ಕಷ್ಟಗಳಿಗೆ ಸ್ಪಂದಿಸುವ ಮನಸ್ಸಿರಲಿ
Team Udayavani, Nov 19, 2018, 1:28 PM IST
ಜಗತ್ತಿನಲ್ಲಿ ಸಮಸ್ಯೆಗಳಿಲ್ಲದವರು ಯಾರೂ ಇಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಸಮಸ್ಯೆಯಿದೆ. ಅವರವರ ಸ್ಥಾನಮಾನ, ಮನಃ ಸ್ಥಿತಿ ಮುಂತಾದವುಗಳಿಗನುಗುಣವಾಗಿ ಸಮಸ್ಯೆಗಳ ಸ್ವರೂಪ ಬೇರೆ ಬೇರೆಯಾಗಿರಬಹುದಷ್ಟೆ. ಅಯ್ಯೋ ಸಮಸ್ಯೆಯೆಂದು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಬದಲು ಒಬ್ಬರ ಸಮಸ್ಯೆಗಳಿಗೆ ಮತ್ತೊಬ್ಬರು ನೆರವಾದರೆ ಹೇಗೆ ಎಂಬ ಒಂದು ಕಲ್ಪನೆ ಸಾಕಾರವಾದರೆ ಜಗತ್ತಿನಲ್ಲಿ ಸಮಸ್ಯೆಗಳೇ ಇರುತ್ತಿರಲಿಲ್ಲ. ಈ ಮಾತಿಗೆ ಪೂರಕವಾಗುವ ಕತೆಯೊಂದು ಇಲ್ಲಿದೆ.
ಅದೊಂದು ನೂರಾರು ಉದ್ಯೋಗಿಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಮಟ್ಟದ ಸಾಫ್ಟ್ ವೇರ್ ಕಂಪೆನಿ. ತನ್ನ ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಅವರ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಲೆಂದು ಕಂಪೆನಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು. ಅದೊಂದು ದಿನ ಬೆಳ್ಳಂಬೆಳಗ್ಗೆ ಆಫೀಸಿಗೆ ಬಂದ ಎಲ್ಲ ನೌಕರರನ್ನು ಸಭೆ ನಡೆಸುವ ಕೊಠಡಿಗೆ ಬರ ಹೇಳಲಾಯಿತು. ಕುತೂಹಲದಿಂದಲೇ ನೌಕರರು ಅತ್ತ ಹೆಜ್ಜೆ ಹಾಕಿದರು. ಸಭೆ ನಡೆಸಬೇಕಾದ ಕೋಣೆ ಅಕ್ಷರಶಃ ಮಕ್ಕಳು ಆಡುವ ಕೋಣೆಯಂತೆ ಸಿಂಗಾರಗೊಂಡಿ ತ್ತು! ನೌಕರರಿಗಾಗಿ ಆಟ ನಡೆಸಲು ಸಕಲ ತಯಾರಿಯನ್ನೂ ಕಂಪೆನಿ ಮಾಡಿತ್ತು.
ಎಲ್ಲ ನೌಕರರಿಗೂ ಒಂದೊಂದು ಬಲೂನು ನೀಡಲಾಯಿತು. ಅದನ್ನು ಊದಿ ಬಲೂನು ಒಡೆಯದೆ ಪ್ರತಿಯೊಬ್ಬರೂ ಅದರ ಮೇಲೆ ಅವರವರ ಹೆಸರು ಬರೆಯಲು ಸೂಚಿಸಲಾಯಿತು. ಅನೇಕರು ಹೆಸರು ಬರೆಯುವ ವೇಳೆ ಬಲೂನು ಒಡೆದುಕೊಂಡರು. ಅಂಥವರಿಗೆ ಮತ್ತೂಂದು ಬಲೂನು ನೀಡಲಾಯಿತು. ಅನಂತರ ಎಲ್ಲ ಬಲೂನುಗಳನ್ನು ಒಂದು ಕೊಠಡಿಯೊಳಗೆ ಹಾಕಿ ಯಾವ ಬಲೂನು ಒಡೆಯದೆ ಅವರವರ ಬಲೂನು ಹುಡುಕಿ ತರಬೇಕೆಂಬ ಸೂಚನೆ ನೀಡಲಾಯಿತು.
ಎಲ್ಲರೂ ಒಮ್ಮೆಲೆ ಕೊಠಡಿಕಡೆ ಮುಗಿಬಿದ್ದು ಜಾಗರೂಕರಾಗಿ ಬಲೂನು ಹುಡುಕಲು ಆರಂಭಿಸಿದರು. ಅವರಿಗೆ ನೀಡಲಾದ ಸಮಯ ಮುಗಿದರೂ ಒಬ್ಬರಿಗೂ ಅವರ ಬಲೂನು ಸಿಗಲಿಲ್ಲ. ಕೊನೆಗೆ ಅದೇ ಬಲೂನುಗಳನ್ನು ಬೇರೊಂದು ಕೊಠಡಿಗೆ ಹಾಕಿ ತಮಗೆ ಸಿಕ್ಕ ಬಲೂನುಗಳನ್ನು ಅದರ ಮೇಲೆ ಬರೆದಿರುವ ಹೆಸರಿನವರಿಗೆ ನೀಡಲು ಸೂಚಿಸಲಾಯಿತು. ನೀಡಲಾದ ಅರ್ಧ ಸಮಯದೊಳಗಾಗಿಯೇ ಎಲ್ಲರ ಕೈಯಲ್ಲಿ ಅವರವರ ಬಲೂನಿತ್ತು.
ಮನಸ್ಸಿದ್ದರೆ ಸಾಕು
ಈ ಕತೆಯಲ್ಲಿನ ಬಲೂನುಗಳನ್ನು ನಮ್ಮ ಜೀವನದ ಸಮಸ್ಯೆಗಳು, ಕಷ್ಟಗಳು ಎಂದು ಭಾವಿಸಿ. ಇಲ್ಲಿ ಒಬ್ಬರು ಮತ್ತೊಬ್ಬರ ಬಲೂನು ಹುಡುಕಿದಂತೆಯೇ ಜೀವನದಲ್ಲೂ ನಾವು ಮತ್ತೂಬ್ಬರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿದರೆ ಯಾವ ಸಮಸ್ಯೆಗಳಿಗೆ ಪರಿಹಾರ ಸಿಗದು ಹೇಳಿ? ಅಯ್ಯೋ ನನಗೆ ಅದೆಷ್ಟೋ ಸಮಸ್ಯೆಗಳಿವೆ. ಇನ್ನು ಬೇರೆಯವರ ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗುವುದಾ ಎಂಬುದನ್ನು ಬಿಟ್ಟು ಬಿಡಿ. ಬೇರೆಯವರಿಗೆ ನೆರವಾಗಲು ನಿಮಗೆ ಹಣವೋ, ಸಾಮಾಜಿಕ ಸ್ಥಾನಮಾನವೋ ಮತ್ತಾವುದೋ ಬೇಕಾಗಿಲ್ಲ. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸೊಂದು ನಿಮ್ಮಲ್ಲಿದ್ದರೆ ಸಾಕು.
ಪ್ರಸನ್ನ ಹೆಗಡೆ ಊರಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ