೆಯಿಂದ ಓಡಾಡಿ ಸುಸ್ತಾಗುವ ದೇಹಕ್ಕೆ ಅತ್ಯಂತ ಸುಖಕರ ನಿದ್ದೆಯನ್ನು ದಯಪಾಲಿಸಿರುವ ಈ ವಾತಾವರಣಕ್ಕೆ ಧನ್ಯೋಸ್ಮಿ, ಎಂದು ಬರೆದಿದ್ದರು.
ನಾಯಕನ ಈ ಸರಳ ನಡೆಗೆ ಸಾಮಾಜಿಕ ತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸಾಕಷ್ಟು ಪ್ರಶಂಸೆ, ಕೆಲವರ ಟೀಕೆಗಳ ನಂತರ ಇನ್ನೊಂದು ಪೋಸ್ಟ್ ಮಾಡಿರುವ ಸುರೇಶ್ ಕುಮಾರ್ ಕಳೆದ ಐದು ದಿನಗಳಿಂದ ನಂಜನಗೂಡು ಉಪಚುನಾವಣೆಯ ಮತಯಾಚನೆಯ ಕಾರ್ಯದಲ್ಲಿ ತೊಡಗಿದ್ದೇನೆ. ನಿನ್ನೆ ನನ್ನ ಫೇಸ್ ಬುಕ್ ನಲ್ಲಿ ನಾನು ಸ್ನೇಹಿತ ಕಪಿಲೇಶ್ ರವರ ಗದ್ದೆಯಲ್ಲಿ ವಾಸ್ತವ್ಯ ಹೂಡಿರುವ ವಿಷಯವನ್ನು ಸಂತಸದಿಂದ ಹಂಚಿಕೊಂಡಿದ್ದೆ. ರಾತ್ರಿ ಕೊಟ್ಟಿಗೆಯಲ್ಲಿ ಮಲಗುತ್ತಿರುವ ವಿಚಾರವನ್ನು ತಿಳಿಸಿದ್ದೆ. ಈ ವಿಷಯಕ್ಜೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ “ಮೆಚ್ಚುಗೆ” (ಲೈಕ್ಸ್) ವ್ಯಕ್ತಪಡಿಸಿರುವ ಹಾಗೂ ಶೇರ್ ಮಾಡಿರುವ ಎಲ್ಲಾ ಗೆಳೆಯರಿಗೂ ನಾನು ಅಭಾರಿಯಾಗಿದ್ದೇನೆ.
ಖಂಡಿತವಾಗಿಯೂ ನನ್ನ ಸರಳತೆಯ ಬಗ್ಗೆ “ಡಂಗೂರ” ಸಾರಲು ನಾನು ಈ ವಿಷಯ ಹಂಚಿಕೊಂಡದ್ದಲ್ಲ. ಬದಲಿಗೆ ಅತ್ಯಂತ ಸಹಜವಾಗಿ ನನ್ನ ವಾಸ್ತವ್ಯ ನೀಡುತ್ತಿರುವ ಖುಷಿಯನ್ನು ನಿಮ್ಮೆಲ್ಲರೊಂದಿಗೆ ಶೇರ್ ಮಾಡಿಕೊಂಡಿದ್ದೆ.
2013 , ರಲ್ಲಿ ತಿರುಪತಿಗೆ ಬೆಂಗಳೂರಿನಿಂದ ನಡೆದಾಗ,(ಏಳು ದಿನ) 2014 , ರಲ್ಲಿ ಧರ್ಮಸ್ಥಳಕ್ಕೆ ಬೆಂಗಳೂರಿನಿಂದ ನಡೆದಾಗ(ಎಂಟು ದಿನ) 2015 , ರಲ್ಲಿ ಶಬರಿಮಲೆಗೆ ಬೆಂಗಳೂರಿಗೆ ನಡೆದಾಗ (ಹದಿನೈದು ದಿನ) ಇದೇ ರೀತಿಯ ವಾಸ್ತವ್ಯದ ಸಂತಸ ನಮ್ಮ ನಡಿಗೆಯ ತಂಡದ್ದಾಗಿತ್ತು. ನಾನು ಏನೋ ದೊಡ್ಡದ್ದನ್ನು ಮಾಡುತ್ತಿದ್ದೇನೆಂದು ದಯವಿಟ್ಟು ಯಾರೂ ಭಾವಿಸಬೇಡಿ. ಅದೇ ರೀತಿ ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡಿರುವವರನ್ನು ಹೀಗೆಳಿದಿದ್ದೇನೆಂದು ಯಾರೂ ತಿಳಿಯಬೇಡಿ.
ಇದು ನನ್ನ ‘ಸರಳತೆ’ ಎಂದು ಭಾವಿಸದೆ, ನಾನೇ ಆರಿಸಿಕೊಂಡ ಸಹಜವಾದ ಸುಂದರ ಪರಿಸರದಲ್ಲಿನ ವಾಸ್ತವ್ಯ ಎಂದು ತಿಳಿಯಬೇಕೆಂದು ಮತ್ತೊಮ್ಮೆ ಕೋರುತ್ತೇನೆ. ನನಗೆ ಬೆನ್ನು ತಟ್ಟಿರುವ ಹತ್ತಾರು ಸಾವಿರ ಗೆಳೆಯರಿಗೆ ಇದೋ ನನ್ನ ಮತ್ತೊಂದು ಧನ್ಯವಾದದ ನಮಸ್ಕಾರ.ಎಂದು ಬರೆದಿದ್ದಾರೆ.
ನನ್ನ ರಾತ್ರಿ ವಾಸ್ತವ್ಯವನ್ನು “ಕೊಟ್ಟಿಗೆ ರಾಜಕೀಯ” ವೆಂದು ಟೀಕೆ ಮಾಡಿರುವ ಡಾ. ಜಿ ಪರಮೇಶ್ವರ್ ರವರಿಗೂ ಸಹ ದೃಷ್ಟಿದೋಷವಿರುವ ಕಾರಣ ಸರಿಯಾದ ಕನ್ನಡಕದ ಅವಶ್ಯಕತೆ ಇದೆ ಎಂದೂ ಬರೆದಿದ್ದಾರೆ.