ಕಿತ್ತೂರು, ಕಲ್ಯಾಣ ಕರ್ನಾಟಕ ಎಂದು?
Team Udayavani, Dec 14, 2018, 6:00 AM IST
ಬೆಂಗಳೂರು: ಕಳೆದ ಹನ್ನೆರಡು ವರ್ಷಗಳಿಂದ ಸತತವಾಗಿ ಕೇಳಿಬರುತ್ತಿರುವ “ಕಿತ್ತೂರು ಕರ್ನಾಟಕ’ ಹಾಗೂ “ಕಲ್ಯಾಣ ಕರ್ನಾಟಕ’ ಮರು ನಾಮಕರಣ ಬೇಡಿಕೆಗೆ ಮರು ಜೀವ ಬಂದಿದೆ. ಎಚ್ ಡಿ ಕುಮಾರಸ್ವಾಮಿ ಅವರು ಮೊದಲ ಬಾರಿ ಮುಖ್ಯ ಮಂತ್ರಿಯಾಗಿದ್ದಾಗ
ಈ ಬೇಡಿಕೆ ಪ್ರಸ್ತಾಪವಾಗಿದ್ದು, ಈಗ ಮತ್ತೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮಾರ್ದನಿಸುತ್ತಿದೆ. ಗುಲಾಮ ಗಿರಿ ಮನಸ್ಥಿತಿಯಿಂದ ಹೊರ ಬರಲು ಮುಂಬೈ ಪ್ರಾಂತ್ಯವನ್ನು ಕಿತ್ತೂರು ಕರ್ನಾಟಕ ಎಂದು, ಹೈದರಾಬಾದ್ ನಿಜಾಮರಾಳಿರುವ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡುವಂತೆ ಹಿರಿಯ ಸಂಶೋಧಕ ಚಿದಾನಂದ ಮೂರ್ತಿ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಧಿಕೃತವಾಗಿ ಮನವಿ ಮಾಡಿದ್ದರು. ಅಲ್ಲದೇ ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಈ ಕುರಿತು ಎರಡೂ ಸದನದಲ್ಲಿ ನಿರ್ಣಯ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವರ ಬೇಡಿಕೆಯನ್ನು
ಗಂಭೀರವಾಗಿ ಪರಿಗಣಿಸಲಿಲ್ಲ.
ಮರು ನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟದ ಶಿಫಾರಸಿನ ನಂತರ ವಿಧಾನ ಮಂಡಲದ ಎರಡೂ ಸದನದಲ್ಲಿ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಎರಡೂ ಪ್ರಾಂತ್ಯಗಳಿಗೆ ಮರು ನಾಮಕರಣ ಮಾಡಿ ಆ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಲಿ ಎಂಬ ಒತ್ತಾಯ ಕೇಳಿಬಂದಿದೆ.
ಮಹಾರಾಷ್ಟ್ರದಲ್ಲಿ ಬದಲಾವಣೆ: ಮರಾಠಾ ಭಾಷಿಕರು ಹೆಚ್ಚಿರುವ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಮಹಾರಾಷ್ಟ್ರದ ಔರಂಗಾಬಾದ್ ವಿಭಾಗಕ್ಕೆ ಸೇರಿದ ಜಿಲ್ಲೆಗಳನ್ನು ಮರಾಠವಾಡಾ ಎಂದು ಮಹಾರಾಷ್ಟ್ರ ಸರ್ಕಾರ ಮರು ನಾಮಕರಣ ಮಾಡಿದ್ದು, ಮರಾಠಿಗರಿಗೆ ಆ ಪ್ರದೇಶ ತಮ್ಮದೆನ್ನುವ ಭಾವನೆ ಮೂಡುವಂತೆ ಮಾಡಿದೆ. ನಗರಗಳ ಹೆಸರು ಬದಲು: ಆದರೆ, ಸಿದ್ದರಾಮಯ್ಯ
ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ಅನೇಕ ನಗರಗಳಿಗೆ ಇಂಗ್ಲಿಷಿನಲ್ಲಿ ಉಚ್ಚಾರವಾಗುವ ಪದಗಳನ್ನು ಬದಲಾಯಿಸಿ ಕನ್ನಡೀಕರಣಗೊಳಿಸಿದ್ದರು. ಆದರೆ, ಪ್ರಾಂತ್ಯಗಳಿಗೆ ಮರು ನಾಮಕರಣ ಮಾಡುವ ಗೋಜಿಗೆ ಹೋಗಿರಲಿಲ್ಲ.
ಹೆಸರುಗಳ ಹಿಂದಿನ ಇತಿಹಾಸ: ದೇಶ ಸ್ವಾತಂತ್ರ್ಯ ವಾದ ನಂತರ ಭಾಷಾವಾರು ಪ್ರಾಂತ್ಯಗಳ ರಚನೆ ಮಾಡಲಾಗಿತ್ತು. 1956 ರಲ್ಲಿ ಕರ್ನಾಟಕಕ್ಕೆ ಮೈಸೂರು ಸಂಸ್ಥಾನ, ಹೈದರಾಬಾದ್ ನಿಜಾಮರ ಆಡಳಿತ ಪ್ರದೇಶವಾಗಿದ್ದ ಹೈದರಾಬಾದ್ ಕರ್ನಾಟಕ, ಮುಂಬೈ ಆಡಳಿತದಲ್ಲಿದ್ದ ಮುಂಬೈ ಕರ್ನಾಟಕ, ಮದ್ರಾಸ್ ಪ್ರಾಂತ್ಯ, ಕೊಡಗು ಸಂಸ್ಥಾನಗಳು ಸೇರಿ ಕೊಂಡವು. ಎಲ್ಲ ಪ್ರದೇಶಗಳನ್ನು ಸೇರಿಸಿ 1956 ರಲ್ಲಿ ಮೈಸೂರು ರಾಜ್ಯ ರಚನೆಯಾಯಿತು. ನಂತರ 1973ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಆದರೆ, ಕನ್ನಡ ಭಾಷೆ ಮಾತನಾಡುವ ಹೈದರಾಬಾದ್ ನಿಜಾಮರ ಆಳ್ವಿಕೆಗೊಳಪಟ್ಟಿದ್ದ ಬೀದರ್, ಗುಲಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ (ಮದ್ರಾಸ್ ಪ್ರಾಂತ್ಯದಲ್ಲಿತ್ತು) ಹೈದರಾಬಾದ್ ಕರ್ನಾಟಕ ಎಂದು ಗುರುತಿಸಿ ಕೊಂಡಿದ್ದು, ಕಲಬುರಗಿ ಕಂದಾಯ ವಿಭಾಗದ ಈ ಪ್ರದೇಶಗಳನ್ನು ಈಗಲೂ ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿದೆ.
ಅದೇ ರೀತಿ ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಧಾರವಾಡ, ಕಾರವಾರ, ಗದಗ ಹಾಗೂ ಹಾವೇರಿ ಜಿಲ್ಲೆಗಳನ್ನೊಳಗೊಂಡ ಪ್ರದೇಶ ಬ್ರಿಟೀಷರ ಅವಧಿಯಲ್ಲಿ ಮುಂಬೈ ಪ್ರಸಿಡೆನ್ಸಿಗೆ ಒಳಪಟ್ಟಿತ್ತು. ಭಾಷಾವಾರು ಪ್ರಾಂತ್ಯವಾದ ನಂತರೂ ಆ ಭಾಗವನ್ನು ಮುಂಬೈ ಕರ್ನಾಟಕ ಎಂದೇ ಕರೆಯಲಾಗುತ್ತಿದೆ.
ಕರ್ನಾಟಕದ ಭಾಗಗಳನ್ನು ಹೈದರಾಬಾದ್ ಮತ್ತು ಮುಂಬೈ ಪ್ರಾಂತ್ಯ ಎನ್ನುವುದು ಗುಲಾಮಗಿರಿಯ ಸಂಕೇತ. ಆ ಭಾಗದ ಜನರಿಗೆ ಇನ್ನೂ ಕನ್ನಡಿಗರ ನೆಲ ಎನ್ನುವ ಭಾವನೆ ಮೂಡುತ್ತಿಲ್ಲ. ಹೀಗಾಗಿ ಮುಂಬೈ ಪ್ರಾಂತ್ಯವನ್ನು ಕಿತ್ತೂರು ಕರ್ನಾಟಕ ಹಾಗೂ
ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಕರೆದರೆ, ನಮ್ಮ ನಾಡು ಎನ್ನುವ ಹೆಮ್ಮೆ ಮೂಡುತ್ತದೆ.
ಮಹಾರಾಷ್ಟ್ರದವರು ಬೆಳಗಾವಿ ತಮ್ಮದು ಎಂದು ಹೇಳುತ್ತಿರುವುದೂ ಇದೇ ಕಾರಣಕ್ಕೆ.
● ಚಿದಾನಂದ ಮೂರ್ತಿ, ಹಿರಿಯ ಸಂಶೋಧಕ
ಉತ್ತರ ಕರ್ನಾಟಕದ ಎರಡು ಪ್ರಾಂತ್ಯಗಳನ್ನು ಬೇರೆ ರಾಜ್ಯಗಳ ಹೆಸರಿನಲ್ಲಿ ಕರೆಯುತ್ತಿರುವುದರಿಂದ ನಾವು ಇನ್ನೂ ಹೊರಗಿನವರೇ ಎನ್ನುವ ಭಾವನೆ ಮೂಡುತ್ತಿದೆ. ಹೀಗಾಗಿ ಅದನ್ನು ಬದಲಾಯಿಸಬೇಕೆಂದು ಸದನದಲ್ಲಿ ನಾನೂ ಮನವಿ ಮಾಡಿದ್ದೆ. ರಾಜ್ಯ ಸರ್ಕಾರ ಮರು ನಾಮಕರಣ ಮಾಡಲು ತೀರ್ಮಾನಿಸಿದರೆ ಒಳ್ಳೆಯದು.
ಬಸವರಾಜ್ ಹೊರಟ್ಟಿ, ಪರಿಷತ್ ಸದಸ್ಯ
● ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ