ನನ್ನನ್ನು ತಡ್ಕೊಂಡ್ ಸಿನ್ಮಾ ಮಾಡೋದು ಕಷ್ಟ…
Team Udayavani, Jun 22, 2018, 6:00 AM IST
ನಿರ್ಮಾಪಕರು ನನ್ನ ಹಾಕ್ಕೊಂಡು, ನನ್ನ ತಡ್ಕೊಂಡ್ ಸಿನ್ಮಾ ಮಾಡಿದ್ದಾರೆ. ಇದು ಹಿಟ್ ಆಗ್ಬೇಕು. ಯಾವ ರೇಂಜ್ಗೆ ಹಿಟ್ ಆಗಲಿ ಅಂದ್ರೆ, ಇವರ ಮನೆ ಮೇಲೆ ಮೂರು ಸಲ ರೈಡ್ ಆಗ್ಬೇಕು …’
– ಹೀಗೆ ಹೇಳಿದ್ದು, “ಯರ್ರಾಬಿರ್ರಿ ಸ್ಟಾರ್’ ಅಂತಿಟ್ಟುಕೊಂಡಿರುವ ಪ್ರಥಮ್. ಅವರು ಹಾಗೆ ಹೇಳಿದ್ದು, “ಎಂಎಲ್ಎ’ ಚಿತ್ರದ ನಿರ್ಮಾಪಕ ವೆಂಕಟೇಶ್ ರೆಡ್ಡಿ ಬಗ್ಗೆ. ಅಂದು ಚಿತ್ರದ ವಿಡೀಯೋ ಸಾಂಗ್ ಬಿಡುಗಡೆ ಮಾಡೋಕೆ ಧ್ರುವ ಸರ್ಜಾ ಬಂದಿದ್ದರು. ವಿಡೀಯೋ ಸಾಂಗ್ ರಿಲೀಸ್ ಬಳಿಕ ವೇದಿಕೆಯೇರಿದ ಪ್ರಥಮ್, ಬೇರೆಯವರು ಮಾತಾಡುವಾಗ ಮಾತು ತೂರಿಸುತ್ತಲೇ ಇದ್ದರು. ಕೊನೆಗೆ ತಮ್ಮ ಕೈಗೆ ಮೈಕ್ ಬಂದಾಗ ಮಾತಿಗಿಳಿದರು.
“ನನ್ನನ್ನು ತಡ್ಕೊಂಡ್ ಸಿನ್ಮಾ ಮಾಡೋದು ಕಷ್ಟ. ನನ್ನನ್ನೇ ಹಾಕಿ ಸಿನ್ಮಾ ಮಾಡಿದ್ ಮೇಲೆ, ಮುಂದೆ ಸಲ್ಮಾನ್ ಖಾನ್, ಜಾನ್ ಅಬ್ರಹಾಂ ಮತ್ತೆ ಕನ್ನಡದ ಎಂಟು ಸ್ಟಾರ್ಗಳನ್ನು ಇಟ್ಕೊಂಡ್ ಸಿನ್ಮಾ ಮಾಡಬಹುದು’ಅಂತ ಹೇಳುವಾಗ, “ಮಾತಿಗೆ ತಕ್ಕಂತೆ ನಟನೆ ಮಾಡಿದರೆ ಅಷ್ಟು ಸಾಕು …’ ಎಂಬ ಮಾತು ಹಿಂದಿನಿಂದ ತೂರಿಬಂತು. “ನಾನು ನಿರ್ದೇಶಕರು ಒಂಥರಾ ಹೊನ್ನವಳ್ಳಿ ಕೃಷ್ಣ ಮತ್ತು ಟೆನ್ನಿಸ್ ಕೃಷ್ಣ ಇದ್ದಂಗೆ. ರೇಖಾ ಮತ್ತು ನಾನು, ಸೋನಿಯಾ ಗಾಂಧಿ ಮತ್ತು ಸಿದಟಛಿರಾಮಯ್ಯ ಇದ್ದಂಗೆ.
ನಿರ್ಮಾಪಕರಿಬ್ಬರು ಹಕ್ಕ-ಬುಕ್ಕ ಇದ್ದಂಗೆ, ವಿಷ್ಣುವರ್ಧನ್-ದ್ವಾರಕೀಶ್ ಥರಾ ಅಂಟಿಕೊಂಡೇ ಇರ್ತಾರೆ’ ಅಂತೆಲ್ಲಾ ಬರೀ ಮಾತಿನ ಲಹರಿ ಹರಿಬಿಟ್ಟರೆ ಹೊರತು, ಚಿತ್ರದ ಬಗ್ಗೆ ಏನೂ ಹೇಳಲಿಲ್ಲ.
ವೀಡಿಯೋ ಸಾಂಗ್ ರಿಲೀಸ್ ಮಾಡಿದ ಧ್ರುವ ಸರ್ಜಾ, “ಚಿತ್ರಕ್ಕೆ ಒಳ್ಳೆಯದಾಗಲಿ. ಸದ್ಯಕೆ ಸಾಂಗ್ ನೋಡಿ ಒಂದಷ್ಟು ಮಾರ್ಕ್ಸ್ ಕೊಡ್ತೀನಿ. ಉಳಿದ ಮಾರ್ಕ್ಸ್ ಚಿತ್ರ ನೋಡಿದ್ಮೇಲೆ ಕೊಡ್ತೀನಿ’ ಅಂತ ಹೇಳಿ ಮಾತು ಮುಗಿಸಿದರು. ಅದಕ್ಕೂ ಮುನ್ನ ಚಿತ್ರತಂಡದವರು ಧ್ರುವ ಮತ್ತು ನಾಗೇಂದ್ರಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ನಿರ್ದೇಶಕ ಮೌರ್ಯ, “ಪ್ರಥಮ್ನಂತಹ ವಿಶಿಷ್ಟ ಮ್ಯಾನರಿಸಂ ವ್ಯಕ್ತಿ ಇಟ್ಟುಕೊಂಡು ಚಿತ್ರ ಮಾಡಿದ್ದೇನೆ. ಮನರಂಜನೆ ಜೊತೆಗೆ ಎಮೋಷನ್ಸ್ ಇದೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗೋ ಕಥೆ ಇಲ್ಲಿದೆ. “ಎಂಎಲ್ಎ’ ಅಂದರೆ, ಮದರ್ ಪ್ರಾಮೀಸ್ ಲೆಕ್ಕಕ್ಕೆ ಸಿಗದ ಆಸಾಮಿ ಎಂದರ್ಥ. ರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯರನ್ನು ಕೂರಿಸಿ,”ಮನುಷ್ಯರಿಗೆ ಆಸೆ ಇದ್ದರೆ ಏನೆಲ್ಲಾ ಆಗುತ್ತೆ ಎಂಬ ಕಥೆ’ ಹೇಳಿರುತ್ತಾರೆ. ಆ ಕಥೆಯ ಎಳೆ ಇಟ್ಟು ಮಾಡಿದ ನೀಟ್ ಫನ್ ಸಿನಿಮಾವಿದು’ ಅಂದರು ಮೌರ್ಯ.
ರೇಖಾ ಅವರದು ನೆಗೆಟಿವ್ ಪಾತ್ರ ಅಂತ ಮೊದಲು ನಿರ್ದೇಶಕರು ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ರೇಖಾ, “ನಾನು ಇಲ್ಲಿ ವಿಲನ್ ಅಲ್ಲ. ಒಂದು ಸ್ಟ್ರಾಂಗ್ ಪಾತ್ರ ಮಾಡಿದ್ದೇನೆ’ಎಂದು ಸ್ಪಷ್ಟಪಡಿಸಿದರು. ಒಂದು ಸಂದೇಶ ಸಾರುವ ಚಿತ್ರವಿದು ಅಂತ ಹೇಳಿ ನಾಯಕಿ ಕೈಗೆ ಮೈಕ್ ಕೊಟ್ಟರು.
ಸೋನಾಲ್ಗೆ ನಿರ್ದೇಶಕರು ಐದು ವರ್ಷದಿಂದ ಪರಿಚಯವಂತೆ. ನಾನು ನಿರ್ದೇಶಕನಾದರೆ, ನೀನೇ ನಾಯಕಿ ಅಂದಿದ್ದರಂತೆ. ಅದರ ಪ್ರಕಾರ ನಾಯಕಿಯನ್ನಾಗಿಸಿದ್ದಾರೆ ಅಂತ ಖುಷಿಗೊಂಡರು ಸೋನಾಲ್. ಛಾಯಾಗ್ರಾಹಕ ಕೃಷ್ಣಸಾರಥಿ, ಸಂಗೀತ ನಿರ್ದೇಶಕ ವಿಕ್ರಮ್ ಸುಬ್ರಹ್ಮಣ್ಯ, ನಾಗೇಂದ್ರ ಪ್ರಸಾದ್, ಕೆ.ಪಿ.ಶ್ರೀಕಾಂತ್ ನಿರ್ಮಾಪಕದ್ವಯರಾದ ವೆಂಕಟೇಶ್ರೆಡ್ಡಿ, ವೆಂಕಿ ಇತರರು ಇದ್ದರು.
– ವಿಜಯ್ ಭರಮಸಾಗರ