ಈಜಿಪುರ: 5 ಅಂತಸ್ತಿನ ಕಟ್ಟಡ ತೆರವು ಕಾರ್ಯಾಚರಣೆ ಆರಂಭ
Team Udayavani, Aug 16, 2017, 11:26 AM IST
ಬೆಂಗಳೂರು:ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ 5 ಅಂತಸ್ತಿನ ಕಟ್ಟಡವೊಂದು ಕುಸಿಯುವ ಹಂತದಲ್ಲಿದ್ದು, ಇದರಿಂದಾಗಿ ಆತಂಕಗೊಂಡ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಘಟನೆ ಬುಧವಾರ ನಗರದ ಈಜಿಪುರದಲ್ಲಿ ನಡೆದಿದೆ. ಮತ್ತೊಂದೆಡೆ ಮಧ್ಯಾಹ್ನದಿಂದ ಬಿಬಿಎಂಪಿ ಸಿಬ್ಬಂದಿಗಳು ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಬೆಳಗ್ಗೆಯಿಂದ ಕಟ್ಟಡ ಹಂತ, ಹಂತವಾಗಿ ವಾಲುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಭಾರೀ ಮಳೆಗೆ ಕಟ್ಟಡ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ನಿಜಕ್ಕೂ ಮಳೆಯಿಂದಾಗಿಯೇ ಕಟ್ಟಡ ಕುಸಿಯುತ್ತಿದೆಯೋ ಅಥವಾ ಕಳಪೆ ಕಾಮಗಾರಿಯಿಂದಾಗಿಯೋ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ಮಾಧ್ಯಮದ ವರದಿ ತಿಳಿಸಿದೆ.
ಮುನ್ನೆಚ್ಚರಿಕೆಯ ಅಂಗವಾಗಿ ಸ್ಥಳದಲ್ಲಿ ಅಗ್ನಿಶಾಮಕ ಹಾಗೂ ಬಿಬಿಎಂಪಿ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯವರು ಪಕ್ಕದ ನಿವಾಸಿಗಳನ್ನು ಸ್ಥಳಾಂತರಿಸಿದ್ದಾರೆ.
ಪಾಲಿಕೆಯಿಂದ ಕಟ್ಟಡ ಡೆಮಾಲಿಷನ್:
ಈಜಿಪುರದಲ್ಲಿ ವಾಲುತ್ತಿರುವ 5 ಅಂತಸ್ತಿನ ಕಟ್ಟಡ ಒಡೆಯುವ ಕಾರ್ಯ ಬುಧವಾರ ಮಧ್ಯಾಹ್ನದಿಂದ ಆರಂಭಗೊಂಡಿದೆ. ಬಿಬಿಎಂಪಿಯ ಸಿಬ್ಬಂದಿಗಳು ಕಟ್ಟಡ ಒಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸುರಕ್ಷತೆಯ ದೃಷ್ಟಿಯ ಹಿನ್ನೆಲೆಯಲ್ಲಿ ಅಕ್ಕ, ಪಕ್ಕ ಇರುವ ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.