ನೋಟಿನ ನೋಟ! : ಭಿನ್ನ ಮನಸ್ಥಿತಿಗಳ ಸಮ್ಮಿಲನ
Noted ಪಾಯಿಂಟ್
Team Udayavani, May 3, 2019, 6:00 AM IST
ಚಿತ್ರದ ನಾಯಕ ಯಾರು, ಅವರಿಗೆ ನಾಯಕಿ ಯಾರು, ಉಳಿದಂತೆ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?
– ಇದಕ್ಕೆಲ್ಲಾ ಒಂದೇ ಉತ್ತರ “ಆ ಒಂದು ನೋಟು’. ಅರೇ ಇದೇನಿದು, ಚಿತ್ರಕ್ಕೆ ನಾಯಕ, ನಾಯಕಿ ಯಾರೂ ಇಲ್ಲವೆ ಅಂದರೆ, ಚಿತ್ರದ ಜೀವಾಳವೇ ಆ ನೋಟು. ಹಾಗಾಗಿ ಆ ನೋಟೇ ಇಲ್ಲಿ ಎಲ್ಲವೂ. ಆ ನೋಟು ಸುತ್ತ ತಿರುಗುವ ಪಾತ್ರಗಳು ಮಾತ್ರ ಇಲ್ಲಿವೆ ಎಂಬುದು ಚಿತ್ರ ತಂಡದ ಮಾತು.
ಇದು ಹೊಸಬರೇ ಸೇರಿ ಮಾಡಿರುವ ಚಿತ್ರ. ಈಗಾಗಲೇ ಚಿತ್ರೀಕರಣ ಮುಗಿಸಿ, ಇನ್ನೇನು ಸೆನ್ಸಾರ್ಗೆ ಹೋಗಿ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ ಚಿತ್ರ. ಇತ್ತೀಚೆಗೆ “ಆ ಒಂದು ನೋಟು’ ಚಿತ್ರತಂಡ ಮಾಧ್ಯಮ ಎದುರು ಬಂದು, ಮಾಹಿತಿ ಹಂಚಿಕೊಂಡಿತು. ಮೊದಲು ಮಾತಿಗಿಳಿದಿದ್ದು ನಿರ್ಮಾಪಕ ಎಂ.ಕೆ.ಜಗದೀಶ್. “ಈ ಹಿಂದೆ “ಪುಟಾಣಿ ಸಫಾರಿ’ ಮಾಡಿದ್ದ ನನಗೆ “ಆ ಒಂದು ನೋಟು’ ಕಥೆ ಮೊದಲೇ ಗೊತ್ತಿತ್ತು.
ಒಂದು ಸಾವಿರ ರುಪಾಯಿ ಮೇಲೆ ನಿರ್ದೇಶಕ ರತ್ನಾತನಯ್ ಕಥೆ ಹೆಣೆದಿದ್ದರು. ವರ್ಷದ ಹಿಂದೆ ಈ ಚಿತ್ರ ಮಾಡುವ ಬಗ್ಗೆ ನಿರ್ಧಾರ ಮಾಡಿ, ಗೆಳೆಯ ಪ್ರೇಮ್ನಾಥ್ ನಿರ್ಮಾಣದಲ್ಲಿ ಸಾಥ್ ಕೊಡುವ ಭರವಸೆ ಕೊಟ್ಟ ಬಳಿಕ ಚಿತ್ರ ಮಾಡಿದ್ದೇವೆ. ಹಣ ಎಲ್ಲರಿಗೂ ಅಗತ್ಯ. ಆದರೆ, ಆ ಹಣ ಯಾರ್ಯಾರ ಕೈಯಲ್ಲಿ ಹೇಗೆಲ್ಲಾ ಬಳಕೆಯಾಗುತ್ತೆ ಎಂಬುದರ ಸ್ವಾರಸ್ಯಕರ ವಿಷಯ ಚಿತ್ರದ ಹೈಲೈಟ್’ ಎಂಬ ವಿವರ ಕೊಡುತ್ತಾರೆ ನಿರ್ಮಾಪಕ ಜಗದೀಶ್.
ನಿರ್ದೇಶಕ ರತ್ನಾತನಯ್ ಅವರಿಗೆ ಇದು ಮೊದಲ ಚಿತ್ರ. ಒಂದು ವರ್ಷದ ಪ್ರಯತ್ನ ಈಗ ಈಡೇರಿದೆ. ಹಣ ಅನ್ನೋದು ಕೆಟ್ಟದ್ದು, ಅದು ಮನುಷ್ಯನನ್ನು ಹಾಳು ಮಾಡುತ್ತದೆ ಎಂಬ ಆರೋಪ ಸಾಮಾನ್ಯ. ಆದರೆ, ಹಣ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ, ಮನುಷ್ಯ ಆ ಹಣವನ್ನು ಯಾವುದಕ್ಕೆ ಹೇಗೆ ಬಳಸುತ್ತಾನೆ ಎಂಬುದು ಮುಖ್ಯ. ಈ ಎಳೆ ಇಟ್ಟುಕೊಂಡು 2000 ರುಪಾಯಿಯ ನೋಟಿನ ಮೂಲಕ ಒಂದು ವಿಷಯ ಹೇಳುವ ಪ್ರಯತ್ನ ಮಾಡಲಾಗಿದೆ.
ಇದೊಂದು ಪ್ರಯೋಗಾತ್ಮಕ ಚಿತ್ರ. ಹಣ ಎಲ್ಲರ ಕೈಯಲ್ಲೂ ಓಡಾಡುತ್ತೆ. ಅದಕ್ಕೆ ಭೇದ ಭಾವ ಇಲ್ಲ. ಕೂಲಿಕಾರ್ಮಿಕ, ಬಡವ, ಶ್ರೀಮಂತ, ಉದ್ಯಮಿ, ನೌಕರ, ಭಿಕ್ಷುಕ, ಕಳ್ಳ ಹೀಗೆ ಎಲ್ಲರ ಕೈಯಲ್ಲೂ ಹಣ ಓಡಾಡುತ್ತೆ. ಒಂದು ನೋಟು ಏನೆಲ್ಲಾ ಮಾಡುತ್ತೆ ಎಂಬುದೇ ಕಥೆ. ಅದನ್ನು ಚಿತ್ರ ನೋಡಿದರೆ ಗೊತ್ತಾಗುತ್ತದೆ. ಇಂತಹ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಬಹಳ ಮುಖ್ಯ. ವೀರ್ ಸಮರ್ಥ್ ಅವರಿಲ್ಲಿ ಸಮರ್ಥವಾಗಿ ಹಿನ್ನೆಲೆ ಸಂಗೀತದ ಸ್ಪರ್ಶ ಕೊಟ್ಟಿದ್ದಾರೆ. ಉಳಿದಂತೆ ಕೌಶಿಕ್ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ’ ಎಂಬುದು ನಿರ್ದೇಶಕರ ಮಾತು.
ಹಿನ್ನೆಲೆ ಸಂಗೀತ ನೀಡಿರುವ ನಿರ್ದೇಶಕ ವೀರ್ ಸಮರ್ಥ್ ಅವರಿಗೆ ಈ ಚಿತ್ರ ಚಾಲೆಂಜಿಂಗ್ ಆಗಿತ್ತಂತೆ. ಕಾರಣ, ಕಂಟೆಟ್ ಇರುವ ಚಿತ್ರವಿದು. ನಾನು ಮಾಡಿರುವ ಚಿತ್ರಗಳಲ್ಲೇ ಇದು ಬೇರೆ ರೀತಿಯ ಚಿತ್ರ. ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ನಿರ್ದೇಶಕರ ಟೇಸ್ಟ್ಗೆ ತಕ್ಕಂತೆ ಇಲ್ಲಿ ಕೆಲಸ ಮಾಡಿದ್ದು ಸಮಾಧಾನ ತಂದಿದೆ. ಇದು ನನಗೂ ಹೊಸ ಅನುಭವ. ಈ ರೀತಿಯ ಚಿತ್ರಗಳಿಗೆ ಗೆಲುವು ಸಿಗಬೇಕು. ಅದಕ್ಕೆ ಮಾಧ್ಯಮ ಸಹಕಾರ ತುಂಬ ಅಗತ್ಯ ಎಂದರು ವೀರ್ ಸಮರ್ಥ್.
ಆದಿತ್ಯ ಅವರಿಗೆ ಇದು ಮೊದಲ ಚಿತ್ರ. ಕಾಲೇಜ್ ಹುಡುಗನೊಬ್ಬ ಬದುಕನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ. ಆದರೆ, ಸದಾ ಜೋಶ್ ಆಗಿರುವ ಅವನ ಲೈಫಲ್ಲಿ ಒಂದು ನೋಟು ಬಂದಾಗ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದೆ ಕಥೆ ಎಂಬುದು ಅವರ ಮಾತು. ಅರ್ಜುನ್ ಕಿಟ್ಟು ಸಂಕಲನ ಮಾಡಿದ್ದಾರೆ. ಅಶ್ವಿನ್ ಹಾಸನ್ ಚಾಲಕನ ಪಾತ್ರ ಮಾಡಿದರೆ, ಆನಂದ್ ಕಳ್ಳನ ಪಾತ್ರಕ್ಕೆ ನ್ಯಾಯ ಒದಗಿಸಿದ ಖುಷಿಯಲ್ಲಿದ್ದಾರೆ. ಉಳಿದಂತೆ ಮೆಘ, ಉಷಾ, ಗೌತಮ್ ಇತರರು ನಟಿಸಿದ್ದಾರೆ.
— ವಿಜಯ್ ಭರಮಸಾಗರ