ಗುಬ್ಬಿ ಮೇಲೆ ಕಾಮಿಡಿ ಅಸ್ತ್ರ
ಆಗಸ್ಟ್ 15 ರಿಂದ ಹಾರಾಟ
Team Udayavani, Aug 9, 2019, 5:13 AM IST
ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಸಿಕ್ಕಾಪಟ್ಟೆ ನಿರೀಕ್ಷೆಯೊಂದಿಗೆ ಆಗಸ್ಟ್ 15 ರತ್ತ ನೋಡುತ್ತಿದ್ದಾರೆ. ಅದಕ್ಕೆ ಕಾರಣ “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’. ಹೀಗೊಂದು ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈ ಚಿತ್ರದ ನಿರ್ಮಾಪಕರು ಚಂದ್ರಶೇಖರ್. ಈ ಹಿಂದೆ ತಮ್ಮ ಕ್ರಿಸ್ಟಲ್ ಪಾರ್ಕ್ ಬ್ಯಾನರ್ನಲ್ಲಿ “ಚಮಕ್’, “ಅಯೋಗ್ಯ’ ಹಾಗೂ “ಬೀರ್ಬಲ’ ಸಿನಿಮಾಗಳನ್ನು ನೀಡಿದ್ದ ಚಂದ್ರಶೇಖರ್ ಈಗ “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ನೀಡಲು ರೆಡಿಯಾಗಿದ್ದಾರೆ. ಈ ಬಗ್ಗೆ ಮಾತನಾಡುವ ಅವರು, “ನನ್ನ ಬ್ಯಾನರ್ನಲ್ಲಿ ಇಲ್ಲಿವರೆಗೆ ಬಂದ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನವಾಗಿತ್ತು. ಈಗ ಗುಬ್ಬಿ ಕೂಡಾ ಬೇರೆ ಜಾನರ್. ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎಂದರು.
ಈ ಚಿತ್ರವನ್ನು ಸುಜಯ್ ಶಾಸ್ತ್ರಿ ನಿರ್ದೇಶಿಸಿದ್ದಾರೆ. ಈ ಹಿಂದೆ ಅನೇಕ ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ ಕಾಣಿಸಿಕೊಂಡಿರುವ ಸುಜಯ್ ಅವರ ಮೊದಲ ನಿರ್ದೇಶನದ ಚಿತ್ರವಿದು. “ಚಿತ್ರ ನಿಮ್ಮನ್ನು ತುಂಬಾನೇ ನಗಿಸುತ್ತದೆ. ಸಣ್ಣ ಸಣ್ಣ ಅಂಶಗಳನ್ನಿಟ್ಟುಕೊಂಡು ಕಾಮಿಡಿ ಮಾಡಿದ್ದೇವೆ. ಸಾಫ್ಟ್ವೇರ್ ಯುವಕನಾಗಿ ರಾಜ್ ಬಿ.ಶೆಟ್ಟಿ ನಟಿಸಿದ್ದು, ನಾಲ್ವರು ಸ್ನೇಹಿತರ ಸ್ಟೋರಿ ಚಿತ್ರದಲ್ಲಿದೆ’ ಎನ್ನುವುದು ಸುಜಯ್ ಮಾತು. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ವಿಲನ್ ಆಗಿ ನಟಿಸಿದ್ದಾರೆ. ಹಾಗಂತ ಸೀರಿಯಸ್ ವಿಲನ್ ಅಲ್ಲ, ಕಾಮಿಡಿ ವಿಲನ್. ಅವರು ರಾಬಿನ್ ಹುಡ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರಂತೆ.
ಚಿತ್ರದ ಬಗ್ಗೆ ಮಾತನಾಡುವ ರಾಜ್ ಬಿ ಶೆಟ್ಟಿ, “ಈ ಚಿತ್ರದ ಉದ್ದೇಶ ಪ್ರೇಕ್ಷಕರನ್ನು ನಗಿಸೋದಷ್ಟೇ. ಆ ಕೆಲಸವನ್ನು ನಿರ್ದೇಶಕರು ಚೆನ್ನಾಗಿ ಮಾಡಿದ್ದಾರೆ. ಅವರಿಗೆ ಏನು ಬೇಕು ಎಂಬುದರ ಬಗ್ಗೆ ಕ್ಲಾರಿಟಿ ಇತ್ತು. ಚಿತ್ರದಲ್ಲಿ ನಾನು ಗುಬ್ಬಿಯಾದರೆ, ಪ್ರಮೋದ್ ಶೆಟ್ಟಿ ಕಡೆಯಿಂದ ಬ್ರಹ್ಮಾಸ್ತ್ರ ಬರುತ್ತದೆ’ ಎಂದರು. ಪ್ರಮೋದ್ ಶೆಟ್ಟಿ, ಕವಿತಾ ಗೌಡ ಸೇರಿದಂತೆ ಚಿತ್ರತಂಡದ ಸದಸ್ಯರು ಮಾತನಾಡಿದರು. ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿದ್ದು, ಒಂದು ವಾರ ಬಿಟ್ಟು ವಿದೇಶದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ಗೆ ಮೆಚ್ಚುಗೆ ವ್ಯಕ್ತವಾಗಿರುವುದರಿಂದ ಚಿತ್ರತಂಡ ಖುಷಿ ಯಾಗಿದೆ.