ಅಕ್ಷರಗಳಿಂದ ಉತ್ತರ ಕೊಟ್ಟ ಜೈಲ್ ಡೈರಿ
Team Udayavani, Sep 5, 2018, 2:43 PM IST
ಭಾರತದಲ್ಲಿ ಇಪ್ಪತ್ತನೇಯ ಶತಮಾನದಲ್ಲಿ ವಿಸ್ಮಯವನ್ನುಂಟು ಮಾಡಿದ ಧೀರೋದಾತ್ತ ವ್ಯಕ್ತಿಗಳಲ್ಲಿ ಒಬ್ಬರು ಭಗತ್ಸಿಂಗ್. ಇವರು ಯೋಚಿಸುತ್ತಿದ್ದ ವಿಷಯಗಳ ವೈಶಾಲ್ಯ ಮತ್ತು ಮನದ ತುಡಿತವು ನಮಗೆ ಇಂದಿಗೂ ದಾರಿದೀಪವಾಗಿವೆ. ಲಾಹೋರಿನ ಕಾರಾಗೃಹದಲ್ಲಿ ಬಂಧಿಯಾಗಿದ್ದಾಗ ಇವರು ಬರೆದ ಡೈರಿಯನ್ನು ನಮಗೆ ಲಭ್ಯವಾಗುವಂತೆ ಮಾಡಿದ್ದಾರೆ ಡಾ| ಅನುಪಮಾ. ಇವರು ಭಗತ್ಸಿಂಗ್ನ ದಿನಚರಿಯನ್ನು ಅನುವಾದ ಮಾಡಿ ಉಪಕರಿಸಿದ್ದಾರೆ. ಕನ್ನಡದ ಓದುಗರು ಅವರಿಗೆ ಋಣಿಯಾಗಿದ್ದಾರೆ. ಇವರ ಬರಹದಲ್ಲಿ ಭಗತ್ ಸಿಂಗ್ನ ಹತಾಶೆ ವಾತಾವರಣ, ಜೀವನ ಸ್ಫೂರ್ತಿ ತುಂಬುತ್ತದೆ.
ಘಟನೆ 1
ವಿಚಾರಣೆ- ಉಪವಾಸ- ಶಿಕ್ಷೆಗಳ ನಡುವೆ ಓದುಗುಳಿತನ ಅವರ ಮನಸ್ಸನ್ನು ಪ್ರಬುದ್ಧಗೊಳಿಸದೆ. ಜೈಲು/ ಸಾವುಗಳಂತಹ ಕಟುವಾಸ್ತವದೆದುರಲ್ಲೂ ಪಕ್ಷ ಮತ್ತು ಸಮಚಿತ್ತದ ಮನಸ್ಥಿತಿಯನ್ನುಳಿಸಿಕೊಳ್ಳಲು ವಿಸ್ತೃತ ಓದು ಅವರ ನೆರವಿಗೆ ಬಂದಿದೆ. ಸಾಯುವ ಕೊನೆಗಳಿಗೆಯಲ್ಲಿ ನಿನ್ನ ಕೊನೆಯ ಆಸೆ ಏನು ಎಂದು ಕೇಳಿದರೆ, ಲೆನಿನ್ನನ ಆತ್ಮಚರಿತ್ರೆ ಓದುತ್ತಿದ್ದೆ, ಅದನ್ನು ಮುಗಿಸುವ ಆಸೆಯಿತ್ತು ಎಂದು ತಣ್ಣಗೆ ಹೇಳಿದ್ದೇ ಸಾಕ್ಷಿ.
ಘಟನೆ 2
ತರುಣ ಮನಸ್ಸಿನಲ್ಲಿ ಅದಮ್ಯ ಹುಮ್ಮಸ್ಸು, ಧೈರ್ಯ, ದಣಿಯದ ಚೇತನ ಇರುತ್ತದೆ. ಜತೆಗೊಂದು ಹುಂಬತನವೂ ಮೈಗೂಡಿರುತ್ತದೆ. ಎಲ್ಲ ದೇಶಕಾಲಗಳಲ್ಲಿಯೂ ಇದು ನಿಜ. ಅದರಲ್ಲೂ ಇಡಿಯ ಸಮಾಜವೇ ಸಂಘರ್ಷಮಯ ಸ್ಥಿತಿಯಲ್ಲಿದ್ದರಂತೂ ಒಂದು ಸಣ್ಣ ಘಟನೆ, ಚಕಮಕಿ, ಪತ್ರ, ಬರಹ ಇವಿಷ್ಟೆ ಸಾಕು, ತರುಣರಲ್ಲಿ ಸಾವಿಗೂ ಹೆದರದೇ ಮುನ್ನುಗ್ಗುವ ಕಿಚ್ಚು ಹುಟ್ಟಿಬಿಡುತ್ತದೆ ಇದೇ ಯುವಶಕ್ತಿ. ಇದನ್ನು ನೆಚ್ಚಿಕೊಂಡೇ ಅನಾದಿಯಿಂದ ಯುದ್ಧಗಳೂ, ಕ್ರಾಂತಿಗಳೂ, ದಂಗೆಗಳೂ ಏರ್ಪಟ್ಟಿವೆ. ಈ ಯುವಶಕ್ತಿಯನ್ನು ಒಂದಾಗಿ ಉದಾತ್ತ ಧ್ಯೇಯಕ್ಕಾಗಿ ಮುನ್ನಡೆಸುವಂತಹ ಸಾಮಾಜಿಕ ವಾತಾವರಣ ಇರುವ ಕಾಲವೇ ಯಾವುದೇ ನೆಲದ ಸುವರ್ಣಯುಗ ಎನ್ನಬಹುದಾಗಿದೆ.
ಘಟನೆ 3
ತನ್ನ ನಾಸ್ತಿಕತೆಯ ಬಗೆಗೆ ಹೇಳಿಕೊಂಡಾಗಲೆಲ್ಲ ಅವರ ಮಿತ್ರರು ಕೊನೇ ಪಕ್ಷ ಪ್ರಾರ್ಥಿಸುವ ರೂಢಿಯನ್ನಾದರೂ ಇಟ್ಟಕೊಳ್ಳುವಂತೆ ಹೇಳುತ್ತಿದ್ದರು. ನಾಸ್ತಿಕನಾದ ಪ್ರಬಂಧವನ್ನು ಅವರು ಹೀಗೆ ಕೊನೆಗೊಳಿಸುತ್ತಾರೆ: ನೋಡೋಣ ನಾನೆಷ್ಟು ಗಟ್ಟಿನಿರ್ಧಾರದ ವ್ಯಕ್ತಿ ಎಂದು. ನನ್ನ ಒಬ್ಬ ಗೆಳೆಯ ನಿನ್ನ ಕೊನೆಯ ದಿನಗಳು ಬರುವಾಗ ನೀವು ದೇವರನ್ನು ನಂಬುತ್ತೀರಾ ಎಂದು. ನಾನೆಂದೆ, ಇಲ್ಲ, ಅದು ಯಾವತ್ತೂ ಸಾಧ್ಯವಿಲ್ಲ. ಹಾಗಾದದ್ದೇ ಆದಲ್ಲಿ ಅದು ನನ್ನ ವ್ಯಕ್ತಿತ್ವ, ನೈತಿಕತೆ ಹಿನ್ನಡೆ ಎಂದೇ ಭಾವಿಸುತ್ತೇನೆ. ಸ್ವಾರ್ಥದ ಸಣ್ಣಪುಟ್ಟ ಕಾರಣಗಳಿಗಾಗಿ ನಾನೆಂದೂ ಪ್ರಾರ್ಥಿಸಲಾರೆ. ಹೀಗೆ ತನ್ನ ಸಾವಿರ ಕೊನೆಯ ಗಳಿಗೆಯವರೆಗೂ ಯಾವ ಉದ್ವೇಗಕ್ಕೊಳಗಾಗದೇ ಅಸೀಮ ಧೈರ್ಯ ಮೆರೆದವನು ಭಗತ್ಸಿಂಗ್.
ಶ್ರುತಿ ನೀರಾಯ