ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿ
Team Udayavani, Nov 9, 2019, 3:05 AM IST
ಧಾರವಾಡ: ಸಿಎಂ ಯಡಿಯೂರಪ್ಪ ಅವರೇ ಆಡಿಯೋ ಮಾಡಿದ್ದನ್ನು ಒಪ್ಪಿಕೊಂಡಿದ್ದರೂ, ಕಾಂಗ್ರೆಸ್ ಆಡಿಯೋ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಜಗದೀಶ ಶೆಟ್ಟರ್ ಆರೋಪಿಸುವುದು ಬೇಜವಾಬ್ದಾರಿ ಹೇಳಿಕೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು. ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಆಡಿಯೋ ತಮ್ಮ ಪಕ್ಷದವರೇ ಮಾಡಿದ್ದಾರೆಂಬುದನ್ನು ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದರು.
ಆದರೆ ಪಕ್ಷದ ಹೈಕಮಾಂಡ್ ತರಾಟೆಗೆ ತೆಗೆದುಕೊಂಡ ನಂತರ ಉಲ್ಟಾ ಹೊಡೆದಿದ್ದಾರೆ. ಇದು ಬಿಜೆಪಿ ನಾಯಕರೇ ಬಿಡುಗಡೆ ಮಾಡಿದ ಕ್ಲಿಪ್ಪಿಂಗ್. ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಯಡಿಯೂರಪ್ಪ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಸಿಎಂ ಸ್ಥಾನದಿಂದ ಕೂಡಲೇ ಕೆಳಗಿಳಿಯಬೇಕು.
ರಾಜ್ಯದಲ್ಲಿ ಅಧಿಕಾರ ನಡೆಸಲು ಕೇವಲ ನಂಬರ್ ಇದ್ದರೆ ಸಾಲದು. ರಾಜಕೀಯ ನೈತಿಕತೆ ಕೂಡ ಇರಬೇಕು. ಬಿಜೆಪಿ ನೈತಿಕತೆ ಕಳೆದುಕೊಂಡ ಪಕ್ಷ. ಕಾಂಗ್ರೆಸ್ ಅಧೋಗತಿಗೆ ಇಳಿದಿದೆ ಎಂದು ಸಚಿವ ಜಗದೀಶ ಶೆಟ್ಟರ ಹೇಳಿಕೆ ನೀಡಿದ್ದಾರೆ. ಆದರೆ, ಯಾರು ಅಧೋಗತಿಗೆ ಇಳಿದಿದ್ದಾರೆ ಎಂಬುದನ್ನು ಜನರು ನಿರ್ಧರಿಸುತ್ತಾರೆ. ಮೊದಲು ಯಡಿಯೂರಪ್ಪ ನೀಡಿದ ಹೇಳಿಕೆ ಕುರಿತು ತನಿಖೆ ನಡೆಯಲಿ ಎಂದರು.