ಬ್ರಾಹ್ಮಣ ಮಹಿಳೆಯ ಅಂತ್ಯಕ್ರಿಯೆಗೆ ನಾಸೀರ್ ಹುಸೇನ್ ನೆರವು
Team Udayavani, May 21, 2021, 6:22 AM IST
ಬೆಂಗಳೂರು: ತಮಿಳುನಾಡು ಮೂಲದ ಬ್ರಾಹ್ಮಣ ಸಮುದಾಯದ ಪ್ರೊ| ಸಾವಿತ್ರಿ ವಿಶ್ವನಾಥನ್ ಅವರು ಕೋವಿಡ್ನಿಂದ ಮೃತಪಟ್ಟಿದ್ದು, ಕುಟುಂಬದವರ್ಯಾರೂ ಇಲ್ಲದ ಕಾರಣ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಅವರು ಹಿಂದೂ ಸಂಪ್ರದಾಯ ಪ್ರಕಾರವೇ ಅಂತ್ಯಸಂಸ್ಕಾರಕ್ಕೆ ನೆರವಾಗಿ, ಅನಂತರದ ವಿಧಿ ವಿಧಾನವನ್ನೂ ನೆರವೇರಿಸಿದ್ದಾರೆ.
ತಮಿಳು ಬ್ರಾಹ್ಮಣ ಸಂಪ್ರದಾಯದ ಪ್ರಕಾರವೇ ಮೃತರ ಅಸ್ಥಿಯನ್ನು ಕಾವೇರಿ ನದಿಯಲ್ಲಿ ವಿಸರ್ಜಿಸುವ ಪ್ರಕ್ರಿಯೆಯನ್ನೂ ನಾಸೀರ್ ಹುಸೇನ್ ಅವರೇ ಮಾಡಿದ್ದಾರೆ.
ದಿಲ್ಲಿ ವಿವಿಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದ ಬಳಿಕ ಬೆಂಗಳೂರಿನಲ್ಲಿ ಸಹೋದರಿ ಮಹಾಲಕ್ಷಿ$¾à ಅತ್ರೇಯಿ ಅವರ ಜತೆ ವಾಸವಿದ್ದು, ಇಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಿಂದಲೂ ಡಾ| ಸಾವಿತ್ರಿ ಪರಿಚಿತರು. ಕೊರೊನಾದಿಂದ ಮೃತಪಟ್ಟಿದ್ದ ಅವರ ಅಂತ್ಯಸಂಸ್ಕಾರ ನಡೆಸಲು ಯಾರೂ ಬಾರದ ಕಾರಣ ನಾನೇ ಮಾಡಿದ್ದೇನೆ ಎಂದು ನಾಸೀರ್ ಹುಸೇನ್ ತಿಳಿಸಿದ್ದಾರೆ.