ಅಂಡರ್ವರ್ಲ್ಡ್ನಲ್ಲೊಂದು ಸಿಹಿಗಾಳಿ
Team Udayavani, Mar 3, 2017, 3:50 AM IST
ನಿಮ್ಮ ಓದಿಗೂ, ನಿಮ್ಮ ಆಸಕ್ತಿಗೂ ಅನೇಕ ಬಾರಿ ಸಂಬಂಧವೇ ಇರೋದಿಲ್ಲ. ಹಾಗಾಗಿಯೇ ಏನೋ ಓದಿದವರು ಇನ್ನೇನೋ ಆಗುತ್ತಾರೆ. ಯಾಕೆ ಈ ವಿಚಾರ ಎಂದರೆ ಅದಕ್ಕೆ ಕಾರಣ ಪಾಯಲ್ ರಾಧಾಕೃಷ್ಣ . ಪಾಯಲ್ ಓದಿದ್ದು ವಾಸ್ತುಶಿಲ್ಪ, ಮಾಡಿದ್ದು ಮಾಡೆಲಿಂಗ್, ಈಗ ಮಾಡುತ್ತಿರುವುದು ಅಭಿನಯ. ಯಾರು ಈ ಪಾಯಲ್ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಆದಿತ್ಯ
ಅಭಿನಯದ “ಬೆಂಗಳೂರು ಅಂಡರ್ವರ್ಲ್ಡ್’ ಎಂಬ ಚಿತ್ರ ಬರುತ್ತಿರುವುದು ಗೊತ್ತಿರಬಹುದು.
ಆ ಚಿತ್ರದ ನಾಯಕಿಯೇ ಈ ಪಾಯಲ್. ಈ ಚಿತ್ರದ ಮೂಲಕ ಪಾಯಲ್ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ
ಕೊಡುತ್ತಿದ್ದಾರೆ.. ಪಾಯಲ್ ಹುಟ್ಟಿದ್ದು ಮಂಗಳೂರಿನಲ್ಲಿ. ಆದರೆ, ಬೆಳೆದಿದ್ದು, ಓದಿದ್ದು ಮೈಸೂರಿನಲ್ಲಿ. ತಾಯಿ ಭರತನಾಟ್ಯಂ
ಡ್ಯಾನ್ಸರ್ ಆದ್ದರಿಂದ, ಪಾಯಲ್ಗೂ ಭರತನಾಟ್ಯ ಗೊತ್ತು. ನೃತ್ಯದ ಮೇಲೆ ಆಸಕ್ತಿಯಿದ್ದರಿಂದ ವಿದ್ವತ್ ಮುಗಿಸಿ, ಕಾರ್ಯಕ್ರಮಗಳನ್ನೂ ಕೊಟ್ಟಿದ್ದಾರೆ ಪಾಯಲ್. ಈ ನಡುವೆ ಯೂನಿವರ್ಸಿಟಿ ಸ್ಕೂಲ್ ಆಫ್ ಡಿಸೈನ್ನಲ್ಲಿ ಎರಡನೆಯ ವರ್ಷದ ಬ್ಯಾಚಲರ್ ಆಫ್ ಆರ್ಕಿಟೆಕ್ಚರ್ ಮಾಡುವಾಗ ಮಾಡಲಿಂಗ್ ಸೆಳೆಯಿತ್ತಂತೆ. ಮೈಸೂರಿನ ಮಾಡಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು
ಮಾಡಿರುವ ಜಯಂತಿ ಭಲ್ಲಾಳ್ ಅವರ ಬಳಿ ಇನ್ ಹೌಸ್ ಮಾಡಲ್ ಆಗಿದ್ದ ಪಾಯಲ್, ಆ ನಂತರ ಪ್ರಸಾದ್ ಬಿದ್ದಪ್ಪ ಅವರಿಗೆ ಮಾಡಲಿಂಗ್ ಮಾಡಿದ್ದಾರೆ.
ಹೀಗಿರುವಾಗಲೇ, “ಬೆಂಗಳೂರು ಅಂಡರ್ವರ್ಲ್ಡ್’ ಚಿತ್ರಕ್ಕೆ ನಾಯಕಿಯಾಗಿ ಪಾಯಲ್ಗೆ ಅವಕಾಶ ಸಿಕ್ಕಿದೆ. ಮೂರು ರೌಂಡ್ ಆಡಿಷನ್ನಲೂ ಪಾಸಾದ ಪಾಯಲ್ ಈಗ “ಬೆಂಗಳೂರು ಅಂಡರ್ವರ್ಲ್ಡ್’ ಚಿತ್ರೀಕರಣ ಕೂಡಾ ಮುಗಿಸಿದ್ದಾರೆ. ಸಹಜವಾಗಿಯೇ ಆರಂಭದಲ್ಲಿ ಪಾಯಲ್ಗೆ ಸ್ವಲ್ಪ ಭಯವಿತ್ತಂತೆ. ಆದರೆ, ಸೆಟ್ಗೆ ಹೋದನಂತರ ಆ ಭಯ ದೂರವಾಯಿತಂತೆ. ಸದ್ಯ ಪಾಯಲ್ಗೆ ಒಂದಿಷ್ಟು ಆಫರ್ಗಳು ಬರುತ್ತಿವೆ. ಆದರೆ, ಈ ಚಿತ್ರ ಬಿಡುಗಡೆಯಾಗಲೀ ಅನ್ನೋ ಕಾರಣಕ್ಕೆ ಪಾಯಲ್ ಒಪ್ಪಿಲ್ಲ. ಈ ನಡುವೆಯೇ “ಕಣ್ಣಲ್ಲೇ’ ಎಂಬ ಆಲ್ಬಂನಲ್ಲಿ ಪಾಯಲ್ ಕಾಣಿಸಿಕೊಂಡಿದ್ದಾರೆ.
ರವಿ ರೈ