ಕೋವಿಡ್ ಹೆಚ್ಚಳ: ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರು ಈ ನಿಯಮಗಳನ್ನು ಪಾಲಿಸಲೇಬೇಕು!
Team Udayavani, Jul 31, 2021, 2:02 PM IST
ಬೆಂಗಳೂರು: ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ.
ಈ ಎರಡು ರಾಜ್ಯಗಳಿಂದ ಕರ್ನಾಟಕಕ್ಕೆ ವಿಮಾನ, ರೈಲು, ಬಸ್, ಖಾಸಗಿ ವಾಹನಗಳಲ್ಲಿ ಪ್ರವೇಶ ಮಾಡುವ ಪ್ರಯಾಣಿಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಕೇರಳ ಮತ್ತು ಮಹಾರಾಷ್ಟ್ರಗಳಿಂದ ರಾಜ್ಯಕ್ಕೆ ಬರುವವರು ಎರಡು ಡೋಸ್ ಲಸಿಕೆ ಪಡೆದಿದ್ದರೂ ಸಹ 72 ಗಂಟೆಗಳ ಒಳಗೆ ಮಾಡಿಸಿರುವ ಆರ್ ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು. ವಿಮಾನ, ರೈಲು, ಬಸ್, ಖಾಸಗಿ ವಾಹನಗಳಲ್ಲಿ ಕರ್ನಾಟಕಕ್ಕೆ ಪ್ರವೇಶಿಸುವ ಎಲ್ಲರಿಗೂ ಇದು ಅನ್ವಯವಾಗುತ್ತದೆ.
ಇದನ್ನೂ ಓದಿ:ಸತತ 4ನೇ ದಿನವೂ ಹೆಚ್ಚಳ; ಭಾರತದಲ್ಲಿ ಕಳೆದ 24ಗಂಟೆಯಲ್ಲಿ 41,649 ಕೋವಿಡ್ ಪ್ರಕರಣ ಪತ್ತೆ
ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ವಿಮಾನ ಯಾನ ಸಂಸ್ಥೆಯವರು ಬೋರ್ಡಿಂಗ್ ಪಾಸ್ ನೀಡಬೇಕು. ಬಸ್ ನಲ್ಲಿ ಬಸ್ ನಿರ್ವಾಹಕರು, ರೈಲುಗಳಲ್ಲಿ ರೈಲ್ವೇ ಪ್ರಾಧಿಕಾರ ಈ ಬಗ್ಗೆ ಜವಾಬ್ದಾರಿ ಹೊರಬೇಕು ಎಂದು ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿದೆ.
ಕೇರಳದಿಂದ ಕರ್ನಾಟಕಕ್ಕೆ ವಿದ್ಯಾಭ್ಯಾಸ, ಕಚೇರಿ ಕೆಸಲ, ವ್ಯಾಪಾರ ಸೇರಿದಂತೆ ದಿನನಿತ್ಯ ಓಡಾಡುವವರು ಪ್ರತಿ 15 ದಿನಗಳಿಗೊಮ್ಮೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಹೊಂದಬೇಕಾಗಿದೆ.