ತಲೆ ಕೆಡಿಸಿದ ಪಬ್ ಜೀ; ಕಲ್ಲು ತೂರಿದ ಯುವಕ
Team Udayavani, Jan 22, 2020, 3:00 AM IST
ವಿಜಯಪುರ: ಪಬ್ಜೀ ಗೇಮ್ ವ್ಯಸನಿ ಯುವಕ ಮಾನಸಿಕ ಅಸ್ವಸ್ಥನಾಗಿ ಬೆತ್ತಲೆ ತಿರುಗುತ್ತ ಕಲ್ಲು ತೂರಾಟ ನಡೆಸಿ ಅವಾಂತರ ಸೃಷ್ಟಿಸಿದ ಘಟನೆ ವಿಜಯಪುರ ನಗರದಲ್ಲಿ ಮಂಗಳವಾರ ನಡೆದಿದೆ. ನಗರದ ಮನಗೂಳಿ ಅಗಸಿ ಬಳಿ ಪಬ್ಜೀ ಗೇಮ್ನಿಂದ ಮಾನಸಿಕ ಸಮತೋಲನ ಕಳೆದುಕೊಂಡ ಯುವಕ ಬೆತ್ತಲೆಯಾಗಿ ಓಡಾಡುತ್ತ ಕಲ್ಲು ತೂರಾಟ ಆರಂಭಿಸಿದ್ದ.
ಸ್ಥಳೀಯರು ಬೆದರಿಸಿದಾಗ ಮುಖ್ಯರಸ್ತೆಗೆ ಬಂದು ವಾಹನಗಳ ಮೇಲೆ ಕಲ್ಲು ಎಸೆಯಲಾರಂಭಿಸಿದ್ದರಿಂದ ಹಲವು ವಾಹನಗಳು ಜಖಂಗೊಂಡವು. ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು, ಬೈಕ್ ವಾಹನ ಸವಾರರು ಕಕ್ಕಾಬಿಕ್ಕಿಯಾದರು.ಬೆತ್ತಲೆ ಯುವಕನ ಉಪಟಳ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಹಗ್ಗದಿಂದ ಯುವಕನ ಕೈ-ಕಾಲು ಕಟ್ಟಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಜಲನಗರ ಠಾಣೆ ಪೊಲೀಸರು ಆ್ಯಂಬುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಯುವಕನ ಗುರುತು ಪತ್ತೆಯಾಗಿಲ್ಲ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ| ಶರಣಪ್ಪ ಕಟ್ಟಿ, ಮನೋರೋಗ ತಜ್ಞ ವೈದ್ಯರು ರಜೆ ಮೇಲಿದ್ದಾರೆ.
ಇರುವ ವೈದ್ಯರು ತುರ್ತು ಚಿಕಿತ್ಸೆ ನೀಡಿದ ಬಳಿಕ ಪಬ್ಜೀ ವ್ಯಸನಿ ಯುವಕ ಸ್ವಲ್ಪ ಚೇತರಿಸಿಕೊಂಡಿ ದ್ದಾನೆ. ಬುಧವಾರ ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಸ್ಥಳದಲ್ಲಿರುವ ಪೊಲೀಸರು ವ್ಯಸನಿ ಯುವಕನ ಪೂರ್ವಾಪರ ತಿಳಿಯಲು ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.