ಲಘುಕತೆ: ತಂತ್ರಜ್ಞಾನ!
Team Udayavani, Jun 2, 2019, 6:00 AM IST
ಓರ್ವ ಇಂಜಿನಿಯರ್ ಮತ್ತು ಅವನ ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರು. ಕಲಹದ ವೇಳೆ ಅವರ ತಾರಕ ಧ್ವನಿ ನೆರೆಹೊರೆಯವರಿಗೆ ನಡುರಾತ್ರಿಯವರೆಗೂ ಕೇಳಿಸುತ್ತಿತ್ತು. ಅಂಥ ಸಂದರ್ಭಗಳಲ್ಲಿ ಪತ್ನಿ, ತಾನು ಸತ್ತ ನಂತರ ಸಮಾಧಿಯನ್ನು ಅಗೆದು ಮೇಲಕ್ಕೆ ಬಂದು ಮತ್ತೆ ಪತಿಯನ್ನು ಪೀಡಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದಳು. ಆದ್ದರಿಂದ ನೆರೆಹೊರೆಯವರೂ ಆಕೆಗೆ ಹೆದರುತ್ತಿದ್ದರು ಮತ್ತು ಅದು ಆಕೆಗೆ ಹೆಮ್ಮೆಯ ವಿಷಯವೂ ಆಗಿತ್ತು. ಅದೃಷ್ಟವೊ ದುರದೃಷ್ಟವೊ ಆಕೆ ಇಹಲೋಕದ ಜೀವನ ಮುಗಿಸಿದಳು.
ಇಂಜಿನಿಯರ್ ಆಕೆಯ ಶವವನ್ನು ಹೂತು ಔತ್ತರೀಯ ಕರ್ಮಗಳನ್ನು ಪೂರ್ಣಗೊಳಿಸಿದ. ಬಳಿಕ ನಿರಾಳವಾಗಿ ಸ್ಥಳೀಯ ಮದ್ಯದಂಗಡಿ ಒಂದರೊಳಗೆ ನುಸುಳಿ ಇನ್ನಿಲ್ಲವೆಂಬಂತೆ ಮದಿರಾಪಾನ ನಿರತನಾದ. ಆತನ ಬಗ್ಗೆ ಕಾಳಜಿ ಹೊಂದಿರುವ ನೆರೆಹೊರೆಯವರು, “”ನಿಜವಾಗಿಯೂ ಆಕೆ ಸಮಾಧಿಯನ್ನು ಅಗೆದು ಹೊರಬಂದು ನಿನಗೆ ಉಪದ್ರವ ನೀಡಿಯಾಳು ಎಂದು ಹೆದರಿಕೆಯಾಗುವುದಿಲ್ಲವೆ?” ಎಂದು ವಿಚಾರಿಸಿದರು. ಶರಾಬಿನ ಗ್ಲಾಸ್ ಕೆಳಗಿರಿಸುತ್ತ ಇಂಜಿನಿಯರ್ ಗೆಲುವಿನ ನಗೆ ಬೀರುತ್ತಾ ಉತ್ತರಿಸಿದ, “”ಅವಳು ಎಷ್ಟು ಬೇಕಾದರೂ ಅಗೆಯಲಿ, ನಾನು ಆಕೆಯನ್ನು ತಲೆ ಕೆಳಗಾಗಿಸಿ ಹೂತಿದ್ದೇನೆ!”
ರಮಣ್ ಶೆಟ್ಟಿ