ಸೆ. 30ರೊಳಗೆ ಶಾಲಾ ದಾಖಲಾತಿ ಪೂರ್ಣಗೊಳಿಸಲು ಸೂಚನೆ
Team Udayavani, Sep 5, 2020, 10:27 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳು ಸೆ.30ರೊಳಗೆ ದಾಖಲಾತಿ ಪೂರ್ಣಗೊಳಿಸಬೇಕು. ಜತೆಗೆ ಖಾಸಗಿ ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳ ಕಲಿಕೆಯ ನಿರಂತರತೆ ಕಾಪಾಡಲು ವಿದ್ಯಾಗಮ, ಸಂವೇದನಾ ಅಥವಾ ತಮ್ಮದೇ ಆದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬಹುದು. ಆದರೆ, ಇದಕ್ಕಾಗಿ ಹೆಚ್ಚುವರಿ ಶುಲ್ಕವನ್ನು ಪಡೆಯುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳಿದೆ.
ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೆ.30 ರೊಳಗೆ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಕಳೆದ ವರ್ಷಕ್ಕಿಂತ ಹೆಚ್ಚಿನ ಶುಲ್ಕ ಪಡೆಯಬಾರದು. ಶುಲ್ಕವನ್ನು ಕಂತುಗಳ ರೂಪದಲ್ಲಿ ಪಾವತಿಸಲು ಅವಕಾಶ ನೀಡಬೇಕು ಮತ್ತು ಪಾವತಿಯಾದ ಶುಲ್ಕದಲ್ಲಿ ಆದ್ಯತೆ ಮೇರೆಗೆ ಸಂಸ್ಥೆಯ ಎಲ್ಲ ಬೋಧಕ, ಬೋಧಕೇತರ ಸಿಬಂದಿಗೆ ವೇತನ ಪಾವತಿಸಬೇಕೆಂದು ಇಲಾಖೆಯ ಆಯುಕ್ತರು ನಿರ್ದೇಶನ ನೀಡಿದ್ದಾರೆ.