ಸಿಂಗಾಪುರದಲ್ಲಿ ಕಾಗೆಗಳಿಗೆ ಕಂಡಲ್ಲಿ ಗುಂಡು!
Team Udayavani, Aug 5, 2018, 6:00 AM IST
ಹಳ್ಳಿಯಲ್ಲಿ ಯಾರೂ ಅಲಾರ್ಮ್ ಸೆಟ್ ಮಾಡಿ ಮಲಗುವುದಿಲ್ಲ. ಕೋಳಿ ಕೂಗು, ಕಾಗೆ ಕೂಗು, ಹಕ್ಕಿಗಳ ಚಿಲಿಪಿಲಿಗಳೇ ಸಾಕು, ನಿದ್ದೆಯಿಂದ ಎಬ್ಬಿಸಲು. ರಾತ್ರಿ ಬೇಗ ಮಲಗಿ, ಮುಂಜಾನೆ ಬೇಗ ಏಳ್ಳೋದು ಹಳ್ಳಿಯ ಜೀವನ. ದಿನದ ಹೊತ್ತಿನಲ್ಲಿ ಗಡಿಯಾರಗಳ ಅಗತ್ಯವೂ ಇರುವುದಿಲ್ಲ. ಅದೇನಿದ್ದರೂ ಪೇಟೆ ಜನರಿಗೆ. ಕೋಳಿಗಳನ್ನು ಬಿಡಿ, ಹಕ್ಕಿಗಳಿಗೆ ಆಶ್ರಯವಾಗಿರುವ ಮರಗಳನ್ನು ಉಳಿಸುವ ಪ್ರಯತ್ನನೂ ಮಾಡುತ್ತಿಲ್ಲ ನಮ್ಮ ಜನ.
ಆದರೆ ನಾನು ಈ ಹಳ್ಳಿಯ ವಾತಾವರಣದಲ್ಲೇ ಬೆಳೆದವಳು. ಚಾಪೆ ಹಾಸಿ ಮಲಗುತ್ತಿದ್ದ ನಮಗೆ, ಕಿಟಕಿಯ ಸಂದಿನಲ್ಲಿ ನುಸುಳಿಸುತ್ತಿದ್ದ ಬೆಳಕೇ ಗಡಿಯಾರ! ಅಡುಗೆ ಮನೆಯಿಂದ ಅಮ್ಮನ ಗಡಿಬಿಡಿಯಲ್ಲಿ ಕೇಳ್ಳೋ ಪಾತ್ರಗಳ ಸದ್ದು, ಅಪ್ಪ ಗುನುಗುತ್ತಿದ್ದ ಯಕ್ಷಗಾನ ಹಾಡುಗಳು… ಎಲ್ಲದರ ಮಧ್ಯೆ, ಅನ್ನ – ಕಾಳುಗಳನ್ನು ತಿನ್ನಲು ಬರುವ ಕಾಗೆಗಳು, ಅವುಗಳು ತಮ್ಮ ಬಳಗವನ್ನು ಕರೆಯುವ ವೈಖರಿ. ಇಷ್ಟೇ ಸಾಕಾಗ್ತಿದ್ದವು ಮುಂಜಾನೆಯ ಸಮಯವನ್ನು ನಿರ್ಧರಿಸಲು.
ವಿಚಿತ್ರ ಅನಿಸೋದು ಈ ಕಾಗೆಗಳು. ಸ್ವರ ಕರ್ಕಶ. ಬಣ್ಣ ಕಪ್ಪು. ಈ ಕಾಗೆಗಳು ಹೊರಡಿಸೋ ಒಂದೊಂದು ಧ್ವನಿಗೂ ನಮ್ಮಲ್ಲಿ ಅರ್ಥಗಳಿವೆ. ಈ ನಂಬಿಕೆಯಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಆ ದೇವರಿಗೆ ಗೊತ್ತು. ಆದರೂ ನಂಬಿಕೆ ಜೋರಾಗಿಯೇ ಇದೆ. ನೆಂಟರು ಬರಲಿದ್ದಾರೆ ಅನ್ನುವ ಪೂರ್ವಸಂದೇಶವನ್ನು ಕೂಡ ಇವುಗಳು ನೀಡಬಲ್ಲವಂತೆ. ಅದಕ್ಕಾಗಿಯೇ ಒಂದು ಸ್ವರವನ್ನು ಹೊರಡಿಸುತ್ತವೆ ! ಅದನ್ನ ಕೇಳ್ಳೋದೇ ಒಂದು ಮಜಾ. ಅದು ನಮ್ಮ ಮನೆಯ ಬಳಿ ಯಾವಾಗ ಕೂಗುತ್ತವೆ ಅಂತ ಕಾದು ಕುಳಿತ ಪ್ರಸಂಗಗಳು ಇವೆ. ಈ ಕಾಗೆಗಳ ಬಗ್ಗೆ ಇರುವ ಪುರಾಣ ಕಥೆಗಳು, ಅಜ್ಜೀಕತೆಗಳು, ಮಕ್ಕಳ ಕಥೆಗಳು ಅಚ್ಚರಿ ತರಿಸುತ್ತವೆ. ಇವು ನಮ್ಮ ಊರಿನ ಕಾಗೆ ಕತೆಯಾದರೆ, ನಾವು ನೆಲೆಸಿರುವ ಸಿಂಗಾಪುರದಲ್ಲಿರುವ ಕಾಕ ಪುರಾಣವೇ ಬೇರೆ !
ರಿಪಬ್ಲಿಕ್ ಆಫ್ ಸಿಂಗಾಪುರ್ಗೆ ಕಾಗೆಗಳ ಪ್ರವೇಶಕ್ಕೆ ಎಂಟ್ರೀ ಬಿಡಿ, ವೀಸಾ ನೇ ಕೊಡ್ತಾ ಇಲ್ಲ ! ಎಮರ್ಜೆನ್ಸಿà ಲ್ಯಾಂಡಿಂಗ್ಗೆ ಅಂತೂ ರೆಡ್ ಸಿಗ್ನಲ್ ಅಕ್ರಮ ಪ್ರವೇಶ – ನೋ ಛಾನ್ಸ್. ಹೇಗೋ ಕಷ್ಟಪಟ್ಟು ನುಸುಳಿತೋ, ಮುಗೀತು ಕಥೆ. ಕಾಗೆಗಳ ಪಾಲಿಗೆ ಇಲ್ಲಿ- ಕಂಡಲ್ಲಿ ಗುಂಡು ಒಂದೇ ಮಂತ್ರ. ಕಾಗೆಗಳು ಎಷ್ಟೇ ಹಾರಾಡಲಿ, ಸಿಂಗಾಪುರದಲ್ಲಿ ಮಾತ್ರ ಅವುಗಳಿಗೆ ಆಕಾಶವಿಲ್ಲ.
ನಾವು ಇಲ್ಲಿಗೆ ಬಂದ ಹೊಸತರಲ್ಲಿ ಕಾಗೆಗಳನ್ನು ಹುಡುಕದ ಜಾಗಗಳಿಲ್ಲ. ಮನೆಗಳ ಸುತ್ತಮುತ್ತ, ತಿನಿಸುಗಳು ಅಂಗಡಿ ಮುಂಗಟ್ಟುಗಳ ಬಳಿ, ಮರಗಳು ಹೆಚ್ಚಾಗಿ ಇರುವ ಕಡೆ- ಎಲ್ಲೂ ಇಲ್ಲ. ಇಡೀ ದೇಶಕ್ಕೆ ದೇಶವೇ ಕಾಗೆಗಳಿಂದ ಮುಕ್ತ.
ಬಹುಶಃ ಚೀನಿಯರ ಜೋತಿಷ್ಯಶಾಸ್ತ್ರಕ್ಕೂ ಕಾಗೆಗಳಿಗೂ ಆಗಿ ಬರೋದಿಲ್ಲವೋ ಏನೋ ಎಂದು ತಿಳಿದಿ¨ªೆವು. ನಾವು ಯೋಚನೆ ಮಾಡಿದ್ದೇ ಬೇರೆ, ಸತ್ಯಾಂಶವೇ ಬೇರೆ. ಇಲ್ಲಿನ ಜನತೆಯ ಪ್ರಕಾರ, ಕಾಗೆಗಳದ್ದು ಒರಟು ಸ್ವರ, ಅಶಿಸ್ತು, ಗಲೀಜು ಮಾಡುವ ಬುದ್ಧಿ. ಅದಲ್ಲದೆ, ಇಲ್ಲಿನ ಕಾಗೆಗಳು ಮನುಷ್ಯರ ಮೇಲೂ ದಾಳಿ ಮಾಡುವ ಸಾಧ್ಯತೆ ಇದೆಯಂತೆೆ. ಈ ಹಿನ್ನಲೆಯಲ್ಲಿ ಕಾಗೆಗಳ ನಿರ್ನಾಮಕ್ಕೆ ತಂಡಗಳೇ ರಚನೆಯಾಗಿವೆ ಎಂದರೆ ನಂಬುತ್ತೀರಾ?
ಇದಕ್ಕೆಂದೇ ಸಮವಸ್ತ್ರ ಧರಿಸಿ ಕಾಲಲ್ಲಿ ಬೂಟ್, ಹೆಗಲಲ್ಲಿ ಗನ್ ಏರಿಸಿಕೊಂಡು ಸಿದ್ಧರಾದವರಿದ್ದಾರೆ. ಕಾಗೆಗಳನ್ನು ನಿರಂತರವಾಗಿ ಕೊಲ್ಲುವುದನ್ನು ಕಂಡರೆ ನೀವಾದರೂ ಕೇಳಿಯೇ ಕೇಳುತ್ತೀರಿ-ಹೀಗೂ ಉಂಟೇ ! ನಮ್ಮ ಊರಿನಲ್ಲಿ ಮಂಗಗಳ ಹಾವಳಿ ತಪ್ಪಿಸಲು ಮಾಡುವ ಕಾರ್ಯಾಚರಣೆಯ ಹಾಗೆ. ಕ್ರೋ ಶೂಟಿಂಗ್ ಇನ್ ಪ್ರೋಗ್ರೆಸ್, ಪ್ಲೀಸ್ ಕೀಪ್ ಅವೇ ಅನ್ನೋ ಬೋರ್ಡ್ಗಳು ಕೆಲವೊಮ್ಮೆ ಕಾಣಸಿಗುತ್ತವೆ. ವಿಶೇಷವೆಂದರೆ, ಈ ಕಾಗೆಗಳಿಗೆ ಗುಂಡಿನ ಶಬ್ದಗಳು ಚಿರಪರಿಚಿತ. ಹಾಗಾಗಿ, ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮುಂದುವರಿಸುತ್ತವೆ.
ನಮ್ಮಲ್ಲಿ ಕಾಗೆಗಳನ್ನು ನಾವು ಪೂಜಿಸುವುದಿಲ್ಲವಾದರೂ ಬದುಕುವುದಕ್ಕೆ ಬಿಡುತ್ತೇವೆ. ಆದರೆ, ಸಿಂಗಾಪುರದವರ ಲೆಕ್ಕಾಚಾರವೇ ಬೇರೆ. ಪ್ರವಾಸಿ ಸ್ಥಳಗಳಲ್ಲಿ ಭಯೋತ್ಪಾದಕ ದಾಳಿ ನಡೆದ ಹಾಗೇ ಝಡ್+ ಭದ್ರತೆಯಲ್ಲಿ ಕಾಗೆಗಳ ಮರ್ಡರ್ ನಡೆಸಲಾಗುತ್ತದೆ.
ಬಡಪಾಯಿ ಕಾಗೆ ಅಂತ ನನ್ನಲ್ಲಿ ನಾನೇ ಉದ್ಗರಿಸುತ್ತೇನೆ !
– ಶ್ರೀವಿದ್ಯಾ, ಸಿಂಗಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ