ಶ್ರೀನಿವಾಸ್ ಪ್ರಸಾದ್ ಗೆ ರಾಜ್ಯ BJP ಉಪಾಧ್ಯಕ್ಷ ಪಟ್ಟ; BSY ತಂತ್ರ
Team Udayavani, May 2, 2017, 4:33 PM IST
ಬೆಂಗಳೂರು/ರಾಯಚೂರು: ಬಿಜೆಪಿ ಹೈಕಮಾಂಡ್ ಗೆ ಸೆಡ್ಡು ಹೊಡೆದು ರಾಯಚೂರಿನಲ್ಲಿ ರಾಯಣ್ಣ ಬ್ರಿಗೇಡ್ ಚಟುವಟಿಕೆಯನ್ನು ವಿಪಕ್ಷ ಮುಖಂಡ ಕೆಎಸ್ ಈಶ್ವರಪ್ಪ ಮುಂದುವರಿಸಿದ್ದರೆ, ಮತ್ತೊಂದೆಡೆ ಇತ್ತೀಚೆಗಷ್ಟೇ ನಂಜನಗೂಡು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಬಿಎಸ್ ಯಡಿಯೂರಪ್ಪ ಅವರು ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ.
ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ತಂತ್ರಗಾರಿಕೆ ಹೆಣೆದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಅವರು, ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ದಲಿತ ನಾಯಕನಿಗೆ ಪಟ್ಟ ಕಟ್ಟುವ ಮೂಲಕ ಬಿಎಸ್ ಯಡಿಯೂರಪ್ಪನವರು, ರಾಯಣ್ಣ ಬ್ರಿಗೇಡ್ ಚಟುವಟಿಕೆಗೆ ತಡೆ ಮೂಗುದಾರ ಹಾಕಲು ಮುಂದಾಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್ ಚಟುವಟಿಕೆ ಮುಂದುವರಿಸುವುದಾಗಲಿ, ಪಕ್ಷ ವಿರೋಧಿ ಹೇಳಿಕೆ ನೀಡಬಾರದು ಎಂದು ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಹೈಕಮಾಂಡ್ ಸೂಚನೆ ಸೆಡ್ಡು ಹೊಡೆದು ಈಶ್ವರಪ್ಪ ಇಂದು ಬ್ರಿಗೇಡ್ ಸಭೆ ನಡೆಸಿದ್ದಾರೆ.