ಕವಿಯು ತೀರಿದ ಮೇಲೆ ಕವಿತೆಯೇ ನಾಲಗೆ; ಗೋಪಾಲಕೃಷ್ಣ ಅಡಿಗ


Team Udayavani, Feb 3, 2019, 12:30 AM IST

x-6.jpg

1959ರಲ್ಲಿ ನಾನು ಹೊಳಲ್ಕೆರೆಯಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗ ಗೋಪಾಲಕೃಷ್ಣ ಅಡಿಗರ ಒಂದು ಪದ್ಯ ಪಠ್ಯದಲ್ಲಿತ್ತು. ಆ ವಯಸ್ಸಲ್ಲೇ ಅಡಿಗರ ಪದ್ಯ ಬೇಂದ್ರೆ, ಕುವೆಂಪು, ಕೆ.ಎಸ್‌. ನ ಅವರ ಪದ್ಯಗಳಿಗಿಂತ ಭಿನ್ನ ಅಂತ ನನಗೆ ಏಕೆ ಅನ್ನಿಸಿತೋ ತಿಳಿಯೆ. ಅನ್ನಿಸಿದ್ದಂತೂ ನಿಜ. 1966ರಲ್ಲಿ ನಾನು ಮಲ್ಲಾಡಿಹಳ್ಳಿಯ ಹೈಸ್ಕೂಲಿಗೆ ಟೆಕ್ನಿಕಲ್‌ ಅಸಿಸ್ಟೆಂಟ್‌ ಎಂಬ ಹುದ್ದೆಯ ನಿರ್ವಹಣೆಗೆ ಬಂದೆ. ಮಕ್ಕಳಿಗೆ ಸ್ಮಿತ್‌, ಕಾರ್ಫೆಂಟರಿ, ಲೇತ್‌ ವರ್ಕ್‌ ಮೊದಲಾದುವನ್ನು ಕಲಿಸುವುದು ನನ್ನ ಕೆಲಸವಾಗಿತ್ತು. ಓದಿದ್ದು ಡಿಪ್ಲೊಮಾ ಆದರೂ ನನಗೆ ಸಾಹಿತ್ಯದ ಅದಮ್ಯ ಹುಚ್ಚು. ನನ್ನ ಕನ್ನಡ ಪ್ರೀತಿ ಗಮನಿಸಿ ನಮ್ಮ ಪ್ರಿನ್ಸಿಪಾಲರು ನನಗೆ ಕನ್ನಡ ಕ್ಲಾಸ್‌ ಕೂಡ ತೆಗೆದುಕೊಳ್ಳುವಂತೆ ಹೇಳಿದರು. ನನಗೆ ಕವಿತೆ ಬರೆಯುವ ಚಟ ಬೇರೆ ಇತ್ತು. ಅದನ್ನು ಪ್ರೋತ್ಸಾಹಿಸುವಂಥ ವಾತಾವರಣವೂ ಮಲ್ಲಾಡಿಹಳ್ಳಿಯಲ್ಲಿ ಇತ್ತು! ಆಶ್ರಮ ಮತ್ತು ಶಾಲೆಯ ಸಂಸ್ಥಾಪಕರಾದ “ತಿರುಕ’ ಕಾವ್ಯನಾಮದ ಸ್ವಾಮಿಗಳೂ ಸ್ವತಃ ಬರಹಗಾರರಾಗಿದ್ದರು. ಎನ್‌. ಎಸ್‌. ಚಿದಂಬರರಾವ್‌ ನಮ್ಮ ಸ್ಕೂಲಲ್ಲೇ ಇಂಗ್ಲಿಷ್‌ ಅಧ್ಯಾಪಕರು. ಸಾಹಿತ್ಯ ನಮ್ಮಿಬ್ಬರನ್ನೂ ಗಾಢವಾಗಿ ಬೆಸೆದಿತ್ತು. ಹೇಳೀ ಕೇಳಿ ಅದು ನವ್ಯಕಾಲದ ವಿಜೃಂಭಣೆಯ ಕಾಲ. ಪ್ರಜಾವಾಣಿ ದಿನಪತ್ರಿಕೆಯಲ್ಲಿ ನವ್ಯಮಾರ್ಗದ ಕವಿತೆಗಳು, ನವ್ಯ ಮಾದರಿಯ ಕಥೆಗಳು ಪ್ರಕಟವಾಗುತ್ತಿದ್ದವು.  ಭಾನುವಾರ ನಾನು ಮತ್ತು ಎನ್‌.ಎಸ್‌. ಚಿದಂಬರರಾವ್‌ ಪತ್ರಿಕೆಯ ಪದ್ಯಗಳ ಗಂಟು ಬಿಡಿಸುವ ಆಟದಲ್ಲಿ ತೊಡಗಿಕೊಳ್ಳುತ್ತಿದ್ದೆವು! ನಮ್ಮ ಮನೆಗೆ ಸಾಕ್ಷಿ ಪತ್ರಿಕೆ, ಸಂಕ್ರಮಣ, ಕವಿತಾ, ಲಹರಿ ಮೊದಲಾದ ಪತ್ರಿಕೆಗಳು ಬರುತ್ತಾ ಇದ್ದವು. ಅಕ್ಷರ ಪ್ರಕಾಶನದಿಂದ ಬಹು ಮುಖ್ಯವಾದ ಎಲ್ಲಾ ನವ್ಯ ಕೃತಿಗಳನ್ನೂ ನಾನು ತರಿಸಿಕೊಂಡಿದೆ ª! ಅವುಗಳ ಅಭ್ಯಾಸ ಮಾಡುತ್ತ ಇದ್ದೆ ! 1968ರಲ್ಲಿ ನನ್ನ ಮದುವೆಯಾದಾಗ ಮನೋಹರಗ್ರಂಥಮಾಲೆ ಪ್ರಕಟಿಸಿದ ಸಂಸ್ಕಾರ, ಹಳದಿಮೀನು , ರಾಮಾನುಜನ್ನರ ಹೊಕ್ಕುಳಲ್ಲಿ ಹೂವಿಲ್ಲ ನನಗೆ ಉಡುಗೊರೆಯಾಗಿ ಬಂದಿದ್ದವು. ಜೊತೆಗೆ ಬಂಕಿಮಚಂದ್ರ, ಶಾಂತಲಾ (ಕೆ.ವಿ.ಅಯ್ಯರ್‌-ದು) ಕೃತಿಗಳನ್ನು ನನ್ನ ಗೆಳೆಯರು ಉಡುಗೊರೆಯಾಗಿ ನೀಡಿದ್ದರು! ನಾನು ಆ ವರ್ಷಗಳಲ್ಲೇ ಕುವೆಂಪು ಅವರ ಶ್ರೀರಾಮಾಯಣದರ್ಶನಂನ್ನು ಚಿತ್ರದುರ್ಗದಿಂದ ತರಿಸಿ ನನ್ನ ಸಾಹಿತ್ಯಾಸಕ್ತ ಗೆಳೆಯ ಕಾಮತರೊಂದಿಗೆ ಓದತೊಡಗಿದ್ದೆ. ಜೊತೆಗೆ ನನಗೆ ಪ್ರಿಯ ಕವಿಯಾಗಿದ್ದ ಕುಮಾರವ್ಯಾಸ. ಚಿದಂಬರ ರಾವ್‌ ಕೂಡ ಕುಮಾರವ್ಯಾಸನ ಭಕ್ತರಾಗಿದ್ದರು. ಗಮಕ ರೀತಿಯಲ್ಲಿ ಗದುಗಿನ ಭಾರತವನ್ನು ಸೊಗಸಾಗಿ ಹಾಡುತ್ತಿದ್ದರು. ಹೀಗೆ ನಾನೊಂದು ಸಮ್ಮಿಶ್ರ ಸಾಹಿತ್ಯಕ ವಾತಾವರಣದಲ್ಲಿ ಬೆಳೆದವನಾದರೂ ನನ್ನ ಮೇಲೆ ನವ್ಯ ಸಂಪ್ರದಾಯದ ಬರವಣಿಗೆ ಗಾಢವಾದ ಪ್ರಭಾವ ಬೀರಿತ್ತು. ಅದರಲ್ಲೂ ಅಡಿಗರ ಕಾವ್ಯದ ಪ್ರಖರತೆ, ಮೊನಚು, ಧ್ಯಾನಶೀಲತೆ, ವಿಡಂಬನೆ, ಚಿಂತನೆ, ಭಾವಕ್ಕೆ ತಕ್ಕಂತೆ ಪ್ರವಹಿಸುವ ಲಯ ಇವುಗಳಿಂದ ಆಕರ್ಷಿತನಾಗಿ ಚಿದಂಬರ ರಾವ್‌ ಜೊತೆಗೂಡಿ ಗೋಪಾಲಕೃಷ್ಣ ಅಡಿಗರ ಪದ್ಯಗಳನ್ನು ಏಕಾಗ್ರತೆಯಿಂದ ಓದತೊಡಗಿದ್ದೆ!

ಆ ಕಾಲದಲ್ಲಿ ಅಡಿಗ ಓರ್ವ ಪ್ರಶ್ನಾತೀತ ಕವಿಯಾಗಿದ್ದರು. ಕಾವ್ಯ ಬರೆಯುವವರಿಗೆ ಅವರೇ ಆದರ್ಶ. ಆದರೆ, ಅವರಂತೆ ಬರೆಯುವುದು ಕಷ್ಟಸಾಧ್ಯವಾದುದರಿಂದ ಎ.ಕೆ. ರಾಮಾನುಜನ್‌, ಪಿ. ಲಂಕೇಶರನ್ನು ತರುಣರು ಹೆಚ್ಚಾಗಿ ಅನುಸರಿಸುತ್ತ (ಅನುಕರಿಸುತ್ತ!) ಇದ್ದರು. ಜೊತೆಗೆ ನಿಸಾರ್‌ ಅಹಮದರು. ನಾನೂ ಪ್ರಾರಂಭದಲ್ಲಿ ಈ ಮೂವರು ಕವಿಗಳ ಶೈಲಿಯನ್ನು ನನ್ನ ಮೇಲೆ ಆರೋಪಿಸಿಕೊಂಡು ಕವಿತೆ ಬರೆಯಲು ಶುರುಮಾಡಿದೆ! ಆ ಕಾಲದಲ್ಲಿ ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ ಎಲ್ಲವೂ ಅಡಿಗರ ಒಂದು ವಾಕ್ಯದ ಒಪ್ಪಿಗೆಗೆ ಹಾತೊರೆಯುತ್ತಿದ್ದವು. ಅವರ ಮಾತೇ ಆಖೈರ್‌ ಮಾತಾಗುತ್ತಿತ್ತು. “ಸಾಕ್ಷಿ’, “ಪ್ರಜಾವಾಣಿ’ ಪತ್ರಿಕೆಗಳಲ್ಲಿ ತಮ್ಮ ಬರಹ ಪ್ರಕಟವಾಗಬೇಕೆಂಬುದು ಹೊಸಲೇಖಕರ ತಹತಹವಾಗಿತ್ತು! (“ಪ್ರಜಾವಾಣಿ’ಯಲ್ಲಿ  ವೈ.ಎನ್‌.ಕೆ ಇದ್ದರಲ್ಲ!).  ನವ್ಯಕಾವ್ಯ ಅಡಿಗರ ಮೂಲಕ ತನ್ನ ಕಾವ್ಯಮೀಮಾಂಸೆಯನ್ನು ಗಟ್ಟಿಯಾಗಿ ರೂಪಿಸಿಕೊಂಡಿತ್ತು. ಆಡುಮಾತು, ಮಣ್ಣಿನವಾಸನೆ, ಭಾಷೆಯಲ್ಲಿ ಭಾವಾಭಿನಯ, ಭಾವಕ್ಕೆ ತಕ್ಕ ಲಯ, ಹಾಡುವಂತೆ ಬರೆಯಬಾರದೆಂಬ ಛಲ, ತನಗೆ ದಕ್ಕಿದ್ದನ್ನು ಪ್ರಾಮಾಣಿಕವಾಗಿ ಸಮಗ್ರವಾಗಿ ಭಾಷೆಯ ಮೂಲಕ ಅಭಿವ್ಯಕ್ತಿಸಬೇಕೆಂಬ ಹಠ, ನಾವು ಬರೆಯಬೇಕಾದದ್ದು ಮೌಲ್ಯಾರಾಧನೆಯ ಕಾವ್ಯವನ್ನಲ್ಲ; ಮೌಲ್ಯಶೋಧಕ ಕಾವ್ಯವನ್ನೆಂಬ ನಿಲುವು ಎಲ್ಲವನ್ನೂ ನಾನೂ ಸಾರಾಸಗಟಾಗಿ ಆವಾಹಿಸಿಕೊಂಡವನೇ!

1968ರಲ್ಲಿ ನನ್ನ ಪ್ರಥಮ ಕವನ ಸಂಕಲನ ಗೆಳೆಯ ಈಶ್ವರಚಂದ್ರನ ಸಹಕಾರದಿಂದ ಪ್ರಕಟವಾಯಿತು. ಆಗ ಗೋಪಾಲಕೃಷ್ಣ ಅಡಿಗರು ಉಡುಪಿಯಲ್ಲಿದ್ದರು. ಅಡಿಗರಿಗೆ ಒಂದು ಪ್ರತಿ ಕಳಿಸಿ ಅವರ ಅಭಿಪ್ರಾಯಕ್ಕೆ ಕಾಯುತ್ತ ಕುಳಿತೆ. ತಿಂಗಳುಗಳೇ ಆದವು. ಅಡಿಗರಿಂದ ಪತ್ರ ಬರಲಿಲ್ಲ. ನನ್ನಂಥ ಹೊಸಕವಿಯನ್ನು ಓದುವುದಕ್ಕೆ ಅವರಿಗೆ ವ್ಯವಧಾನ ಎಲ್ಲಿರುತ್ತೆ ಎನ್ನುವ ನಿರಾಶೆ ನಿಧಾನಕ್ಕೆ ಮನಸ್ಸನ್ನು ಆವರಿಸಿತು. ಇನ್ನು ಪದ್ಯಗಳನ್ನು ಬರೆಯದಿರುವುದೇ ಸೈ- ಎಂದು ಗೋವಿಂದ ಪೈ ಪ್ರಾಸತ್ಯಾಗದ ಬಗ್ಗೆ ಪ್ರತಿಜ್ಞೆ ಮಾಡಿದಂತೆ ಪ್ರತಿಜ್ಞೆ ಮಾಡಿದ್ದೂ ಆಯಿತು. ಹೀಗಿರುವಾಗ ಒಂದು ದಿನ ಅಡಿಗರಿಂದ ಪತ್ರವೊಂದು ಬಂದೇ ಬಿಡೋದೆ! ಕವರ್‌ ಬಿಡಿಸಿ ನೋಡಿದೆ. ಹೌದು. ಅಡಿಗರದ್ದೇ ಹಸ್ತಾಕ್ಷರದ ಸಾಕಷ್ಟು ದೀರ್ಘ‌ವಾದ ಪತ್ರ. ನಿಮ್ಮ ಕಾವ್ಯ ಪ್ರಯೋಗಗಳೆಲ್ಲವೂ ನಿಜವಾದ ಕಾವ್ಯ ಪ್ರಯೋಗಗಳೆಂದು ಬರೆದಿದ್ದಾರೆ. ನಾನು ಮತ್ತೆ ಕಾವ್ಯ ರಚನೆಗೆ ತೊಡಗಿಯೇ ಬಿಟ್ಟೆ. ಆಮೇಲೆ ಎಲ್ಲೂ ನಿಲ್ಲಲಿಲ್ಲ. ಈವರೆವಿಗೂ ಬರೆಯುತ್ತಲೇ ಬಂದಿದ್ದೇನೆ. ಅಡಿಗರಿಗೆ ನಾನು ಬಾಯಿಮಾತಿನ ಕೃತಜ್ಞತೆ ಹೇಳಿದರೆ ಸಾಕೆ?

ಮುಂದೆ ಎಂ.ಎ. ಮಾಡಿ ನಾನು ಬೆಂಗಳೂರಿಗೆ ಬಂದೆ. ಅಡಿಗರೂ ಬೆಂಗಳೂರಿಗೆ ಬಂದು ನೆಲೆಸಿದ್ದರು. ಅವರನ್ನು ಮತ್ತೆ ಮತ್ತೆ ಭೇಟಿ ಮಾಡುವುದು ಶುರುವಾಯಿತು. ಕ್ರಮೇಣ ಅಡಿಗರೂ ನನ್ನೊಂದಿಗೆ ಸ್ನೇಹಶೀಲರಾಗಿ ನಡೆದುಕೊಳ್ಳತೊಡಗಿದರು. ಯುದ್ಧವೊಂದನ್ನು ಗೆದ್ದ ಹೆಮ್ಮೆ ನನಗೆ. ನನ್ನ ಕವಿತೆ ಲೇಖನಗಳೂ ಸಾಕ್ಷಿಯಲ್ಲಿ ಪ್ರಕಟವಾದವು. ಹೌದು, ನಾನೂ ಕವಿಯೇ ಎಂದು ವಿಶ್ವಾಸ ಉಂಟಾಯಿತು. ಅಡಿಗರು ಸುಲಭಕ್ಕೆ ಯಾರನ್ನೂ ಒಪ್ಪುವವರಲ್ಲ. ಬೇಂದ್ರೆಯೊಬ್ಬರನ್ನು ಮಾತ್ರ ಅವರು ದೊಡ್ಡ ಕವಿ ಎನ್ನುತ್ತಿದ್ದರು. ತಮಗಿಂತ ಕಿರಿಯರಾದ ಪ್ರತಿಭಾಶಾಲಿಗಳ ಬಗ್ಗೆ ಅಪಾರ ಪ್ರೀತಿ ಅವರಿಗೆ. ಎಷ್ಟು ಜನ ತರುಣರಿಗೆ ಅವರು ಮುನ್ನುಡಿಗಳನ್ನು ಬರೆದು ಪ್ರೋತ್ಸಾಹಿಸಿದರು. ಅವರು ಗುರುತಿಸಿದ್ದ ಲೇಖಕರೆಲ್ಲ ಮುಂದೆ ದೊಡ್ಡ ದೊಡ್ಡ ಲೇಖಕರಾಗಿ ರೂಪುಗೊಂಡವರೇ.  ಹಗಲಲ್ಲಿ ಮರೆಯಾಗುವ ನಕ್ಷತ್ರಗಳಂತೆ ಹಳಬರು ಹಿಂದೆ ಸರಿದರು. ಅಡಿಗರು ಬರೆಯುವ ಸಂದರ್ಭದಲ್ಲಿ ಎಂಬ ನುಡಿಗಟ್ಟು ಚಲಾವಣೆಗೆ ಬಂತು. ಆಗಿನ ವಾತಾವರಣ ಹೇಗಿತ್ತು ಎಂಬುದನ್ನು ಸೂಚಿಸಲಷ್ಟೇ ಈ ಮಾತು ಹೇಳುತ್ತಿದ್ದೇನೆ. ಅನೇಕರು ಸಮರ್ಥವಾಗಿ ಬರೆಯುವ ಮೂಲಕವೇ ಒಂದು ಸಮೃದ್ಧ ಸಾಹಿತ್ಯ ಸಂಸ್ಕೃತಿ ನಿರ್ಮಾಣವಾಗುವುದೆಂಬುದೇ ನನ್ನ ಗಾಢ ನಂಬಿಕೆ. 

ಅಡಿಗರು ಗಹನವಾದ ಕಾವ್ಯ ರಚನೆಯಿಂದಷ್ಟೇ ತನ್ನ ಬಾಳು ಸಾರ್ಥಕವಾಗುವುದು ಎಂದು ದೃಢವಾಗಿ ನಂಬಿದ್ದರು. ಆ ನಂಬಿಕೆ ನಿಜವಾಗುವಂತೆ ಅದ್ಭುತವಾದ ಧ್ಯಾನಶೀಲ ಕವಿತೆಗಳನ್ನೂ ರಚಿಸಿದರು. ವೈಯಕ್ತಿಕವಾಗಿ ಅವರ ಭೂಮಿಗೀತ ಮತ್ತು ವರ್ಧಮಾನ ನನ್ನ ಬಹುಮೆಚ್ಚಿನ ಕವಿತಾ ಸಂಗ್ರಹಗಳು. ಅವುಗಳಲ್ಲೇ ಅವರ ಹೆಚ್ಚಿನ ಕಾಂಟೆಂಪ್ಲೇಟೀವ್‌ ಕವಿತೆಗಳಿರುವುದು. ಲಯವಿದೆ, ಆದರೆ ಆ ಲಯದಲ್ಲಿ ಲೋಲುಪ್ತಿಯಿಲ್ಲ. ಆಡುನುಡಿಯ ನುಡಿಗಟ್ಟಿದೆ, ಆದರದು ಗದ್ಯಾತ್ಮಕವಾಗಿಲ್ಲ.  ಹೊಸ ಹೊಸ ಪ್ರತಿಮೆಗಳು, ಮುಕ್ತವಾದ ಭಾಷಾಪ್ರಯೋಗ, ಹತ್ತು ಸಂಗತಿಗಳನ್ನು ಒಂದು ಪಂಕ್ತಿಯಲ್ಲಿ ಹೇಳುವ ಕ್ರೋಢೀಕರಣ ಪ್ರತಿಭೆ. ಪಂಪ, ವಚನಕಾರರ‌ಲ್ಲಿ ಇತ್ತಲ್ಲ ಅಂಥ ಬಿಕ್ಕಟ್ಟು. ಕಾವ್ಯದ ಬಗ್ಗೆ ಅವರಿಗಿದ್ದ ನಿತಾಂತ ನಿಷ್ಠೆ ನಂತರದ ಅನೇಕರಿಗೆ ಇಲ್ಲ. ಈ ಮಾಧ್ಯಮ ನಿಷ್ಠೆ, ಪ್ರಖರ ಸಾಮಾಜಿಕ ಪ್ರಜ್ಞೆ, ಕಾವ್ಯ ಮೂಲಭೂತವಾಗಿ ಒಂದು ಕಲಾರಚನೆ ಎಂಬ ನಚ್ಚು, ಅಸಾಮಾನ್ಯವಾದ ಸಂಕಲ್ಪ ಬಲ… ಅಡಿಗರನ್ನು ದೊಡ್ಡ ಕವಿಯನ್ನಾಗಿ ಮಾಡಿದೆ.

ಅಡಿಗರು ಕಾವ್ಯರಚನೆಯಲ್ಲಿ ನೂರಕ್ಕೆ ನೂರು ಗಹನಗಂಭೀರ. ಆದರೆ ನಿತ್ಯವ್ಯವಹಾರದಲ್ಲಿ ತಮಾಷೆ, ಚೇಷ್ಟೆ, ವ್ಯವಹಾರಶೂನ್ಯತೆ ಅವರನ್ನು ನಮ್ಮೆಲ್ಲರ ಹತ್ತಿರ ತರುತ್ತಿತ್ತು. ಯಾರನ್ನಾದರೂ ಟೀಕಿಸುವಾಗ ಅವರು ಕಣ್ಣು ಹೊಡೆಯುವ ರೀತಿ ನೋಡುವಂತಿರುತ್ತಿತ್ತು. ಒಬ್ಬ ಹಿರಿಯ ಕವಿ ಒಮ್ಮೆ ಅಡಿಗರ ಮನೆಗೆ ಬಂದಾಗ ತಿಳಿಯದೆ ಅವರು ಯಾವಾಗಲೂ ಕೂತುಕೊಳ್ಳುವ ಕುರ್ಚಿಯಲ್ಲಿ ಕೂತು ಬಿಟ್ಟಿದ್ದಾರೆ. ಅವರು ಮಾತಾಡಿ ಹೋದಮೇಲೆ, ಅಡಿಗರು ನಮ್ಮನ್ನು ನೋಡಿ ಕಣ್ಣು ಹೊಡೆದು ಹೇಳಿದ್ದು , “ನೋಡಿದಿರಾ? ಅವರಿಗೆ ನನ್ನ ಕುರ್ಚಿಯ ಮೇಲೆ ಕಣ್ಣು!’

ಪುಂಖಾನುಪುಂಖವಾಗಿ ಅಡಿಗರು ಸಿಗರೇಟು ಸುಡುತ್ತ ಕೂತಿದ್ದಾರೆ. ನಾನು, “ಸರ್‌, ನಿಮಗೆ ಹೇಗೆ ಇಂಥ ಅದ್ಭುತ ಪ್ರತೀಕಗಳು ಹೊಳೆಯುತ್ತವೆ’ ಎಂದು ಮುಗ್ಧವಾಗಿ ಕೇಳುತ್ತೇನೆ. ಅಡಿಗರು ಒಂದು ಕ್ಷಣ ತಡೆದು ತಣ್ಣಗೆ ನಗುತ್ತಾರೆ, “ಅವೆಲ್ಲ ನನ್ನ ಬೆನ್ನ ಹಿಂದೆ ನಿಂತ ಯಾರೋ ಥಟ್ಟನೆ ನನ್ನ ಟೇಬಲ್ಲಿನ ಮೇಲೆ ಹಾಕುತ್ತಾರೆ’. ನಾನು ತಿಳಿದಂತೆ ಟೈರಹಿತ ಸೂಟುಧಾರಿ ಕವಿಗಳಲ್ಲಿ ಅಡಿಗರೇ ಮೊದಲಿಗರು. ಅವರು ಗಾಂಧಿಬಜಾರಿಗೆ ತರಕಾರಿ ವ್ಯಾಪಾರ ಮತ್ತು ನಾಡಿಗರ ಕರ್ನಾಟಕ ಬುಕ್‌ ಹೌಸಿನಲ್ಲಿ ಸ್ನೇಹಿತರನ್ನು ಭೆಟ್ಟಿ ಮಾಡಿ ಸರಸ-ಸಲ್ಲಾಪ ನಡೆಸಲು ನಿತ್ಯವೂ ಬರುತ್ತ ಇದ್ದರು. ಅವರೊಂದಿಗೆ ಸ್ವಲ್ಪ ಕಾಲ ಕಳೆಯುವುದಕ್ಕೆ ನಾನು ಬಿಡುವಾದಾಗ ಗಾಂಧಿಬಜಾರಿಗೆ ಹೋಗುತ್ತಿದ್ದೆ. ಸ್ವಲ್ಪ ಹೊತ್ತು ತಮ್ಮನ್ನು ನೋಡಲು ಬರುವ ತರುಣರೊಂದಿಗೆ ಮುಕ್ತವಾಗಿ ಹರಟಿದ್ದಾದ ಮೇಲೆ ಗುಂಪು ಗಾಂಧಿಬಜಾರಿನ ಪಶ್ಚಿಮ ತುದಿಯಲ್ಲಿದ್ದ ಅಷ್ಟೇನು ರಶ್‌ ಇರದ ಹೊಟೇಲ್ಲಿಗೆ ಹೋಗುವುದು. “ನನಗೆ ಅರ್ಧ ದೋಸೆ ಸಾಕಪ್ಪಾ’ ಅನ್ನುವರು ಅಡಿಗರು. ಅಲ್ಲಿ ಅರ್ಧ ಮಸಾಲೆ ತಿಂದು ಸಿಗರೇಟು ಸುಟ್ಟು ತರಕಾರಿ ಚೀಲ ಸಮೇತ ಅವರು ರಿಕ್ಷಾದಲ್ಲಿ ಮನೆಗೆ ಹೊರಟಾಗ ನಾನಂತೂ ಬೆರಗಿನಿಂದ ಈ ಕವಿಯನ್ನು ನೋಡುತ್ತಾ ಇದ್ದೆ. ಹಿರಿಮೆ ಕಾವ್ಯದಲ್ಲಿ, ಸರಳಸಾಮಾನ್ಯತೆ ನಿತ್ಯ ಬದುಕಿನಲ್ಲಿ!

ಅಡಿಗರು ನಾನು ಅವರ ಮನೆಗೆ ಹೋದಾಗ ತಮ್ಮ ಕಾವ್ಯದ ಬಗ್ಗೆ ಯಾವತ್ತೂ ಮಾತಾಡಿದವರಲ್ಲ. ತಮ್ಮ ಮನೆಯಲ್ಲಿ ಮನೆವಂದಿಗರಾಗಿ ನೆಲೆಸಿರುವ ನಾಯಿ-ಬೆಕ್ಕುಗಳ ಮೇಲೇ ಅವರ ಮಾತು. “ಪುಟ್ಟ’ ಎಂಬ ನಾಯಿಯಂತೂ ಅವರಿಗೆ ಅತ್ಯಂತ ಪ್ರಿಯವಾಗಿತ್ತು. “ಪುಟ್ಟನಿಗೆ ಪಪ್ಪಾಯಿ ಎಂದರೆ ತುಂಬ ಇಷ್ಟ’, “ಪುಟ್ಟನಿಗೆ ಕೊಳಕರನ್ನು ಕಂಡರಾಗುವುದಿಲ್ಲ’, “ಪುಟ್ಟನಿಗೆ ಕನ್ನಡ ಹೇಗೆ ಅರ್ಥವಾಗುತ್ತೆ’ ಎಲ್ಲವನ್ನೂ ಬಣ್ಣಿಸಿ ಬಣ್ಣಿಸಿ ಮಾತಾಡುತ್ತಿದ್ದರು. ಇದು ತನ್ನ ಬಗ್ಗೆಯೇ ಅಡಿಗರು ಹೇಳುತ್ತಿರುವ ಮಾತು ಎಂದು ಆ ಮೂಕಜೀವಿಗೆ ಹೇಗೆ ತಿಳಿಯುತ್ತಿತ್ತೋ. ಅದು ಮಾತುಗಳನ್ನು ಆಲಿಸುತ್ತ ಬಾಲ ಗುಂಡಾಡಿಸುತ್ತ ನಮ್ಮ ಮುಂದೇ ಕೂತಿರುತ್ತಿತ್ತು.

ಅಡಿಗರ ಮನೆಯಲ್ಲಿ ಒಂದು ಬೆಕ್ಕಲ್ಲ; ಬೆಕ್ಕಿನ ಸಂಸಾರವೇ ಇತ್ತು! ಯಜಮಾನ ಬೆಕ್ಕನ್ನು “ಗುಂಡ’ ಎಂದು ಅವರು ಕರೆಯುತ್ತಿದ್ದರು ಎಂದು ನನ್ನ ನೆನಪು. ಅವರು ಮನೆ ಬದಲಿಸಿ ಬಾಡಿಗೆ ಮನೆಯಿಂದ ಸ್ವಗೃಹಕ್ಕೆ ಬಂದಾಗ ಗುಂಡ ಎಲ್ಲಿ ಹೋಗಿದ್ದನೋ! ಎಷ್ಟು ಕಾದರೂ ಅವನು ಹಿಂದಿರುಗಿಲ್ಲ. ಮನೆ ಬದಲಿಸಿದ ಮೇಲೂ ಗುಂಡನನ್ನು ಕರೆತರಲು ಅಡಿಗರು ಎಷ್ಟೋ ಬಾರಿ ತಾವು ಹಿಂದಿದ್ದ ಮನೆಗೆ ಹೋಗಿದ್ದಾರೆ. ಒಮ್ಮೆ ಮಾತ್ರ ಗುಂಡ ಸಿಕ್ಕನಂತೆ. ಅಡಿಗರು ಕರೆದಾಗ ನೀವ್ಯಾರೋ ನನಗೆ ಗೊತ್ತೇ ಇಲ್ಲ ಎಂಬಂತೆ ಹೊರಟು ಹೋದನಂತೆ. ಅಡಿಗರು ನೊಂದುಕೊಂಡು ಹೇಳಿದರು, “ನಾಯಿಗಳಿಗೆ ಮನುಷ್ಯ ಮುಖ್ಯ. ಬೆಕ್ಕುಗಳಿಗೆ ಸ್ಥಳ ಮುಖ್ಯ. ನೋಡಿ, ಗುಂಡ ನಾನು ಕರೆದರೂ ನನ್ನೊಂದಿಗೆ ಬರಲೇ ಇಲ್ಲ’

ಅಡಿಗರ ಕಾವ್ಯ ಎಲಿಯೆಟ್‌, ಏಟ್ಸ್‌ ಮೊದಲಾದ ಇಂಗ್ಲಿಷ್‌ ಕವಿಗಳತ್ತ ಕೈಚಾಚಿದ್ದರೂ ಅದರ ಬೇರು ನಮ್ಮ ಋಷಿಪರಂಪರೆಯಲ್ಲಿ ಇತ್ತು. ಅದಕ್ಕೇ ಅಡಿಗರು ಪ್ರಧಾನವಾಗಿ ಆಷೇìಯ ಕವಿ ಎಂದು ಅನಂತಮೂರ್ತಿ ಹೇಳಿದ್ದು. ಕಡೆಕಡೆಯ ದಿನಗಳಲ್ಲಿ ಅಡಿಗರು ತುಂಬ ಮಿದುವಾಗಿದ್ದರು. ಆಪ್ತರನ್ನು ನೋಡಿದಾಗ ಅವರ ಕಣ್ಣಲ್ಲಿ ನೀರೇ ಬಂದುಬಿಡುತ್ತ ಇತ್ತು. ನಿಷ್ಠೆ ಎಂಬುದು ಅವರು ಮೆಚ್ಚುವ ಬಹುದೊಡ್ಡ ಮೌಲ್ಯವಾಗಿತ್ತು. ಸ್ನೇಹ, ಪ್ರೀತಿ, ಭಕ್ತಿ ಎಲ್ಲದರಲ್ಲಿಯೂ ದೃಢವಾದ ನಿಷ್ಠೆ ಇರಬೇಕಯ್ನಾ ಎಂದು ಯಾವಾಗಲೂ ಹೇಳುತ್ತಿದ್ದರು.

ಅವರ ಸಮಗ್ರ ಕಥೆಗಳ ಸಂಗ್ರಹಕ್ಕೆ ನಾನು ಮುನ್ನುಡಿ ಬರೆದದ್ದು ಅವರು ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು ತೋರುವುದೆಂದು ನಾನು ನಂಬಿದ್ದೇನೆ. ಅವರ ಬರವಣಿಗೆಗೆ ಯಾರ ಮುನ್ನುಡಿಯ ಅಗತ್ಯವಿತ್ತು? ಇವೆಲ್ಲ ಪ್ರೀತಿಯ ಅಭಿವ್ಯಕ್ತಿಗೆ ನಾವು ಹುಡುಕಿಕೊಂಡ ಉಪಾಯಗಳಲ್ಲವೇ ಎಂದು ನಾನು ಅನೇಕ ಬಾರಿ ಅಂದುಕೊಳ್ಳುತ್ತೇನೆ. 

ಅಡಿಗರಿಗೆ ತಮಗಿಂತ ಹಿರಿಯರು, ತಮ್ಮ ಸಮಕಾಲೀನರು ಆದ ಲೇಖಕರಿಗಿಂತ ತಮಗಿಂತ ಕಿರಿಯರೊಂದಿಗೇ ಹೆಚ್ಚಿನ ಒಡನಾಟ. ಯು. ಆರ್‌. ಅನಂತಮೂರ್ತಿ, ಪಿ. ಲಂಕೇಶ್‌, ಎಂ.ಜಿ. ಕೃಷ್ಣಮೂರ್ತಿ , ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ, ಜಿ. ಎಚ್‌. ನಾಯಕ, ಚಂದ್ರಶೇಖರ ಕಂಬಾರ, ಕೆ. ಸದಾಶಿವ, ಟಿ. ಜಿ. ರಾಘವ, ಆಲನಹಳ್ಳಿ ಕೃಷ್ಣ, ಎಂ. ಎನ್‌. ವ್ಯಾಸರಾವ್‌, ಎಸ್‌. ದಿವಾಕರ, ಬಿ. ಆರ್‌. ಲಕ್ಷ್ಮಣ ರಾವ್‌, ಕೆ. ಸತ್ಯನಾರಾಯಣ, ಎ. ಎನ್‌. ಪ್ರಸನ್ನ- ಹೀಗೆ ಬಹು ದೊಡ್ಡ ತರುಣರ ಗುಂಪೇ ಅವರ ಹಿಂದೆ ಇರುತ್ತ ಇತ್ತು. ಬಿ. ಆರ್‌. ಲಕ್ಷ್ಮಣರಾಯರ ಪತ್ನಿಯ ತಂಗಿಯೇ ಅಡಿಗರ ಸೊಸೆಯಾದ ಮೇಲೆ ಅಡಿಗ ಮತ್ತು ಅವರ ಸಂಬಂಧ ಇನ್ನಷ್ಟು ನಿಕಟವಾಗಿತ್ತು. ಆ ವರ್ಷಗಳಲ್ಲಿ ಲಕ್ಷ್ಮಣರಾವ್‌ ಚಿಂತಾಮಣಿಯಲ್ಲಿ ತಮ್ಮ ಗೆಳೆಯರ ಗುಂಪು ಕಟ್ಟಿಕೊಂಡು ಬೆಂಗಳೂರಿನಿಂದ ಅನೇಕ ಲೇಖಕರನ್ನು ಚಿಂತಾಮಣಿಗೆ ಕರೆಸಿಕೊಳ್ಳುತ್ತಿದ್ದರು! ಬಹಳ ಸಲ ಹಿರಿಯ ಕವಿ ರಾಮಚಂದ್ರಶರ್ಮರ ಕಾರಲ್ಲಿ ! (ಶರ್ಮ ತಮ್ಮ ಕಾರನ್ನು ಶರ್ಮ ಟ್ರಾನ್ಸ್‌ಪೊàರ್ಟ್‌ ಎಂದು ತಾವೇ ಗೇಲಿಮಾಡಿಕೊಳ್ಳುತ್ತಿದ್ದರು!). ಅಡಿಗರೊಂದಿಗೆ ನಾನು ಅದೆಷ್ಟು ಬಾರಿ ಚಿಂತಾಮಣಿಗೆ ಹೋಗಿದ್ದೇನೋ. ಒಮ್ಮೆ ಸಾಹಿತಿಗಳ ದೊಡ್ಡ ಗುಂಪೇ ಚಿಂತಾಮಣಿಯಲ್ಲಿ ಸೇರಿತ್ತು. ಸಂಜೆ ಸಭೆಯಲ್ಲಿ ಅಡಿಗರು ಮಾತಾಡುವಾಗ ಸಭೆಯಲ್ಲಿ ಇದ್ದ ಯಾರೋ ಗೃಹಿಣಿಯ ಮುಖ ಅವರ ಮನಸ್ಸನ್ನು ಆಕ್ರಮಿಸಿದೆ. ಈಕೆಯನ್ನು ನಾನು ಎಲ್ಲೋ ನೋಡಿದ್ದೇನೆ, ಇದು ನಾನು ಕಂಡು ಯಾವಾಗಲೋ ಕಳೆದುಕೊಂಡ ಅತ್ಯಾಪ್ತ ದ್ವಿತೀಯಾರ್ಧ ಎಂದು ಅವರಿಗೆ ಬೋಧೆಯಾಗಿದೆ. ಆ ಅನಿಸಿಕೆಯೇ ಮುಂದೆ ಮಜಭೂತಾದ ಅದ್ಭುತ ಕವಿತೆಯಾಗಿ ರೂಪತಾಳಿದ್ದು. ಚಿಂತಾಮಣಿಯಲ್ಲಿ ಕಂಡ ಮುಖ ಎಂಬುದು ಕವಿತೆಯ ಶೀರ್ಷಿಕೆ. ಅಡಿಗರ ಅಜರಾಮರ ಕವಿತೆಗಳಲ್ಲಿ ಅದೂ ಒಂದು.

ಲಕ್ಷ್ಮಣ ರಾವ್‌ ತನ್ನ ಯಾವತ್ತಿನ ತಮಾಷೆ ಮತ್ತು ಚೇಷ್ಟೆಯ ಧಾಟಿಯಲ್ಲಿ ಅಡಿಗರನ್ನು ಕೇಳಿದ್ದು: “ಚಿಂತಾಮಣಿಯಲ್ಲಿ ನನಗೇ ಕಾಣದ ಅದ್ಯಾವ ಮುಖ ನಿಮಗೆ ಕಂಡಿದ್ದು ಸರ್‌?’  ಅಡಿಗರು ನಗುತ್ತ ಹೇಳಿದರು: “ಅದು ನಿನಗೆ ಕಾಣುವ ಮುಖ ಅಲ್ಲವಯ್ನಾ! ನನಗೆ ಮಾತ್ರ ಕಾಣುವಂಥದ್ದು!’ ಅಡಿಗರ ಉತ್ತರದಿಂದ ಲಕ್ಷ್ಮಣರಾವ್‌ ಕೂಡ ಸೇರಿದಂತೆ ನಾವೆಲ್ಲ ನಕ್ಕಿದ್ದೂನಕ್ಕಿದ್ದೆ!

ಅಡಿಗರು ಕೊನೆಗಾಲದಲ್ಲಿ ಅನಾರೋಗ್ಯದಿಂದ ತುಂಬ ನರಳಿದರು. ಅವರು ತೀರಿಕೊಂಡಾಗ ಅವರ ಮನೆಯ ಮುಂದೆ ಜನಜಾತ್ರೆ. ಅಡಿಗರು ತೀರಿಕೊಂಡಿಲ್ಲ. ಇದು ಸುಳ್ಳು ಸುದ್ದಿ- ಎಂದು ಕಿರಂ ಮತ್ತೆ ಮತ್ತೆ ಹೇಳುತ್ತ ಶತಪಥ ಹಾಕುತ್ತ ಇದ್ದರು. ರತ್ನಮಾಲಾಪ್ರಕಾಶ್‌ ಅಡಿಗರ ಪಾದಮೂಲದಲ್ಲಿ ಕುಳಿತು, ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು ಎಂಬ ಅವರ ಜನಪ್ರಿಯ ಕವಿತೆಯನ್ನು ಹಾಡಿದಾಗ ನೆರೆದಿದ್ದವರ ಕಣ್ಣಲ್ಲೆಲ್ಲ ನೀರು ತುಂಬುತ್ತ ಇತ್ತು.

ನನಗೆ ಕಿರಂ ಮಾತು ನೂರಕ್ಕೆ ನೂರು ನಿಜ ಎನ್ನಿಸಿತು. ಕವಿಯು ತೀರಿದ ಮೇಲೆ ಕವಿತೆಯೇ ನಾಲಗೆ ! ಎಂದು ವಟಗುಟ್ಟುತ್ತ ಅಡಿಗರ ಕೂಪಮಂಡೂಕ ಪದ್ಯ ಹಿಡಿದು ಏಕಾಂತದಲ್ಲಿ ಮುಳುಗಿದೆ. ಅಡಿಗರು ಮಾತ್ರ ನಿಜ; ಉಳಿದೆಲ್ಲ ಜಗತ್ತು ಸುಳ್ಳು ಅನ್ನಿಸಿತು, ಆ ಮುಳುಗಡೆಯ ಎದೆಗುದಿಯ ಕ್ಷಣ.

ಎಚ್‌. ಎಸ್‌. ವೆಂಕಟೇಶ‌ಮೂರ್ತಿ

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.