ಇಂದಿರಾ ಕ್ಯಾಂಟೀನ್:ತಿಂಡಿ ಸೂಪರ್;ಊಟ ಚೆನ್ನಾಗಿಲ್ಲ!
Team Udayavani, Aug 17, 2017, 9:25 AM IST
ಬೆಂಗಳೂರು: ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಇಂದಿರಾ ಕ್ಯಾಂಟೀನ್ ಯೋಜನೆಗೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರಕಿದ್ದು, ಗುರುವಾರ ಗ್ರಾಹಕರು ಮುಗಿಬಿದ್ದಿದ್ದಾರೆ.
ನಗರದ 101 ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರ ಲಭ್ಯವಾಗಿದ್ದು, 6 ಅಡುಗೆ ಮನೆಗಳಿಂದ 101 ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆಮಾಡಲಾಗುತ್ತಿದೆ. ಪ್ರತಿ ಕ್ಯಾಂಟೀನ್ನಲ್ಲಿ ನಿತ್ಯ 1500 ಜನರಿಗೆ ಮೂರು ಹೊತ್ತು ಆಹಾರ ನೀಡಲು ಸರ್ಕಾರ ನಿರ್ಧರಿಸಿದೆ.
7.30 ರ ವೇಳೆಗೆ ಕ್ಯಾಂಟೀನ್ ತೆರೆದರೆ ಗ್ರಾಹಕರು 7 ಗಂಟೆಯ ವೇಳೆಗೆ ಆಗಮಿಸಿ ತಿಂಡಿಗಾಗಿ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಕನಕನಪಾಳ್ಯದಲ್ಲಿರುವ ಕ್ಯಾಂಟೀನ್ನಲ್ಲಿ 1 ಗಂಟೆಯವೊಳಗೆ ತಿಂಡಿ ಖಾಲಿಯಾಗಿ ಕೆಲ ಗ್ರಾಹಕರು ನಿರಾಸೆಯಾಗಿ ವಾಪಾಸ್ ಹೋಗಿರುವ ಬಗ್ಗೆ ವರದಿಯಾಗಿದೆ.
ತಿಂಡಿ ಸೂಪರ್ ಆಗಿದೆ ಆದ್ರೆ…
ತಿಂಡಿ ಸವಿದ ಗ್ರಾಹಕರು ತಿಂಡಿ ತುಂಬಾ ಚೆನ್ನಾಗಿದೆ ಆದರೆ ನೀಡುತ್ತಿರುವ ಪ್ರಮಾುಣ ಸಾಲುತ್ತಿಲ್ಲ ಎಂದಿದ್ದಾರೆ. 5 ರೂಪಾಯಿಗೆ 250 ಗ್ರಾಂ ತಿಂಡಿ ನೀಡಲಾಗುತ್ತಿದ್ದು ಇದು ಗ್ರಾಹಕರಿಕೆ ಕಡಿಮೆ ಎನಿಸಿದೆ.
ಊಟ ಅಷ್ಟು ಚೆನ್ನಾಗಿಲ್ಲ!
ಮಧ್ಯಾಹ್ನ 12.30 ಕ್ಕೆ ಬರಬೇಕಾದ ಊಟ ತಡವಾಗಿ ಬಂದ ಕಾರಣ ಕೆಲ ಗ್ರಾಹಕರು ಸರದಿಯ ಸಾಲಿನಲ್ಲಿ ಕಾಯಬೇಕಾಗಿ ಬಂತು. ಎಲ್ಲಾ ಕಡೆಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡು ಬಂದವು.
ಕನಕನ ಪಾಳ್ಯ ಕ್ಯಾಂಟೀನ್ನಲ್ಲಿ ಊಟ ಮಾಡಿದ ಬಳಿಕ ಗ್ರಾಹಕರ ಬಳಿ ಮಾಧ್ಯಮಗಳು ಕೇಳಿದಾಗ ‘ಊಟ ಚೆನ್ನಾಗಿಲ್ಲ, ಸಾರಿಗೆ ಒಂದೇ ತರಕಾರಿ ಹಾಕಿದ್ದಾರೆ.. ತುಂಬಾ ನೀರಾಗಿತ್ತು, ಅನ್ನ ಸರಿಯಾಗಿ ಬೆಂದಿಲ್ಲ..ಉಪ್ಪು ಇಲ್ಲ ಖಾರನೂ ಇಲ್ಲ ಮೊಸರನ್ನ ಹಳಸಿ ಹೋಗಿತ್ತು’ ಎಂದಿದ್ದಾರೆ.
ನಿರ್ವಾಹಕರು ಸಕಾಲಕ್ಕೆ ಊಟವನ್ನು ಜನರಿಗೆ ತಲುಪಿಸಬೇಕು ಎಂದು ಗ್ರಾಹಕರು ಕೇಳಿಕೊಂಡಿದ್ದಾರೆ.
ಬೆಳಗಿನ ತಿಂಡಿ 5 ರೂ., ಮಧ್ಯಾಹ್ನ ಮತ್ತು ರಾತ್ರಿಯ ಊಟ 10 ರೂ.ಗಳಿಗೆ ದೊರೆಯಲ್ಲಿದ್ದು ,ಹೀಗಾಗಿ ಗ್ರಾಹಕರು ಮುಗಿ ಬೀಳುವ ಸಾಧ್ಯತೆಗಳು ಹೆಚ್ಚಿವೆ.
ಬೆಳಗಿನ ಉಪಹಾರಕ್ಕೆ ಸೋಮವಾರದಿಂದ ಭಾನುವಾರದವರೆಗೆ ಇಡ್ಲಿಯ ಜತೆಗೆ ಕ್ರಮವಾಗಿ ಪುಳಿಯೋಗರೆ, ಖಾರಾಬಾತ್,ಪೊಂಗಲ್,ರವಾ ಕಿಚಡಿ,ಚಿತ್ರಾನ್ನ,ವಾಂಗಿಬಾತ್,ಖಾರಾಬಾತ್ ಮತ್ತು ಕೇಸರಿಬಾತ್ ದೊರೆಯಲಿದೆ. ಉಳಿದಂತೆ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಸಾಮಾನ್ಯವಾಗಿ ಅನ್ನ ಸಾಂಬಾರ್ ಹಾಗೂ ಮೊಸರನ್ನದೊಂದಿಗೆ ಕ್ರಮವಾಗಿ ಟೊಮೆಟೋಬಾತ್, ಚಿತ್ರಾನ್ನ, ವಾಂಗಿಬಾತ್, ಬಿಸಿಬೇಳೆಬಾತ್, ಮೆಂತ್ಯೆಪಲಾವ್, ಪುಳಿಯೋಗರೆ ಹಾಗೂ ದರ್ಶಿನಿ ಪಲಾವ್ ನೀಡಲಾಗುತ್ತಿದೆ.