ಬಿಲ್ಲವ ಅಸೋಸಿಯೇಶನ್ಗೆ ಜಮೀನು: ಸಚಿವ ಸುನಿಲ್ ಕುಮಾರ್ ಭರವಸೆ
Team Udayavani, Oct 4, 2021, 6:32 AM IST
ಬೆಂಗಳೂರು ವಿದ್ಯಾಸಂಸ್ಥೆ ಆರಂಭಿಸಲು ಬೆಂಗಳೂರಿನ ಬಿಲ್ಲವ ಅಸೋಸಿಯೇಶನ್ ಜಮೀನಿಗಾಗಿ ಸರಕಾರಕ್ಕೆ ಬೇಡಿಕೆ ಸಲ್ಲಿಸಿದೆ. ಈ ಸಂಬಂಧ ವಸತಿ ಸಚಿವರೊಂದಿಗೆ ಚರ್ಚಿಸಿ ಅನೇಕಲ್ ಬಳಿ 1 ಎಕರೆ ಭೂಮಿಯನ್ನು ಮಂಜೂರು ಮಾಡಿಸುವುದಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಭರವಸೆ ನೀಡಿದರು.
ಬಿಲ್ಲವ ಅಸೋಸಿಯೇಶನ್ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಿಲ್ಲವ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಹಾಗೂ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ವಿತರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ವಿನಯ ಕುಮಾರ ಸೊರಕೆ ಮಾತನಾಡಿ, ನಮ್ಮ ಸಮುದಾಯದ ಹಿರಿಯರಾದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಜನಾರ್ದನ ಪೂಜಾರಿ, ಆರ್.ಎಲ್. ಜಾಲಪ್ಪ , ಡಾ| ರಾಜಕುಮಾರ್ ಅವರ ಸ್ಮರಣೆ ಮಾಡುತ್ತಾ ಸಮಾಜ ಕಟ್ಟೋಣ ಎಂದು ತಿಳಿಸಿದರು.
ಸಮುದಾಯಗಳು ಒಟ್ಟಾಗಬೇಕಾಗಿದ್ದು, ರಾಜಕೀಯರಹಿತವಾಗಿ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಬೇಕಾಗಿದೆ ಎಂದರು.
ಇದನ್ನೂ ಓದಿ:ವಿಶ್ವದ ನಂ.2 ಟೆನಿಸ್ ಆಟಗಾರ್ತಿ ಅರಿನಾ ಸಬಲೆಂಕಾಗೆ ಕೋವಿಡ್ ಪಾಸಿಟಿವ್
ಇದೇ ವೇಳೆ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಂಗಳೂರಿನ ಮುಡಾ ಅಧ್ಯಕ್ಷ ರವಿಶಂಕರ್ ವಿಜಾರ್ ಅವರನ್ನು ಸಮ್ಮಾನಿಸಲಾಯಿತು.
ಸೋಲೂರಿನ ನಾರಾಯಣ ಗುರು ಮಠದ ಆರ್ಯ ಈಡಿಗರ ಮಹಾ ಸಂಸ್ಥಾನದ ನಿಯೋಜಿತ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶಾಸಕ ಮತ್ತು ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ| ಎಂ. ತಿಮ್ಮೇಗೌಡ, ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ್, ಗೋವಿಂದ ಬಾಬು ಪೂಜಾರಿ, ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಅಧ್ಯಕ್ಷ ಎಂ.ವೇದ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ವೃದ್ಧಾಶ್ರಮ ಸ್ಥಾಪನೆ
ಬಿಲ್ಲವ ಅಸೋಸಿಯೇಶನ್ ಈಗಾಗಲೇ ಹೆಣ್ಣು ಮಕ್ಕಳ ಕಲಿಕೆ ಉದ್ದೇಶಕ್ಕಾಗಿ ಹಾಸ್ಟೆಲ್ ನಿರ್ಮಾಣಕ್ಕೆ ಮುಂದಾಗಿದೆ. ಈಗ ವೃದ್ಧಾಶ್ರಮ ತೆರೆಯಲು ಚಿಂತನೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಆಯುರ್ವೇದ ಆಸ್ಪತ್ರೆ ಆರಂಭಿಸುವ ಯೋಚನೆಯೂ ಇದೆ ಎಂದು ಅಧ್ಯಕ್ಷ ಎಂ. ವೇದ ಕುಮಾರ್ ಹೇಳಿದರು.