ಕಿರುತೆರೆಯಿಂದ ಹಿರಿತೆರೆಗೆ
Team Udayavani, May 18, 2018, 6:00 AM IST
ಬೇರೆ ಬೇರೆ ಕ್ಷೇತ್ರಗಳಿಂದ ಬಂದು ಅದೃಷ್ಟ ಕಂಡುಕೊಳ್ಳುವ ಒಂದು ಕ್ಷೇತ್ರವೆಂದರೆ ಆದು ಸಿನಿಮಾ ಕ್ಷೇತ್ರ. ಸಿನಿಮಾ ಕ್ಷೇತ್ರಕ್ಕೆ ಎಲ್ಲಾ ಕ್ಷೇತ್ರದ ಜನ ಬರುತ್ತಾರೆ, ಅದೃಷ್ಟ ಪರೀಕ್ಷಿಸಿಕೊಳ್ಳುತ್ತಾರೆ.
ಅದೃಷ್ಟ ಚೆನ್ನಾಗಿದ್ದವರು ನೆಲೆಕಾಣುತ್ತಾರೆ. ಇದರಲ್ಲಿ ನಿರ್ಮಾಪಕರಿಂದ ಹಿಡಿದು ಸಣ್ಣಪುಟ್ಟ ಕಲಾವಿದರವರೂ ಸೇರುತ್ತಾರೆ. ನಿರಂಜನ್ ಕುಮಾರ್ ಎನ್ನುವವರು ಕೂಡಾ ಈಗ ಬಣ್ಣದ ಲೋಕದಲ್ಲಿ ಅದೃಷ್ಟ ಹುಡುಕಲು ಬಂದಿದ್ದಾರೆ. ಯಾವ ನಿರಂಜನ್ ಎಂದರೆ ಚಿತ್ರರಂಗಕ್ಕೆ ಈಗಷ್ಟೇ
ಎಂಟ್ರಿಕೊಡುವ ಹೊಸ ಪ್ರತಿಭೆ ಎನ್ನಬೇಕು. ನಿರಂಜನ್ ಮೂಲತಃ ದಾವಣಗೆರೆಯವರು. ನಟನೆಯ ಆಸಕ್ತಿ ಹೊಂದಿದ್ದ ನಿರಂಜನ್ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದಾರೆ. ಈ ನಿರಂಜನ್ ಅವರನ್ನು ನೀವು ಈ ಹಿಂದೆ ಧಾರಾವಾಹಿಗಳಲ್ಲಿ ನೋಡಿರಬಹುದು.
“ದೊಡ್ಮನೆ ಸೊಸೆ’, “ಬ್ರಹ್ಮಗಂಟು’, “ಕಿನ್ನರಿ’, “ಬದುಕು’, “ರಾಜಕುಮಾರಿ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಿರಂಜನ್ ಕಾಣಿಸಿಕೊಂಡಿದ್ದಾರೆ. ಕಿರುತೆರೆಗೆ ಬಂದ ಕಲಾವಿದರು ಹಿರಿತೆರೆಗೆ ಬಾರದೇ ಇರುತ್ತಾರಾ, ಖಂಡಿತಾ ಬರುತ್ತಾರೆ. ಅದರಂತೆ ನಿರಂಜನ್ ಕೂಡಾ ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಸದ್ಯ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ “ರಾಜ ಲವ್ಸ್ ರಾಧೆ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ನಿರಂಜನ್ ಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಇಲ್ಲಿ ಅವರು ನೆಗೆಟಿವ್ ಶೇಡ್ನ ಪೊಲೀಸ್ ಅಧಿಕಾರಿಯಾಗಿ
ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಮತ್ತಷ್ಟು ಸಿನಿಮಾಗಳು ಸಿಗುವ ನಿರೀಕ್ಷೆ ನಿರಂಜನ್ಗಿದೆ. ಎಲ್ಲಾ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ ನಿರಂಜನ್ಗಿದೆ.
ರವಿ ರೈ