ಇನ್ನೂ ಅಧಿಕಾರ ಸ್ವೀಕರಿಸದ ಸಚಿವ ಆನಂದ್ ಸಿಂಗ್
Team Udayavani, Jan 28, 2021, 6:10 AM IST
ಬೆಂಗಳೂರು: ಮೇಲಿಂದ ಮೇಲೆ ಖಾತೆ ಬದಲಾವಣೆಯಿಂದ ಮುನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ಇನ್ನೂ ಹೊಸ ಖಾತೆಯ ಜವಾಬ್ದಾರಿ ವಹಿಸಿಕೊಳ್ಳದೆ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.
ಅರಣ್ಯ ಖಾತೆ ಹೊಂದಿದ್ದ ಅವರಿಗೆ ಪ್ರವಾ ಸೋದ್ಯಮ ಮತ್ತು ಪರಿಸರ ಖಾತೆ ನೀಡಲಾಗಿತ್ತು. ಅನಂತರ ಅವರಿಂದ ಎರಡೂ ಖಾತೆಗಳನ್ನು ವಾಪಸ್ ಪಡೆದು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ. ಪ್ರವಾಸೋದ್ಯಮ ಖಾತೆಯನ್ನು ವಾಪಸ್ ಪಡೆದಿರುವುದರಿಂದ ಅತೃಪ್ತರಾಗಿರುವ ಅವರು, ಖಾತೆ ಬದಲಾವಣೆ ಮಾಡುವವರೆಗೂ ಅಧಿಕಾರ ಸ್ವೀಕರಿಸದಿರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಮಂಗಳವಾರ ರಾತ್ರಿ ಮುಖ್ಯಮಂತ್ರಿಯ ಭೇಟಿಗೆ ಶ್ರಮಿಸಿದ್ದ ಅವರಿಗೆ ಅವಕಾಶ ದೊರೆತಿರ ಲಿಲ್ಲ. ಬುಧವಾರ ವಿಕಾಸ ಸೌಧದಲ್ಲಿರುವ ತನ್ನ ಕಚೇರಿಗೆ ಆಗಮಿಸಿದ್ದರೂ, ಐದೇ ನಿಮಿಷದಲ್ಲಿ ತೆರಳಿದ್ದಾರೆ. ಖಾತೆ ಬದಲಾಯಿಸದಿದ್ದರೆ, ವಿಧಾನ ಮಂಡಲ ಅಧಿವೇಶನದಿಂದ ದೂರ ಉಳಿಯುವ ಸಾಧ್ಯತೆಯೂ ಇದೆ.
ಅತೃಪ್ತರ ಸಭೆ ಸಾಧ್ಯತೆ :
ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕತೆಗೆ ಅನ್ಯಾ ಯವಾಗಿದೆ ಎಂದು ಕೆಲವು ಶಾಸಕರು ಅಧಿವೇಶನ ಸಂದರ್ಭದಲ್ಲಿ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.