ಹಂಸಲೇಖ ಕನಸಿನ ಬಿಚ್ಚುಗತ್ತಿ
ರಾಜವರ್ಧನ್ ಭವಿಷ್ಯದ ಚಿತ್ರ
Team Udayavani, Feb 7, 2020, 7:06 AM IST
“ಇದೇ ನಿನ್ನ ಮೊದಲ ಮತ್ತು ಕೊನೆಯ ಸಿನಿಮಾ ಅಂದುಕೊಂಡು ಶ್ರದ್ಧೆಯಿಂದ ಕೆಲಸ ಮಾಡು ಎಲ್ಲದೂ ಒಳ್ಳೆಯದಾಗುತ್ತೆ…’ ಇದು ದರ್ಶನ್ ಪ್ರೀತಿಯಿಂದ ಹೇಳಿದ ಮಾತು. ಅಷ್ಟಕ್ಕೂ ಈ ಮಾತುಗಳನ್ನು ಹೇಳಿ, ಶುಭ ಹಾರೈಸಿದ್ದು, ನಟ ರಾಜವರ್ಧನ್ ಅವರಿಗೆ. ಅದಕ್ಕೆ ಕಾರಣ, “ಬಿಚ್ಚುಗತ್ತಿ’. ಹೌದು, ಚಿತ್ರ ಶುರುವಿಗೆ ಮುನ್ನ, ರಾಜವರ್ಧನ್ ಡಾ.ರಾಜಕುಮಾರ್ ಸ್ಮಾರಕಕ್ಕೆ ಹೋಗಿ ನಮಸ್ಕರಿಸಿ, ನಂತರ ದರ್ಶನ್ ಬಳಿ ಹೋಗಿ ಆಶೀರ್ವದಿಸಿ ಅಂದಿದ್ದರಂತೆ.
ಆಗ ದರ್ಶನ್, ಮೇಲಿನ ಮಾತುಗಳನ್ನು ಹೇಳಿ ಕಳುಹಿಸಿದ್ದರು. ಅವರ ಮಾತು ಪಾಲಿಸಿ ಶ್ರಮದಿಂದ ಚಿತ್ರ ಮಾಡಿರುವ ರಾಜವರ್ಧನ್, “ನಿಮ್ಮೆಲ್ಲರ ಬೆಂಬಲ ಇರಲಿ’ ಎಂದರು. ಚಿತ್ರ ಮಾಡೋಕೆ ಕಾರಣ, ಹಂಸಲೇಖ ಅವರು. ಅವರು ಕಾಲ್ ಮಾಡಿ, ನನ್ನ ಚಿತ್ರಕ್ಕೆ ನೀನು ಹೀರೋ ಅಂದಾಗ, ಖುಷಿಯಾಯ್ತು. ಚಿತ್ರಕ್ಕಾಗಿ ಅವರೇ ದೇಸಿ ಕಲೆಗಳನ್ನು ಕಲಿಯಲು ಪ್ರೋತ್ಸಾಹಿಸಿದರು. ನಿರ್ಮಾಪಕ ಬಾಬು ಸರ್ ಅವರ ಬೆಂಬಲ ಇದ್ದುದರಿಂದ ನಾನು “ಬಿಚ್ಚುಗತ್ತಿ’ ನಾಯಕನಾದೆ.
ಇನ್ನು, ಚಿತ್ರ ಶುರುವಿಗೆ ಮುನ್ನ 80 ಕೆಜಿ ತೂಕವಿದ್ದೆ. “ಬಾಹುಬಲಿ’ ಪ್ರಭಾಕರ್ 130 ಕೆಜಿ ತೂಕ ಇದ್ದರು. ಖಳನಟನಿಗೆ ಸರಿ ಸಮ ಇರಬೇಕು ಎಂಬ ಕಾರಣಕ್ಕೆ ನಾನು 108 ಕೆಜಿ ತೂಕ ಆದೆ. ಸಾಕಷ್ಟು ಎಫರ್ಟ್ ಹಾಕಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು’ಎಂದರು ರಾಜವರ್ಧನ್.ನಿರ್ದೇಶಕ ಹರಿ ಸಂತೋಷ್ ಅವರಿಗೆ ಈ ಚಿತ್ರ ಸಿಗೋಕೆ ಕಾರಣ ಹಂಸಲೇಖ ಅವರಂತೆ. “ನಿನಗೊಂದು ಕೆಲಸ ಕೊಡ್ತೀನಿ ಕಣೋ ಎಂದಿದ್ದರು.
ಆದರೆ, ಇಷ್ಟು ದೊಡ್ಡ ಕೆಲಸ ಕೊಡ್ತಾರೆ ಆಂತ ಭಾವಿಸಿರಲಿಲ್ಲ. ಇದು ನನ್ನ 9 ನೇ ಚಿತ್ರ. ರಾಜವರ್ಧನ್ ಕೂಡ ಈ ಸಿನಿಮಾ ಆಗಲು ಮುಖ್ಯ ಕಾರಣ. ಒಳ್ಳೆಯ ತಂಡ ಜೊತೆ ಇದ್ದುದರಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಐತಿಹಾಸಿಕ ಸಿನಿಮಾ ಮೇಲೆ ಒಲವು ಇತ್ತು. ಆದರೆ, ಮಾಡುವುದು ಸುಲಭ ಆಗಿರಲಿಲ್ಲ. ಬಿ.ಎಲ್.ವೇಣು ಅವರ ಕಾದಂಬರಿ ಓದಿಕೊಂಡಿದ್ದೆ. ಅವರದೇ ಕಾದಂಬರಿ ಚಿತ್ರವಿದು. ಇಂತಹ ಚಿತ್ರ ಮಾಡೋಕೆ ನಿರ್ಮಾಪಕರಿಗೆ ಧೈರ್ಯ ಬೇಕು.
ಜ್ಞಾನೇಶ್ ಬಾಬು, ನಿಶಾಂತ್, ಚಂದ್ರು ಅವರ ಎಫರ್ಟ್ ತುಂಬಾನೇ ಇದೆ. ಚಿತ್ರದುರ್ಗದ ಪ್ರೀತಿ, ಅಲ್ಲಿನ ಕಾದಂಬರಿ, ಅಲ್ಲಿನ ನೈಜತೆ ಇಲ್ಲಿ ತುಂಬಿಸಿದ್ದಾರೆ. ಇನ್ನು, ಪ್ರತಿಯೊಬ್ಬರ ಸಹಕಾರದಿಂದ “ಬಿಚ್ಚುಗತ್ತಿ’ ನಿರೀಕ್ಷೆ ಮೀರಿ ಬಂದಿದೆ. ಚಿತ್ರದಲ್ಲಿ ಸಿಜಿ ಕೆಲಸ ದೊಡ್ಡ ಭಾಗ. ಟೈಗರ್ ಸಿಜಿ ಕೆಲಸಕ್ಕೆ 8 ತಿಂಗಳ ಹಿಡಿದಿದೆ. ಅದಕ್ಕಾಗಿಯೇ ಕೋಟಿ ಖರ್ಚು ಮಾಡಲಾಗಿದೆ. ಹೈದರಾಬಾದ್ನ ಫೈಯರ್ ಪ್ಲೇ ತಂಡ ಅದ್ಭುತ ಕೆಲಸ ಮಾಡಿದೆ.
ಇಂತಹ ಚಿತ್ರ ಮಾಡಿದ್ದು ನನ್ನ ಅದೃಷ್ಟ’ ಎಂದರು ನಿರ್ದೇಶಕ ಹರಿ ಸಂತೋಷ್. ಹರಿಪ್ರಿಯಾ ಇಲ್ಲಿ ಸಿದ್ಧಾಂಬೆ ಎಂಬ ಪಾತ್ರ ಮಾಡಿದ್ದು, ಎರಡು ಶೇಡ್ ಇರುವ ಪಾತ್ರ ಎಂದರು ಅವರು. ಐತಿಹಾಸಿಕ ಸಿನಿಮಾದಲ್ಲಿ ಎಲ್ಲವೂ ವಿಶೇಷವಾಗಿವೆ. ಈ ಚಿತ್ರದ ಮೂಲಕ ಒಂದಷ್ಟು ವಿಷಯ ತಿಳಿದುಕೊಂಡಿದ್ದೇನೆ’ ಎಂದರು ಹರಿಪ್ರಿಯಾ. ಹಂಸಲೇಖ ಅವರಿಗೆ ಮೊದಲು ನಿರ್ಮಾಪಕ ಬಾಬು ಭೇಟಿ ಮಾಡಿ ಒಂದು ಐತಿಹಾಸಿಕ ಚಿತ್ರ ಮಾಡಬೇಕು.
ನೀವು ಸಂಗೀತ ಕೊಡಬೇಕು ಅಂದರಂತೆ. ನಿರ್ದೇಶಕರು ಯಾರು ಅಂದಾಗ, ಯಾರೂ ಇಲ್ಲ ಅಂದರಂತೆ. ಕೊನೆಗೆ, ಇದೊಂದು ಒಳ್ಳೆಯ ಸಿನಿಮಾ ಆಗುತ್ತೆ ಅಂದುಕೊಂಡು, ಸ್ವತಃ ಹಂಸಲೇಖ ಅವರೇ, ಹರಿಸಂತೋಷ್ ಅವರಿಗೆ ಈ ಪ್ರಾಜೆಕ್ಟ್ ಒಪ್ಪಿಸಿ, ಈಗ ಸಿನಿಮಾ ತೆರೆಗೆ ಬರುವಲ್ಲಿಗೆ ಕಾರಣರಾಗಿದ್ದಾರಂತೆ. ಇಂತಹ ಚಿತ್ರ ಮಾಡೋಕೆ ತಾಳ್ಮೆ, ಧೈರ್ಯ ಬೇಕು. ನಿರ್ಮಾಪಕರು ಧೈರ್ಯದಿಂದ ಸಿನಿಮಾ ಮಾಡಿದ್ದಾರೆ.
ಆವರಿಗೆ ಹಣ ಹಿಂದಿರುಗಲಿ’ ಎಂದರು ಹಂಸಲೇಖ. ನಟಿ ರೇಖಾ ಮೂಲತಃ ಚಿತ್ರದುರ್ಗದವರೇ ಆಗಿದ್ದರಿಂದ “ಬಿಚ್ಚುಗತ್ತಿ’ಯಲ್ಲಿ ನಟಿಸುವ ಅವಕಾಶ ಬಂದಾಗ, ನಮ್ಮೂರಿನ ಕಥೆಯಲ್ಲಿ ಯಾವ ಪಾತ್ರ ಸಿಕ್ಕರೂ ಮಾಡ್ತೀನಿ ಅಂತ ಒಪ್ಪಿ, ಇಲ್ಲಿ ವಯಸ್ಸಾದ ತಾಯಿ ಪಾತ್ರ ಮಾಡಿದ್ದಾರಂತೆ. ಚಿತ್ರಕ್ಕೆ ಗುರುಪ್ರಶಾಂತ್ ರೈ ಛಾಯಾಗ್ರಹಣ ಮಾಡಿದರೆ, ನಕುಲ್ ಅಭ್ಯಂಕರ್ ಸಂಗೀತ, ಸೂರಜ್ ಹಿನ್ನೆಲೆ ಸಂಗೀತವಿದೆ.