ಪಾಕಿಸ್ಥಾನ ವಿರುದ್ಧ ಭಾರತ ತೀವ್ರ ವಾಗ್ಧಾಳಿ
Team Udayavani, Mar 5, 2023, 7:54 AM IST
ಜಿನಿವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಯುಎನ್ಎಚ್ಆರ್ಸಿ) ಘೋಷಿಸಿರುವ ಉಗ್ರರು ಹಾಗೂ ಉಗ್ರ ಸಂಘಟನೆಗಳನ್ನು ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ಬೆಳೆಸಿ, ಪೋಷಿಸಿದ ಅಪಕೀರ್ತಿ ಪಾಕಿಸ್ಥಾನದ ಮೇಲಿದೆ ಎಂದು ಭಾರತ ತೀವ್ರ ವಾಗ್ಧಾಳಿ ನಡೆಸಿತು.
ಸ್ವಿಜರ್ಲೆಂಡ್ನ ಜಿನಿವಾದಲ್ಲಿ ನಡೆಯುತ್ತಿರುವ ಯುಎನ್ಎಚ್ಆರ್ಸಿ 52ನೇ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಕಾರ್ಯದರ್ಶಿ ಸೀಮಾ ಪೂಜನಿ, “ಉಗ್ರ ಒಸಾಮ ಬಿನ್ ಲಾಡೆನ್ ಪಾಕಿಸ್ಥಾನ ಮಿಲಿಟರಿ ಅಕಾಡೆಮಿ ಪಕ್ಕದಲ್ಲೇ ವಾಸಿಸುತ್ತಿದ್ದ. ದಶಕಗಳಿಂದ ಉಗ್ರರಾದ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ನನ್ನು ಪಾಕಿಸ್ಥಾನ ಸೇನೆ ಪೋಷಿಸಿ, ನೆಲೆ ಒದಗಿಸುತ್ತಿದೆ,’ ಎಂದು ದೂರಿದರು.
“ಇದು ಕೇವಲ ಉದಾಹರಣೆಯಷ್ಟೇ. ಈ ರೀತಿ ನೂರಾರು ಉಗ್ರರನ್ನು ಪಾಕ್ ಪೋಷಿಸುತ್ತಿದೆ. ಜಗತ್ತಿನಾದ್ಯಂತ ಸಾವಿರಾರು ನಾಗರಿಕರ ಬಲಿಗೆ ಪಾಕಿಸ್ಥಾನದ ನೀತಿಗಳು ನೇರವಾಗಿ ಜವಾಬ್ದಾರಿಯಾಗಿದೆ,’ ಎಂದು ಹೇಳಿದರು.
ಇದೇ ವೇಳೆ ಸಭೆಯಲ್ಲಿ ಅನವಶ್ಯಕವಾಗಿ ಜಮ್ಮು ಮತ್ತು ಕಾಶ್ಮೀರದ ವಿಷಯ ಪ್ರಸ್ತಾಪಿಸಿದ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ-ಆಪರೇಶನ್(ಒಇಸಿ) ವಿರುದ್ಧ ಭಾರತ ಕಿಡಿಕಾರಿತು. “ಜಮ್ಮು ಮತ್ತು ಕಾಶ್ಮೀರವು ಸದಾ ಭಾರತದ ಭಾಗವಾಗಿ ಉಳಿಯಲಿದೆ. ಭಾರತದ ವಿರುದ್ಧ ಪಾಕಿಸ್ಥಾನದ ಹೀನ ಅಜೆಂಡಾಗೆ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಒಇಸಿ ಅವಕಾಶ ಮಾಡಿಕೊಟ್ಟಿದೆ,’ ಎಂದು ಸೀಮಾ ಪೂಜನಿ ಅಸಮಾಧಾನ ವ್ಯಕ್ತಪಡಿಸಿದರು.