ಮುಂಗಾರು ಬೆಳೆನಷ್ಟ:3 ವಾರದಲ್ಲಿ ಪರಿಹಾರ
Team Udayavani, Mar 22, 2017, 9:10 AM IST
ವಿಧಾನಪರಿಷತ್ತು: ಮುಂಗಾರು ಹಂಗಾಮಿನ ಬೆಳೆನಷ್ಟ ವಿಮೆ ಮೊತ್ತವನ್ನು ಮೂರು ವಾರದೊಳಗೆ ವಿತರಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ನ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, “ಮುಂಗಾರು ಹಂಗಾಮಿನ ಬೆಳೆ ವಿಮೆ ಮೊತ್ತವಾಗಿ 800 ಕೋಟಿ ರೂ. ಪಾವತಿಸಬೇಕಿದೆ. ಈಗಾಗಲೇ ಆರು ಜಿಲ್ಲೆಗಳಲ್ಲಿ ಬೆಳೆವಿಮೆ ಮೊತ್ತ ಪಾವತಿಯಾಗಿದೆ. ಉಳಿದೆಡೆ ಮೂರು ವಾರಗಳಲ್ಲಿ
ವಿತರಿಸಲಾಗುವುದು. ಬತ್ತಕ್ಕೆ ಬೆಳೆವಿಮೆ ವಿತರಣೆ ಸಂಬಂಧ ಸಂಸ್ಥೆಯು ಕೆಲ ಸ್ಪಷ್ಟನೆ ಕೋರಿರುವುದರಿಂದ ಬತ್ತ ಹೊರತುಪಡಿಸಿ ಉಳಿದ ಬೆಳೆಗಳಿಗೆ ವಿಮೆ ಮೊತ್ತ ವಿತರಿಸಲಾಗುವುದು ಎಂದು ತಿಳಿಸಿದರು.
ಮುಂಗಾರು ಹಂಗಾಮಿನಲ್ಲಿ 11 ಲಕ್ಷ ಹೆಕ್ಟೇರ್ ಪ್ರದೇಶದ ರೈತರು ಬೆಳೆವಿಮೆಗೆ ನೋಂದಣಿ ಮಾಡಿಕೊಂಡಿದ್ದರು. ಮುಂಗಾರು ಉತ್ತಮವಾಗಿ ದ್ದರಿಂದ ಜುಲೈವರೆಗೆ ರೈತರು ಬೆಳೆವಿಮೆಗೆ ಉತ್ಸಾಹ ತೋರಿರಲಿಲ್ಲ. ಆದರೆ ಹಿಂಗಾರು ವೈಫಲ್ಯ ನಿರೀಕ್ಷೆಯಿದ್ದ ಕಾರಣ
26 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ 16.77 ಲಕ್ಷ ಹೆಕ್ಟೇರ್ ಪ್ರದೇಶದ ರೈತರು ಬೆಳೆವಿಮೆ ಮಾಡಿಸಿಕೊಂಡಿದ್ದಾರೆ. ಅಂದರೆ ಶೇ.65ರಷ್ಟು ಹೆಚ್ಚಳವಾಗಿರುವುದು ಕಾಣುತ್ತದೆ ಎಂದರು.