ದುಬೈಯಲ್ಲಿ ಗಣೇಶ
Team Udayavani, Sep 1, 2019, 5:15 AM IST
ಅರಬ್ ಸಂಯುಕ್ತ ಸಂಸ್ಥಾನದ (ಯುಎಇ)ವಿಶೇಷತೆ ಎಂದರೆ ಸಹಿಷ್ಣುತೆ. ಹೋದ ವರ್ಷವಂತೂ ಟಾಲರೆನ್ಸ್ ಇಯರ್ ಎಂದು, ಇಡೀ ವರ್ಷ ಆಚರಣೆ ಮಾಡಿದರು. ಅದಕ್ಕಾಗಿ ಒಂದು ಸಚಿವಾಲಯ ಇದೆ !
ಇಲ್ಲಿಗೆ ಮೊದಲ ಬಾರಿ ಬಂದಾಗ ಗಣೇಶನ ಹಬ್ಬ ಹೇಗಿರುತ್ತದೋ ಎಂದು ಕೊಂಡಿದ್ದೆ. ಮೊದಲ ಸಲ ಹಳೆ ದುಬೈನ ಬರ್ ದುಬೈಯಲ್ಲಿ ಪುಟ್ಟ ಬೋಟಿನಲ್ಲಿ ಗಣೇಶಮೂರ್ತಿಯನ್ನು ಕೂರಿಸಿಕೊಂಡು ಭಜನೆ ಮಾಡುತ್ತ ಸಾಗುತ್ತಿದ್ದರು ಗುಜರಾತಿ ದಂಪತಿ. ಅವರನ್ನೇ ತನ್ಮಯನಾಗಿ ನೋಡುತ್ತ ಬೆರಗುಗೊಂಡಿದ್ದೆ. ಊರಿನ ಹಬ್ಬದ ಸಡಗರ ಕಣ್ಣೆದುರು ಕಟ್ಟಲಾರಂಭಿಸಿತ್ತು.
ಇಲ್ಲಿ ಗಣೇಶ ಹಬ್ಬಕ್ಕಿಂತ ಸುಮಾರು ಇಪ್ಪತ್ತು ದಿನ ಮುಂಚೆಯೇ ಹಬ್ಬಕ್ಕೆ ಬೇಕಾದ ವಸ್ತುಗಳು ಭಾರತೀಯ ದಿನಸಿ ಅಂಗಡಿಗಳಲ್ಲಿ ಲಭ್ಯವಾಗಲು ಪ್ರಾರಂಭವಾಗುತ್ತವೆ. ಹಬ್ಬ ಹತ್ತಿರ ಬರುತ್ತಿದ್ದಂತೆ ಮಣ್ಣಿನ ಗಣೇಶಮೂರ್ತಿಗಳು ದೊರೆಯುತ್ತವೆ. ಪರಿಸರಸ್ನೇಹಿ ಮೂರ್ತಿ ಇಲ್ಲಿ ಜನಪ್ರಿಯ. ಮೋದಕದ ಅಚ್ಚು ,ಹೂಗಳು, ಗರಿಕೆ, ತಿಂಡಿತಿನಿಸು ಮಾಡಲು ಬೇಕಾದ ಸಾಮಾನುಪದಾರ್ಥಗಳು, ಪೂಜಾವಸ್ತುಗಳು ಇಲ್ಲಿಯೂ ಸಿಗುತ್ತವೆ. ಇಲ್ಲಿನ ಹೂವಿನ ಅಂಗಡಿಯಲ್ಲಿ ಹಬ್ಬದ ಮುನ್ನಾ ದಿನ ಸಂಜೆ ಬಹುದೊಡ್ಡ ನೂಕುನುಗ್ಗಲು.
ಗಣೇಶೋತ್ಸವ ಎಂದರೆ ಮನಸ್ಸಿಗೆ ಬರುವುದು ಇಲ್ಲಿನ ಮಹಾರಾಷ್ಟ್ರ ಮಂಡಳಿಯ ಗಣೇಶಹಬ್ಬ ಆಚರಣೆ. ಎರಡು ದಿನ ಅಬುಧಾಬಿ, ದುಬೈ, ಅಜ್ಮನ್ನಲ್ಲಿ ಸಾರ್ವಜನಿಕವಾಗಿ ಗಣೇಶಮೂರ್ತಿ ಇಟ್ಟು ಪೂಜೆ ನಡೆಯುತ್ತದೆ. ಪ್ರತೀವರ್ಷ ಅದಕ್ಕೆ ಒಂದು ಸಮಿತಿ, ಸ್ವಯಂಸೇವಕರು, ಪೂಜೆ, ಆರತಿ, ಶಿಸ್ತಿನ ವ್ಯವಸ್ಥೆ ಇರುತ್ತದೆ. ಆಡಳಿತ ವರ್ಗ ದಿಂದ ಅದಕ್ಕೆ ಬೇಕಾದ ಅಗತ್ಯ ಅನುಮತಿ ಸಹ ಪಡೆದುಕೊಂಡಿರುತ್ತಾರೆ.
ದುಬೈಯಲ್ಲಿ ಕರಾವಳಿಯ ಒಬ್ಬ ಹೊಟೇಲ್ ಉದ್ಯಮಿಗಳ ಮನೆಯಲ್ಲಿ ವಾರವಿಡೀ ಗಣೇಶನ ಹಬ್ಬ ಆಚರಣೆಯಿದೆ. ಈಗ ಬೆಂಗಳೂರಿನಲ್ಲಿ ನೆಲೆಸಿರುವ, ಹಿಂದೆ ಅಬುಧಾಬಿಯಲ್ಲಿದ್ದ ನಮ್ಮ ಸ್ನೇಹಿತರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಅಮೋಘವಾಗಿರುತ್ತಿತ್ತು. ಬೆಂಗಳೂರಿನಿಂದ ದುಬೈಗೆ ಗಣೇಶ ಆಗಮಿಸುತ್ತಿದ್ದ !
ವೀಕೆಂಡ್ ಆಗಿದ್ದರೆ ಹಬ್ಬದ ಸಂಭ್ರಮ ಹೆಚ್ಚು. ಹಬ್ಬದ ದಿನ ಬೆಳಗ್ಗೆ ನಮ್ಮ ಮನೆಯ ಎಲ್ಲ ಗಣಪತಿಗಳು ಪೂಜೆಗೆ ಕೂರುತ್ತಾರೆ ! ಅಂದರೆ, ಉಡುಗೊರೆಯಾಗಿ ಬಂದ ಎಲ್ಲ ಗಣಪತಿ ವಿಗ್ರಹಗಳನ್ನು ಇಟ್ಟು, ಗಣೇಶ ಅಥರ್ವಶೀರ್ಷ ಹೇಳಿ ಪೂಜೆ ಮಾಡುತ್ತೇವೆ.
ಹಬ್ಬದ ನೆಪದಲ್ಲಿ ಎಷ್ಟೊಂದು ಮಂದಿ ಸ್ನೇಹಿತರು ಆಗಮಿಸುತ್ತಾರೆ! ಸ್ನೇಹಿತರ ಮಕ್ಕಳಿಂದ ಗಣೇಶನ ಮುಂದೆ ಬಸ್ಕಿಹೊಡೆಯುವ ಸ್ಪರ್ಧೆ ಬೇರೆ ಏರ್ಪಡಿಸುತ್ತೇವೆ.ಕೊಲ್ಲಿ ರಾಷ್ಟ್ರವಾದರೂ ಬಾಳೆಎಲೆಯಲ್ಲಿಯೇ ಊಟ. ಗಣೇಶಚತುರ್ಥಿ ಎಂದರೆ ಉಪವಾಸವಿರುತ್ತೇವೆ. ಕಟ್ಟುನಿಟ್ಟಿನ ನಿರಾಹಾರ ವೇನೂ ಇಲ್ಲ. ನನ್ನವಳಂತೂ 21 ಬಗೆಯ ನೈವೇದ್ಯ ಮಾಡಿಟ್ಟಿರುತ್ತಾಳೆ. ಅವಳಿಗೆ ವಿನಾಯಕ ಇಷ್ಟದೇವತೆ. ನಾವು ನಮಗೆ ಇಷ್ಟವಾದ ಕಡುಬು, ಮೋದಕ, ಕರ್ಜಿಕಾಯಿ, ಉಂಡಲುಕ, ಪಂಚಕಜ್ಜಾಯ, ಉಂಡೆ, ಚಕ್ಕುಲಿ, ಕೋಡುಬಳೆ- ಹೀಗೆ ಹಲವು ಬಗೆ ತಿನಿಸುಗಳನ್ನು ಆಗಾಗ ತಿನ್ನುತ್ತ ಕಾಲ ಕ್ಷೇಪ ಮಾಡುತ್ತೇವೆ.
ನಮ್ಮ ಪಾಲಿಗೆ ಹಬ್ಬ ಕೇವಲ ಆಚರಣೆ ಅಲ್ಲ. ಊರಿನಿಂದ ದೂರವಾಗಿ ನೆಲೆಸಿರುವ ನಮ್ಮಂಥವರ ಯಾಂತ್ರಿಕ ಬದುಕಿನಲ್ಲಿ ಹೊಸ ಹುರುಪು ಮೂಡಲು ಇದೊಂದು ನೆಪ.
ಮತ್ತೆ ಗಣಪತಿ ಬಪ್ಪನ ಹುಟ್ಟುಹಬ್ಬ ಬಂದಿದೆ. ತವರೂರಿನ ಸಂಭ್ರಮವೇ ನೆನಪಾಗುತ್ತಿದೆ. ಅದನ್ನು ಮನಸ್ಸಿನಲ್ಲಿಟ್ಟು ಕೊಂಡು ಇಲ್ಲಿಯೂ ಹಬ್ಬದ ತಯಾರಿ ನಡೆಸುತ್ತಿದ್ದೇವೆ. ಒಂದೇ ದಿನದಲ್ಲಿ ಜಗವಿಡೀ ಸುತ್ತುವ ಗಣೇಶ ನಾವಿರುವ ದುಬೈಗೆ ಬಾರದಿರನು !
ಶ್ರೀಕೃಷ್ಣ ಕುಳಾಯಿ ದುಬೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್ಚಂದ್ರ ಅವರಿಂದ ಚಿಕಿತ್ಸೆ
Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ
Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…
LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ
Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ