ಗುಡಿಸಲಿನಿಂದ ಅರಮನೆಗೆ ಬಂದ ಕಾವೇರಿ
Team Udayavani, Sep 15, 2018, 2:47 PM IST
ಸಣ್ಣ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡ ಕಾವೇರಿ ಅಜ್ಜಿಯೊಂದಿಗೆ ವಾಸವಿರುತ್ತಾಳೆ. ಅಜ್ಜಿಯ ಪ್ರತಿಯೊಂದು ಕೆಲಸದಲ್ಲೂ ಸಹಾಯ ಮಾಡುತ್ತಿದ್ದ ಕಾವೇರಿ ಒಂದು ದಿನ ಕಟ್ಟಿಗೆ ತರಲೆಂದು ಸ್ನೇಹಿತರೊಂದಿಗೆ ಕಾಡಿಗೆ ಹೋಗುತ್ತಾಳೆ. ಆದರೆ ಅಲ್ಲಿ ಸ್ನೇಹಿತರಿಂದ ದೂರವಾದ ಕಾವೇರಿ, ಗಾಯಗೊಂಡ ವ್ಯಕ್ತಿಯೊಬ್ಬನನ್ನು ನೋಡುತ್ತಾಳೆ, ಮುಂದೆ ಅವಳ ಬದುಕೇ ಬದಲಾಗುತ್ತದೆ ಹೇಗೆ ಗೊತ್ತೇ…?
ಒಂದು ಊರಿನಲ್ಲಿ ಒಬ್ಬಳು ಅಜ್ಜಿ ಮೊಮ್ಮಗಳೊಂದಿಗೆ ವಾಸವಾಗಿದ್ದಳು. ಬಹಳ ತುಂಟಿ ಮತ್ತು ಚತುರೆಯಾಗಿದ್ದ ಮೊಮ್ಮಗಳಿಗೆ ಕಾವೇರಿ ಎಂಬುದಾಗಿ ಹೆಸರಿಟ್ಟಿದ್ದಳು. ಬಾಲ್ಯದಲ್ಲೇ ಅಪ್ಪ, ಅಮ್ಮನನ್ನು ಕಳೆದುಕೊಂಡಿದ್ದ ಕಾವೇರಿಗೆ ಅಜ್ಜಿಯೇ ಸರ್ವಸ್ವವಾಗಿದ್ದಳು. ಹೀಗಾಗಿ ಬೆಳಗಾದರೆ ಸಾಕು ಅಜ್ಜಿಯೊಂದಿಗೆ ನೂರಾರು ಪ್ರಶ್ನೆಗಳನ್ನು ಕೇಳುತ್ತಾ ಅಜ್ಜಿಯ ಪ್ರತಿ ಕೆಲಸದಲ್ಲೂ ಸಹಾಯ ಮಾಡುತ್ತಿದ್ದಳು.
ಅಜ್ಜಿ ಮನೆ ಕೆಲಸವನ್ನೆಲ್ಲ ಮುಗಿಸಿ ಅರಮನೆಗೆ ಹೋಗಿ ರಾಣಿಯ ಸೇವೆ ಮಾಡುತ್ತಿದ್ದಳು. ಬರುವಾಗ ಕಾವೇರಿಗಾಗಿ ರಾಣಿ ಕೊಟ್ಟ ಉಡುಗೊರೆಗಳನ್ನು ತರುತ್ತಿದ್ದಳು. ಅಜ್ಜಿ ಪ್ರತಿದಿನವೂ ರಾತ್ರಿ ಮಲಗುವಾಗ ರಾಣಿಯ ಕಥೆ ಹೇಳುತ್ತಿದ್ದಳು. ಹೀಗಾಗಿ ಕಾವೇರಿಯ ಮನದಲ್ಲಿ ತಾನು ಮುಂದೊಂದು ದಿನ ರಾಣಿಯಾಗಬೇಕು ಎಂಬ ಕನಸು ನಿಧಾನವಾಗಿ ಬೆಳೆಯಲಾರಂಭಿಸಿತು.
ಒಂದು ದಿನ ಅಜ್ಜಿ ಅರಮನೆಗೆ ಕೆಲಸಕ್ಕೆ ಹೋದಾಗ ಕಾವೇರಿ ತನ್ನ ಸ್ನೇಹಿತರೊಂದಿಗೆ ಕಟ್ಟಿಗೆ ತರಲೆಂದು ಹತ್ತಿರದಲ್ಲೇ ಇದ್ದ ಕಾಡಿಗೆ ಹೋದಳು. ಕಾಡಿನಲ್ಲಿ ಒಂದಷ್ಟು ಕಟ್ಟಿಗೆಯನ್ನು ಸಂಗ್ರಹಿಸಿ ಕಾಡಿನಲ್ಲಿದ್ದ ಗಿಡ, ಮರ, ಪ್ರಾಣಿಗಳನ್ನು ವೀಕ್ಷಿಸಲು ಹೊರಟರು. ಹೀಗೆ ಹೋದಾಗ ಕಾವೇರಿ ಸ್ನೇಹಿತರಿಂದ ದೂರವಾಗಿ ದಿಕ್ಕು ತಪ್ಪಿದಳು. ರಾತ್ರಿಯಾಗುತ್ತ ಬಂದಾಗ ಸ್ನೇಹಿತರೆಲ್ಲ ಕಾವೇರಿ ಮನೆಗೆ ಹೋಗಿರಬಹುದು ಎಂದು ಭಾವಿಸಿ ಊರಿನತ್ತ ಹಿಂತಿರುಗಿದರು.
ಕಾವೇರಿಗೆ ಕಾಡಿನಲ್ಲಿ ದಾರಿ ಹುಡುಕುವುದು ಹೇಗೆ ಎಂಬ ಚಿಂತೆಯಲ್ಲಿದ್ದಾಗ ವ್ಯಕ್ತಿಯೊಬ್ಬ ನರಳುತ್ತಿರುವ ಶಬ್ದ ಕೇಳಿಸಿತು. ಕಾವೇರಿ ಅತ್ತಿತ್ತ ಹುಡುಕಾಡಿದಾಗ ವ್ಯಕ್ತಿಯೊಬ್ಬ ಗಾಯಗೊಂಡು ಬಿದ್ದಿರುವುದು ಗಮನಕ್ಕೆ ಬಂತು. ಆತನ ಬಳಿಗೆ ತೆರಳಿ ತನ್ನಲ್ಲಿದ್ದ ನೀರನ್ನು ಕುಡಿಸಿ, ಆತನ ಗಾಯಗಳಿಗೆ ಅಜ್ಜಿಯಿಂದ ಕೇಳಿ ತಿಳಿದು ಕೊಂಡಿದ್ದ ಔಷಧವನ್ನು ಹಚ್ಚಿ ಆತನ ಜತೆಯೇ ಕುಳಿತಳು. ಬೆಳಗಾಗುವಷ್ಟರಲ್ಲಿ ಆತನಿಗೆ ಎಚ್ಚರವಾಯಿತು. ತನ್ನ ಬಳಿ ಹುಡುಗಿಯೊಬ್ಬಳು ಕಳಿತಿರುವುದು ಕಂಡು ಅಚ್ಚರಿಯಾಯಿತು. ಆಕೆಯನ್ನು ಎಬ್ಬಿಸಿ ಆಕೆಯ ಬಗ್ಗೆ ವಿಚಾರಿಸಿದ. ಅವಳು ತಾನು ಸ್ನೇಹಿತರೊಂದಿಗೆ ಕಾಡಿಗೆ ಬಂದು ದಾರಿ ತಪ್ಪಿರುವುದಾಗಿ ಹೇಳಿದಳು. ಆಕೆ ತನ್ನ ಊರಿನ ಬಗ್ಗೆ, ಅಜ್ಜಿಯ ಬಗ್ಗೆಯೂ ಹೇಳಿದಳು. ಆದರೆ ಆಕೆಗೆ ತನ್ನ ಊರಿನ ಹೆಸರು ಗೊತ್ತಿರಲಿಲ್ಲ. ಆಕೆ ಆತನ ಬಗ್ಗೆ ವಿಚಾರಿಸಿದಾಗ ಅವನು ಒಂದು ಮಗದ ರಾಜ್ಯದ ದೊರೆ ವಿಶ್ವನಾಥನಾಗಿದ್ದ. ಅವನು ಕಾಡಿನಲ್ಲಿ ಬೇಟೆಗಾಗಿ ಬಂದಿದ್ದಾಗ ಪ್ರಾಣಿ ಯೊಂದು ದಾಳಿ ಮಾಡಿ ಗಾಯಗೊಳಿಸಿತ್ತು. ಹೀಗಾಗಿ ತಾನು ಪ್ರಜ್ಞೆ ಕಳೆದು ಬಿದ್ದಿರುವುದಾಗಿ ತಿಳಿಸಿದ.
ಮಕ್ಕಳಿಲ್ಲದ ವಿಶ್ವನಾಥ,ಕಾವೇರಿಯನ್ನು ತನ್ನೊಂದಿಗೆ ಅರಮನೆಗೆ ಕರೆದುಕೊಂಡು ಬಂದ. ಪತ್ನಿ ಮೈನಾವತಿಗೆ ನಡೆದ ಸಂಗತಿಯನ್ನೆಲ್ಲ ತಿಳಿಸಿದ. ಮೈನಾವತಿಗೂ ಕಾವೇರಿ ಯನ್ನು ಕಂಡು ತುಂಬಾ ಖುಷಿಯಾಯಿತು. ಆಕೆಯೂ ಕಾವೇರಿಯನ್ನು ತನ್ನ ಮಗಳಂತೆ ನೋಡಿಕೊಂಡಳು. ಹೀಗಾಗಿ ಅರಮನೆಯಲ್ಲಿ ರಾಜಕುಮಾರಿಯ ಜೀವನ ಕಾವೇರಿಯದ್ದಾಗಿತ್ತು. ವಿಶ್ವನಾಥ ಮತ್ತು ಮೈನಾವತಿಗೆ ದೇವರೇ ತಮಗೆ ಕಾವೇರಿಯಂಥ ಮಗಳನ್ನು ಕರುಣಿಸಿದ್ದಾರೆ ಎಂದೆನಿಸಿಕೊಂಡು ಆಕೆಯನ್ನು ಸಾಕಿದರು. ಬೆಳೆದು ದೊಡ್ಡ ವಳಾದ ಕಾವೇರಿಯ ಸೌಂದರ್ಯಕ್ಕೆ ಮನ ಸೋತ ರಾಜಕುಮಾರ ಚಂದ್ರ, ಆಕೆಯನ್ನು ಮದುವೆಯಾಗುವ ಪ್ರಸ್ತಾವವನ್ನು ವಿಶ್ವನಾಥ ಮತ್ತು ಮೈನಾವತಿಯವರೆದುರು ಇಡುತ್ತಾನೆ. ಅವರಿಗೂ ತುಂಬಾ ಖುಷಿಯಾಗುತ್ತದೆ. ರಾಜಕುಮಾರನನ್ನು ಪರಿವಾರ ಸಮೇತ ಅರಮನೆಗೆ ಬರಲು ಹೇಳುತ್ತಾರೆ.
ರಾಜಕುಮಾರ ತನ್ನ ಕುಟುಂಬದವರೊಂದಿಗೆ ಅರಮನೆಗೆ ಬರುತ್ತಾರೆ. ಮದುವೆಯ ಸಿದ್ಧತೆಗಳು ಪ್ರಾರಂಭಗೊಳ್ಳುತ್ತದೆ. ರಾಜಕುಮಾರ ಚಂದ್ರ, ಆತನ ಹೆತ್ತವರಾದ ರಾಣಿ ಗೌರಿ ಮತ್ತು ರಾಜ ಜಯಚಂದ್ರ ರಾಜಕುಮಾರಿ ಕಾವೇರಿಯ ಬಳಿ ಬರುತ್ತಾರೆ. ಕಾವೇರಿಗೆ ಸಾಕಷ್ಟು ಒಡವೆ, ವಸ್ತ್ರಗಳನ್ನು ಕೊಡುತ್ತಾರೆ. ಜತೆಗೆ ಒಂದು ವಿಶೇಷವಾದ ಬಿಳಿ ಹೂವನ್ನು ನೀಡುತ್ತಾರೆ. ಆ ಹಣ್ಣು ನೋಡಿದ ರಾಜಕುಮಾರಿ ಆ ಹೂವು ಎಲ್ಲಿಂದ ಬಂತು ಹೇಗೆ ಬಂತು ಎಂದು ವಿಚಾರಿಸುತ್ತಾಳೆ. ಆಗ ರಾಣಿ ಅದನ್ನು ನನ್ನ ನೆಚ್ಚಿನ ಸೇವಕಿ ಪ್ರತಿ ನಿತ್ಯ ತಂದು ಕೊಡುವ ಹೂವು ಎನ್ನುತ್ತಾಳೆ. ಕೂಡಲೇ ರಾಜಕುಮಾರಿ ಆಕೆ ಯನ್ನು ನೋಡುವ ಇಂಗಿತ ವ್ಯಕ್ತಪಡಿಸುತ್ತಾಳೆ. ಯಾಕೆ ಎಂದು ಕೇಳಿದಾಗ, ಇದು ನಮ್ಮ ಮನೆಯಂಗಳದಲ್ಲಿ ಬೆಳೆಯುತ್ತಿದ್ದ ಹೂವು. ತನ್ನ ಅಜ್ಜಿ ನಿತ್ಯವೂ ಅದನ್ನು ತಾನು ಕೆಲಸಕ್ಕೆ ಹೋಗುತ್ತಿದ್ದ ಅರಮನೆಯ ರಾಣಿಗೆ ಕೊಂಡೊಯ್ಯುತ್ತಿದ್ದಳು ಎನ್ನುತ್ತಾಳೆ.
ಆಗ ರಾಣಿ ಕೂಡಲೇ ಆಕೆಯನ್ನು ಕರೆಸುತ್ತಾಳೆ. ಬಾಗಿದ ಬೆನ್ನು, ಸರಿಯಾಗಿ ಕಣ್ಣು ಕಾಣದ ಮುದುಕಿಯೊಬ್ಬಳು ರಾಜಕುಮಾರಿಯ ಕೋಣೆಯೊಳಗೆ ಬರುತ್ತಾಳೆ. ಅವಳನ್ನು ನೋಡಿದ ಕಾವೇರಿಗೆ ಕೂಡಲೇ ತನ್ನ ಅಜ್ಜಿ ಎಂದು ತಿಳಿಯುತ್ತದೆ. ಅಜ್ಜಿಯ ಹತ್ತಿರ ಹೋಗಿ ಕೈ ನೇವರಿಸುತ್ತಾಳೆ. ಅಜ್ಜಿಯೂ ಆಕೆಯನ್ನು ಗುರುತಿಸುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ರಾಜ ವಿಶ್ವನಾಥ ಮತ್ತು ಮೈನಾವತಿ ಅಜ್ಜಿಯ ಕಾಲಿಗೆರಗಿ ನಮಸ್ಕರಿಸುತ್ತಾರೆ. ನಡೆದ ಸಂಗತಿಯನ್ನೆಲ್ಲ ವಿವರಿಸುತ್ತಾರೆ. ಅಜ್ಜಿಗೆ ಕಾವೇರಿಯ ಬಗ್ಗೆ ಹೆಮ್ಮೆಯಾಗುತ್ತದೆ. ಆಕೆಯೇ ಮುಂದೆ ನಿಂತು ಮದುವೆ ಕಾರ್ಯಗಳನ್ನು ನೆರವೇರಿಸಿಕೊಡುತ್ತಾಳೆ. ತನ್ನ ಮೊಮ್ಮಗಳು ತನ್ನ ರಾಜ್ಯದ ಭಾವೀ ರಾಜನ ಪತ್ನಿಯಾಗಿ ಬಂದಿರುವುದಕ್ಕೆ ಖುಷಿ ಪಡುತ್ತಾಳೆ. ತನ್ನೂರಿಗೆ ಬಂದ ಕಾವೇರಿ, ಅಜ್ಜಿಯನ್ನೂ ತನ್ನ ಅರಮನೆಯಲ್ಲೇ ಉಳಿಸಿಕೊಳ್ಳುತ್ತಾಳೆ.
ವಿದ್ಯಾ ಕೆ. ಇರ್ವತ್ತೂರು