ನರೇಂದ್ರ ಮೋದಿಗೆ ಜವಾಹರಲಾಲ್ ನೆಹರೂ ಸಮಾನರಲ್ಲ: ಛಲವಾದಿ ನಾರಾಯಣಸ್ವಾಮಿ
Team Udayavani, May 27, 2022, 8:52 PM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಯಾವುದೇ ರೀತಿಯಲ್ಲಿಯೂ ಸಮಾನರಲ್ಲಾ ಎಂದು ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯಲ್ಲಿ ಮೋದಿಗೆ ನೆಹರೂ ಸಮಾನರಲ್ಲ. ಈ ಸತ್ಯವನ್ನು ಸಿದ್ದರಾಮಯ್ಯ ಬಹಳ ತಡವಾಗಿ ಅರ್ಥಮಾಡಿಕೊಂಡಿದ್ದಾರೆ. ಮೋದಿ ಕಾಲದ ಭಾರತ ಬೇರೆ, ನೆಹರೂ ಕಾಲದ ಭಾರತವೇ ಬೇರೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡಲು ಪ್ರಧಾನಿ ಮೋದಿ ಕಾರಣರಾಗಿದ್ದಾರೆ ಎಂದು ಹೇಳಿದರು.
ಆರ್ ಎಸ್ ಎಸ್ ನವರು ಈ ದೇಶದವರೇ ಅಲ್ಲ ಅಂದರೆ ಸಿದ್ದರಾಮಯ್ಯ ಯಾವ ದೇಶದವರು? ಸಿದ್ದರಾಮಯ್ಯ ಇತ್ತಿಚೆಗೆ ಮತಿ ಭ್ರಮಣೆ ಆದಂತೆ ಮಾತನಾಡುತ್ತಿದ್ದಾರೆ. ಅಧಿಕಾರ ಕಳೆದುಕೊಂಡ ಮೇಲೆ ಅವರಿಗೆ ಮತಿಭ್ರಮಣೆ ಆದಂತಿದೆ. ಸಿದ್ದರಾಮಯ್ಯಗೆ ದಲಿತರ ಮೇಲೆ ವಿಶ್ವಾಸವಿಲ್ಲ, ದಲಿತರನ್ನು ಕೇವಲವಾಗಿ ಮಾತನಾಡುತ್ತಾರೆ. ಆರ್ಎಸ್ಎಸ್ನ್ನು ದೇಶ ಬಿಟ್ಟು ಓಡಿಸಲು ಸಾಧ್ಯವಿದೆಯಾ ? ನಿಮ್ಮನ್ನು ರಾಜ್ಯ, ದೇಶಬಿಟ್ಟು ಓಡುವಂತೆ ದೇಶವಾಸಿಗಳು ಮಾಡಿದ್ದಾರೆ.
ಸಿದ್ದರಾಮಯ್ಯ ಸಣ್ಣತನದ ಮಾತುಗಳನ್ನು ಆಡುವುದನ್ನು ನಿಲ್ಲಿಸಿದರೆ ಅವರಿಗೆ ಗೌರವ ಬರುತ್ತದೆ ಎಂದು ಹೇಳಿದರು.