ದೇಗುಲಗಳಲ್ಲಿ ಸರಣಿ ಕಳವು
Team Udayavani, Aug 27, 2019, 3:00 AM IST
ಮೇಲುಕೋಟೆ: ಮೇಲುಕೋಟೆಯಲ್ಲಿ ಭಾನು ವಾರ ರಾತ್ರಿ ಮೂರು ದೇವಾಲಯಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ರಾತ್ರಿ ವೇಳೆ ದೇವಾಲಯದ ಬಾಗಿಲುಗಳ ಚಿಲಕ ಮುರಿದು ಒಳನುಗ್ಗಿರುವ ಕಳ್ಳರು ಶ್ರೀ ಕಾಳಮ್ಮ ದೇವಾಲಯದ ಮೂರು ಚಿನ್ನದ ತಾಳಿ, ಶ್ರೀ ಶನೇಶ್ವರ ಸ್ವಾಮಿ ದೇಗುಲದಲ್ಲಿ 60 ಸಾವಿರ ರೂ.ನಗದು ಹಾಗೂ ಎರಡೂ ದೇಗುಲಗಳ ಹುಂಡಿ ಹಣ ಕದ್ದೊಯ್ದಿದ್ದಾರೆ. ಇದೇ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನೂ ಕಳವು ಮಾಡಿದ್ದಾರೆ.
ಪ್ರಮುಖ ರಸ್ತೆಯ ಪೊಲೀಸ್ ವಸತಿಗೃಹ ಪಕ್ಕದಲ್ಲೇ ಇರುವ ಶ್ರೀ ಕಾಳಮ್ಮ, ಶ್ರೀ ಮುಕ್ತಿನಾಥ ಹಾಗೂ ಶ್ರೀ ಶನೇಶ್ವರ ದೇವಾಲಯಗಳ ಬೀಗ ಒಡೆದಿರುವ ಕಳ್ಳರು ಹುಂಡಿ ಹಣ ಹಾಗೂ ಸಣ್ಣಪುಟ್ಟ ಒಡವೆ ದೋಚಿದ್ದಾರೆ. ಕಡೆಯ ಶ್ರಾವಣ ಶನಿವಾರದಂದು ದೇವಾಲಯಗಳಿಗೆ ಹೆಚ್ಚಿನ ಭಕ್ತರು ಬಂದಿದ್ದನ್ನೇ ಗುರಿಯಾಗಿಸಿಕೊಂಡು, ಮೂರು ದೇಗುಲಗಳ ಹುಂಡಿ ದೋಚಿದ್ದಾರೆ. ಹುಂಡಿಯಲ್ಲಿ ನೋಟುಗಳನ್ನು ಮಾತ್ರ ಕದ್ದೊಯ್ದಿರುವ ಕಳ್ಳರು ಚಿಲ್ಲರೆಗಳನ್ನು ಪಕ್ಕದಲ್ಲೇ ಬಿಸಾಡಿದ್ದಾರೆ.