ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದವರನ್ನು ಬಿಜೆಪಿ ರಕ್ಷಿಸುವುದಿಲ್ಲ: ಗೋವಾದಲ್ಲಿ ಸಿ.ಟಿ.ರವಿ
ಗೋವಾದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟವಾಗಿತ್ತು, ಆದರೆ...
Team Udayavani, May 5, 2022, 4:53 PM IST
ಪಣಜಿ: ಗೋವಾದ ಜನತೆಗೆ ಉತ್ತಮ ಆಡಳಿತ ನೀಡುವುದು ನಮ್ಮ ಉದ್ದೇಶ. ಹೀಗಾಗಿ ಆರು ತಿಂಗಳ ನಂತರ ರಾಜ್ಯದ ಪ್ರತಿ ಸಚಿವರು ಹಾಗೂ ಸರ್ಕಾರದ ರಿಪೋರ್ಟ್ ಕಾರ್ಡ್ ಸಿದ್ಧಪಡಿಸಲಾಗುವುದು. ಇಷ್ಟೇ ಅಲ್ಲದೆ ಅಧಿಕಾರದಲ್ಲಿದ್ದಾಗ ಯಾರಾದರೂ ತಪ್ಪು ಮಾಡಿದರೆ ಅವರನ್ನು ರಕ್ಷಿಸುವುದಿಲ್ಲ ಎಂದು ಗೋವಾ ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕಷ್ಟವಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರದ ಮೇಲೆ ಜನತೆ ಇಟ್ಟಿರುವ ನಂಬಿಕೆಯಿಂದಾಗಿ ಗೆಲುವು ಸಾಧಿಸಿತು. ಸ್ವಹಿತಾಸಕ್ತಿಗಿಂತ ಜನಕಲ್ಯಾಣವೇ ಮುಖ್ಯವಾಗಿದ್ದು ಸಚಿವರು ಕೂಡ ಅದರಂತೆಯೇ ನಡೆದುಕೊಳ್ಳಬೇಕು. ಯಾರಾದರೂ ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದರೆ ಪಕ್ಷ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೆಲವರು ಜನಾಂಗೀಯ ಮತ್ತು ಧಾರ್ಮಿಕ ಸಾಮರಸ್ಯವನ್ನು ಕದಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಗೋವಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು ಅದನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಲಿದೆ. ಗೋವಾವನ್ನು ಬಲಪಡಿಸುವುದರೊಂದಿಗೆ ರಾಷ್ಟ್ರವನ್ನು ಬಲಪಡಿಸಲು ಪ್ರಯತ್ನಿಸುತ್ತೇವೆ ಎಂದರು.
ಸಿಟಿ ರವಿ ಸಚಿವರು ಮತ್ತು ಶಾಸಕರೊಂದಿಗೆ ಆಳವಾದ ಚರ್ಚೆ ನಡೆಸಿದರು. ಬಳಿಕ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಂಚಾಲನಾ ಸಮಿತಿ ಸಭೆ ನಡೆಯಿತು.