ನಿವೃತ್ತಿಗೆ 3 ತಾಸು ಮುನ್ನ ಅಮಾನತಿನ ಶಾಕ್!
Team Udayavani, Mar 9, 2019, 12:30 AM IST
ಬೆಂಗಳೂರು: ಇಡೀ ತಮ್ಮ ಸೇವಾ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿದ ಸಾರಿಗೆ ನಿಗಮದಅಧಿಕಾರಿಯೊ ಬ್ಬರ ನಿವೃತ್ತಿಯ ಕೊನೆಯ ಗಳಿಗೆಯಲ್ಲಿ ಸಿಕ್ಕಿದ್ದು “ಅಮಾನತು’ ಸರ್ಟಿಫಿಕೇಟ್!
ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸು ತ್ತಿರುವವರಿಗೆ ಇತ್ತೀಚಿನ ದಿನಗಳಲ್ಲಿ “ಎತ್ತಂಗಡಿ ಶಿಕ್ಷೆ’ ಕೂಡ ಮಾಮೂಲು ಆಗುತ್ತಿದೆ. ಇದು ಈಗ ಸಂಸ್ಥೆಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈಗ “ಪ್ರಾಮಾಣಿಕರಿಗೆ ಶಿಕ್ಷೆ’ಯ ಸ್ವರೂಪ ಗಂಭೀರವಾಗಿದ್ದು, ಬಿಎಂಟಿಸಿ ಮುಖ್ಯ ಯಾಂತ್ರಿಕ ಎಂಜಿನಿಯರ್ (ಸಿಎಂಇ) ಆಗಿದ್ದ ಗಂಗನಗೌಡರ ಎಂಬವರು ನಿವೃತ್ತಿ ದಿನವೇ ಅಮಾನತಿಗೆ ಗುರಿಯಾಗಿದ್ದಾರೆ.
ಗಂಗನಗೌಡರ ಅವರು ಕಳೆದ ಫೆ. 28ರಂದು ಸಂಜೆ 5ಕ್ಕೆ ನಿವೃತ್ತರಾಗುವವರಿದ್ದರು. ಆದರೆ ಕೇವಲ ಮೂರು ತಾಸು ಬಾಕಿ ಇರುವಾಗ ಅಂದರೆ ಮಧ್ಯಾಹ್ನ 2ರ ಸುಮಾರಿಗೆ “ಕಾರ್ಯಾಗಾರದಲ್ಲಿ ನಿರ್ವಹಣೆಗೆ ಮಾಸಿಕ 300ಕ್ಕೂ ಅಧಿಕ ಬಸ್ಗಳನ್ನು ನಿಲ್ಲಿಸಿಕೊಂಡಿದ್ದಾರೆ’ ಎಂಬ ಕಾರಣ ನೀಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಅಧಿಕಾರಿ ವರ್ಗವನ್ನು ಅಮಾನತುಗೊಳಿಸುವ ಅಧಿಕಾರ ಇರುವುದು ಕೆಎಸ್ಆರ್ಟಿಸಿ ಎಂಡಿಗೆ ಮಾತ್ರ) ಶಿವಯೋಗಿ ಕಳಸದ ಅಮಾನತು ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
“6,500 ಬಸ್ಗಳಿರುವ ಬಿಎಂಟಿಸಿಯಲ್ಲಿ ಮಾಸಿಕ ಸರಾಸರಿ 500 ಬಸ್ಗಳು ಕಾರ್ಯಾಗಾರಗಳಲ್ಲಿ ನಿರ್ವಹಣೆಗಾಗಿ ನಿಲುಗಡೆ ಆಗುವುದು ಸರ್ವೇ ಸಾಮಾನ್ಯ. ಅಷ್ಟಕ್ಕೂ ಇತ್ತೀಚೆಗೆ ಬಸ್ಗಳು ದುರಸ್ತಿಗೆ ಬರುವ ಪ್ರಮಾಣ ಕಡಿಮೆ ಆಗಿದೆ. ಪ್ರತಿ ಕಾರ್ಯಾ ಗಾರದಲ್ಲಿ 10ರಿಂದ 15 ಅಧಿಕಾರಿಗಳು ಇರುತ್ತಾರೆ. ಅವರೆಲ್ಲರೂ ಜವಾಬ್ದಾರರಾಗಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ 300 ಬಸ್ಗಳನ್ನು ನಿರ್ವಹಣೆಗೆ ನಿಲ್ಲಿಸಿಕೊಂಡಿದ್ದಾರೆ ಎಂಬ ಕಾರಣ ನೀಡಿರುವುದು ಮೇಲ್ನೋಟಕ್ಕೆ ಸಮಂಜಸವಾಗಿ ಕಾಣುತ್ತಿಲ್ಲ. ಇದು ಉದ್ದೇಶಪೂರ್ವಕವಾಗಿದ್ದು, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ,’ ಎಂಬ ಆರೋಪ ಬಿಎಂಟಿಸಿ ವಲಯದಲ್ಲಿ ಕೇಳಿಬರುತ್ತಿದೆ.
ಇದೊಂದೇ ಅಲ್ಲ, ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ವರಿಗೆ ಇತ್ತೀಚಿನ ದಿನಗಳಲ್ಲಿ “ಎತ್ತಂಗಡಿ ಶಿಕ್ಷೆ’ ಕೂಡ ಮಾಮೂಲು ಆಗುತ್ತಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. ಈ ಬಗ್ಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವ ರನ್ನು ಹಲವು ಬಾರಿ ಸಂಪರ್ಕಿಸಿದರೂ ಕರೆ ಸ್ವೀಕರಿಸಿಲ್ಲ.
ಎಲೆಕ್ಟ್ರಿಕ್ ಬಸ್ ಗುದ್ದಾಟ ಕಾರಣ?
ಎತ್ತಂಗಡಿ, ಅಮಾನತು ಸೇರಿದಂತೆ ಅಧಿಕಾರಿಗಳ ಮೇಲೆ ಬೀಸುತ್ತಿರುವ ಚಾಟಿಯ ಹಿಂದೆ “ಎಲೆಕ್ಟ್ರಿಕ್ ಬಸ್’ನ ಮುಸುಕಿನ ಗುದ್ದಾಟವೂ ಕೆಲಸ ಮಾಡಿದೆ ಎನ್ನಲಾಗಿದೆ. ಹಿಂದಿನ ಸರ್ಕಾರದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಲೀಸ್ ಮೂಲಕ ಪಡೆಯುವುದು ಸೂಕ್ತ ಎಂಬ ತೀರ್ಮಾನ ಕೈಗೊಳ್ಳಲಾಗಿತ್ತು. ಲೀಸ್ನಲ್ಲಿ ಪಡೆದರೆ, ಸಾಕಷ್ಟು ಉಳಿತಾಯ ಆಗುತ್ತದೆ ಎಂದು ಲೆಕ್ಕಾಚಾರಹಾಕಲಾಗಿತ್ತು. ಅಲ್ಲದೆ, ಟೆಂಡರ್ ಕೂಡ ಕರೆಯಲಾಗಿತ್ತು. ಆದರೆ, ಹೊಸ ಸರ್ಕಾರ ಬಂದ ನಂತರ ಇದನ್ನು ಕೈಬಿಟ್ಟು ಖರೀದಿಗೆ ಒತ್ತು ನೀಡಲಾಯಿತು. ಇದರಿಂದ ಸಂಸ್ಥೆಗೆ ಆರ್ಥಿಕ ಹೊರೆ ಆಗುತ್ತದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಈಹಿಂದೆಯೂ ಎಲೆಕ್ಟ್ರಿಕ್ ಬಸ್ಗಳ ಖರೀದಿಗೆ ಆ ಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿತ್ತು.
ವಿಜಯ್ ಕುಮಾರ್ ಚಂದರಗಿ