ಅರೇಬಿಯಾದ ಕತೆ: ದೊರೆ ಮತ್ತು ಹಕ್ಕಿಗಳು
Team Udayavani, Aug 4, 2019, 5:25 AM IST
ಹೂಪೋಸ್ ಎಂಬ ದೊರೆಯಿದ್ದ. ಪ್ರಜೆಗಳ ಹಿತಕ್ಕಿಂತ ಮಿಗಿಲಾದುದು ಇನ್ನೊಂದಿಲ್ಲ ಎಂದು ಭಾವಿಸಿ ತಾನು ಹಾಸಿಗೆಯಲ್ಲಿ ಮಲಗುತ್ತಿರಲಿಲ್ಲ, ಮೃಷ್ಟಾನ್ನ ಭೋಜನ ಮಾಡುತ್ತಿರಲಿಲ್ಲ. ಆಭರಣಗಳನ್ನು ಧರಿಸುತ್ತಿರಲಿಲ್ಲ. ನಾನು ಸುಖಜೀವನಕ್ಕೆ ಅಂಟಿಕೊಂಡರೆ ಭವಿಷ್ಯದಲ್ಲಿ ರಾಜ್ಯವನ್ನು ಕಳೆದುಕೊಂಡಾಗ ಸರಳವಾಗಿ ಬದುಕಲು ಕಷ್ಟವಾಗಬಹುದು. ಈಗಲೇ ಅಂತಹ ಜೀವನವನ್ನು ಕಲಿತುಕೊಂಡರೆ ಸಮಸ್ಯೆಗಳು ಬರುವುದಿಲ್ಲ ಎಂದು ಅವನು ಹೇಳುತ್ತಿದ್ದ.
ಒಂದು ದಿನ ದೊರೆಯು ಪ್ರಜೆಗಳ ಕಷ್ಟ ಸುಖ ತಿಳಿದುಕೊಳ್ಳಲು ಕುದುರೆಯನ್ನೇರಿಕೊಂಡು ಪ್ರಯಾಣ ಬೆಳೆಸಿದ. ನೆತ್ತಿಯಲ್ಲಿ ಸೂರ್ಯ ಪ್ರಖರವಾಗಿ ಉರಿಯುತ್ತಿದ್ದ. ದೊರೆಗೆ ಬಾಯಾರಿಕೆಯಾಯಿತು. ಕುಡಿಯಲು ಎಲ್ಲಿಯೂ ನೀರು ಕಾಣಿಸಲಿಲ್ಲ. ದಣಿವಿನಿಂದ ಕಣ್ಣು ಕತ್ತಲೆ ಬಂದಿತು. ಕುದುರೆಯ ಮೇಲೆ ಹಾಗೆಯೇ ಒರಗಿಕೊಂಡ. ದೊರೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಕುದುರೆಯು ತಟಸ್ಥವಾಗಿ ನಿಂತುಕೊಂಡಿತು. ತುಂಬ ಹೊತ್ತು ಕಳೆದಾಗ ದೊರೆ ಕಣ್ತೆರೆದು ಒಂದು ಅಚ್ಚರಿಯನ್ನು ನೋಡಿದ. ನೂರಾರು ಹಕ್ಕಿಗಳು ರೆಕ್ಕೆಗಳನ್ನು ಬಿಡಿಸಿ ನಿಂತು ಅವನ ಮೈಮೇಲೆ ಸೂರ್ಯನ ಬಿಸಿಲು ಸೋಕದ ಹಾಗೆ ನೆರಳು ನೀಡಿದ್ದವು. ಒಂದು ಹಕ್ಕಿ ಸೋರೆ ಬುರುಡೆಯಲ್ಲಿ ತುಂಬಿಸಿ ತಂದ ನೀರನ್ನು ಅವನ ಬಾಯಿಗೆ ಹೊಯ್ಯುತ್ತ ಇತ್ತು.
ದೊರೆಯು ಹಕ್ಕಿಗಳನ್ನು ನೋಡಿ ಸಂತೋಷದಿಂದ, “”ಹಕ್ಕಿಗಳಾದರೂ ದೇವರು ನಿಮ್ಮ ಹೃದಯದಲ್ಲಿ ಅಪಾರ ಕರುಣೆಯನ್ನು ತುಂಬಿದ್ದಾನೆ. ನೀವು ಇಂದು ನನ್ನ ನೆರವಿಗೆ ಬಾರದೆ ಹೋಗಿದ್ದರೆ ನಾನು ಬದುಕುತ್ತಿರಲಿಲ್ಲ. ಈ ಉಪಕಾರಕ್ಕಾಗಿ ನಿಮಗೆ ಏನು ಪ್ರತಿಫಲ ಬೇಕೆಂದು ಸಂಕೋಚವಿಲ್ಲದೆ ಕೇಳಿ” ಎಂದು ಉದಾರವಾಗಿ ಹೇಳಿದ.
ಆಗ ಆ ಹಕ್ಕಿಗಳಿಗೆ ರಾಜನಾಗಿದ್ದ ದೊಡ್ಡ ಹಕ್ಕಿಯು ಮಾತನಾಡುತ್ತ, “”ದೊರೆಯೇ, ಖಂಡಿತ ನೀನು ನಾವು ಕೇಳಿದುದನ್ನು ಕೊಡುತ್ತೀಯಾ? ಕೋರಿಕೊಂಡ ಬಳಿಕ ನಿರಾಕರಿಸಬಾರದು” ಎಂದು ಹೇಳಿತು.
“”ಒಪ್ಪಿಕೊಂಡ ಮೇಲೆ ನಿರಾಕರಿಸುವುದು ಧರ್ಮವಾಗುವುದಿಲ್ಲ. ಖಂಡಿತ ಕೊಡುತ್ತೇನೆ. ಇಷ್ಟಕ್ಕೂ ನೀವು ತಿನ್ನಲು ಒಳ್ಳೆಯ ಕಾಳು ಕೇಳಬಹುದು. ವಾಸ ಮಾಡಲು ನೆರಳು ಮತ್ತು ಹಣ್ಣು ಕೊಡುವ ಮರಗಳನ್ನು ಬಯಸಬಹುದು. ಇದರ ಹೊರತು ಹಕ್ಕಿಗಳಾದ ನಿಮಗೆ ಅನ್ಯ ಬಯಕೆಗಳು ಇರಲಾರದೆಂದು ಭಾವಿಸಿದ್ದೇನೆ. ಇನ್ನೇನು ಬೇಕೋ ನಿಸ್ಸಂಕೋಚವಾಗಿ ಕೇಳಿದರೆ ಕೊಡಲು ತಪ್ಪುವುದಿಲ್ಲ” ಎಂದು ದೊರೆ ಭರವಸೆ ನೀಡಿದ. ಆಗ ಹಕ್ಕಿಯು, “”ನೀನು ಯೋಚಿಸಿದ ಹಾಗೆ ನಮ್ಮ ಕೋರಿಕೆಗಳು ಸಣ್ಣದಲ್ಲ. ನಮಗೆ ಎಲ್ಲರಿಗೂ ನಿನ್ನ ಹಾಗೆ ತಲೆಯಲ್ಲಿ ಧರಿಸಲು ಚಿನ್ನದ ಕಿರೀಟಗಳನ್ನು ಮಾಡಿಸಿಕೊಡು. ನಿನ್ನ ಸಿಂಹಾಸನದ ಮೇಲೆ ಕುಳಿತು ರಾಜ್ಯವನ್ನು ಆಳಲು ಅನುಕೂಲವಾಗುವಂತೆ ನೀನು ಅಧಿಕಾರವನ್ನು ತ್ಯಾಗ ಮಾಡು” ಎಂದು ಹಕ್ಕಿಯು ಕೇಳಿತು.
ಹಕ್ಕಿಯ ಮಾತಿನಿಂದ ದೊರೆಗೆ ಅಸಮಾಧಾನವಾಗಲಿಲ್ಲ. ನಗುತ್ತ, “”ನಿನಗೆ ಯಾಕೆ ನನ್ನ ರಾಜನಾಗುವ ಆಶೆ ಬಂತು ಎಂದು ಕೇಳಬಹುದೆ?” ಎಂದು ಪ್ರಶ್ನಿಸಿದ. ಹಕ್ಕಿಯು, “”ನಿನ್ನ ರಾಜ್ಯದಲ್ಲಿ ತುಂಬ ಮಂದಿ ನಮಗೆ ವಿರೋಧಿಗಳಿದ್ದಾರೆ. ಅವರು ಆಹಾರಕ್ಕಾಗಿ ನಮ್ಮನ್ನು ಬೇಟೆಯಾಡಿ ವಂಶನಾಶಕ್ಕೆ ಕಾರಣರಾದರು. ನಮ್ಮ ಮೊಟ್ಟೆಗಳನ್ನು ಹುಡುಕಿ ತೆಗೆದು ನುಂಗಿದರು. ದೊರೆಯಾಗಿ ಅವರ ಕೃತ್ಯವನ್ನು ನೀನು ತಡೆಯಲಿಲ್ಲ. ಈಗ ನಾವು ರಾಜ್ಯದ ಆಡಳಿತ ವಹಿಸಿಕೊಂಡು ಅವರನ್ನು ದಂಡಿಸುವ ಕೆಲಸ ಮಾಡಬೇಕಾಗಿದೆ. ನಿನ್ನ ಸ್ಥಾನವನ್ನು ನಮಗೆ ಬಿಟ್ಟುಕೊಟ್ಟರೆ ಅವರಿಗೆಲ್ಲ ಪಾಠ ಕಲಿಸುತ್ತೇವೆ” ಎಂದು ಹೇಳಿತು ಹಕ್ಕಿ.
ದೊರೆ ನುಡಿದ ಹಾಗೆಯೇ ನಡೆದುಕೊಂಡ. ಹಕ್ಕಿಗಳನ್ನು ಅರಮನೆಗೆ ಕರೆದುಕೊಂಡು ಬಂದ. ವಜೀರರನ್ನು ಕರೆದ. “”ಈ ಎಲ್ಲ ಹಕ್ಕಿಗಳಿಗೂ ಅಕ್ಕಸಾಲಿಗರಿಂದ ಚಿನ್ನದ ಕಿರೀಟ ಮಾಡಿಸಿ ತೊಡಿಸಿಬಿಡಿ. ಈ ಘಳಿಗೆಯಿಂದ ನಾನು ದೇಶದ ಅರಸನಾಗಿರುವುದಿಲ್ಲ. ಈ ಹಕ್ಕಿಗಳ ರಾಜನೇ ಸಿಂಹಾಸನದ ಮೇಲೆ ಕುಳಿತು ಪ್ರಜೆಗಳನ್ನು ಪರಿಪಾಲನೆ ಮಾಡುತ್ತದೆ. ನೀವೆಲ್ಲರೂ ಈ ಕುರಿತು ನನ್ನನ್ನು ಏನೂ ಕೇಳಬಾರದು. ನಾನು ಹೇಳಿದಂತೆ ವಿಧೇಯರಾಗಿ ಅದರ ಆಜ್ಞೆಗಳನ್ನು ನಡೆಸಿ ಕೊಡಬೇಕು” ಎಂದು ಹೇಳಿದ. ಎಲ್ಲ ಹಕ್ಕಿಗಳ ತಲೆಗೂ ಚಿನ್ನದ ಕಿರೀಟವನ್ನು ತೊಡಿಸಿದ. ದೊಡ್ಡ ಹಕ್ಕಿಯನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ರಾಜ್ಯಾಭಿಷೇಕ ಮಾಡಿದ.
ಬಳಿಕ ದೊರೆಯು ರಾಜನಾದ ಹಕ್ಕಿಯನ್ನು ಬಳಿಗೆ ಕರೆದು, “”ಇನ್ನು ಮುಂದೆ ನನ್ನ ಹಾಗೆಯೇ ಪ್ರಜೆಗಳನ್ನು ಪ್ರೀತಿಯಿಂದ ಪರಿಪಾಲಿಸುವ ಹೊಣೆ ನಿನ್ನ ಮೇಲಿದೆ. ಅಧಿಕಾರವೆಂಬುದು ಸುಲಭವಲ್ಲ, ಕತ್ತಿಯ ಮೇಲೆ ನಡೆದಾಡಿದ ಹಾಗೆ ಎಚ್ಚರಿಕೆಯಿಂದ ಇರಬೇಕು. ಎಂದಾದರೂ ನಿನಗೆ ಈ ಅಧಿಕಾರ ಬೇಡ, ಇದರಿಂದ ವಿಮೋಚನೆ ಬೇಕು ಎಂಬ ಭಾವನೆ ಮೂಡಿದರೆ ನನ್ನ ಬಳಿಗೆ ಬರಬೇಕು. ನಾನು ಇದೇ ನಗರದ ಪ್ರಾರ್ಥನಾ ಮಂದಿರದ ಮುಂದೆ ದೇವರ ಧ್ಯಾನ ಮಾಡುತ್ತ ಕುಳಿತಿರುತ್ತೇನೆ. ನಿನಗೆ ಬಂದಿರುವ ಸಮಸ್ಯೆಯನ್ನು ನಿವಾರಿಸುತ್ತೇನೆ” ಎಂದು ಹೇಳಿ ಸರಳವಾದ ಉಡುಪುಗಳನ್ನು ತೊಟ್ಟುಕೊಂಡು ಅರಮನೆಯಿಂದ ಹೊರಟುಹೋದ.
ರಾಜನಾಗಿ ಸಿಂಹಾಸನವೇರಿದ ಹಕ್ಕಿಯು ಸುಮ್ಮನಿರಲಿಲ್ಲ. ವಜೀರನನ್ನು ಕರೆದು, “”ಅರಮನೆಯ ಅಡುಗೆಯವನಾಗಿ ಹೊಸಬನೊಬ್ಬ ಸೇರಿಕೊಂಡಿದ್ದಾನೆ ತಾನೆ? ಅವನನ್ನು ಕೂಡಲೇ ಬಂಧಿಸಿ ಕತ್ತಲು ಕೋಣೆಗೆ ತಳ್ಳಿಬಿಡು” ಎಂದು ಆಜ್ಞಾಪಿಸಿತು. ವಜೀರನು ಅಚ್ಚರಿಯಿಂದ, “”ಅವನು ಯಾವ ಅಪರಾಧ ಮಾಡಿದನೆಂದು ಈ ಶಿಕ್ಷೆಯನ್ನು ವಿಧಿಸುತ್ತಿದ್ದೀರಾ? ನೂರಾರು ವಿಧದ ಪಾಕ ಕಲೆಯನ್ನು ತಿಳಿದುಕೊಂಡಿರುವ ಅವನೆಂದರೆ ಮಹಾರಾಜರಿಗೂ ಅಚ್ಚುಮೆಚ್ಚಾಗಿತ್ತು. ವಿನಾಕಾರಣ ಅವನಿಗೆ ಸೆರೆವಾಸ ವಿಧಿಸುವುದು ಚೆನ್ನಾಗಿರುವುದಿಲ್ಲ” ಎಂದು ಹೇಳಿದ. ಹಕ್ಕಿಯೂ ಕೋಪದಿಂದ ಹೂಂಕರಿಸಿತು. “”ರಾಜನಾಗಿರುವ ನನ್ನ ನಿರ್ಧಾರವನ್ನು ನೀನು ಪ್ರಶ್ನಿಸುವಂತಿಲ್ಲ. ನಾನು ಏನು ಹೇಳಿದ್ದೇನೋ ಅದನ್ನು ಪಾಲಿಸುವುದು ನಿನ್ನ ಜವಾಬ್ದಾರಿ” ಎಂದು ಹೇಳಿತು.
ವಜೀರನು ಅಡುಗೆಯವನಿಗೆ ಸೆರೆವಾಸ ವಿಧಿಸಿದ. ಹಕ್ಕಿಯು ಅಲ್ಲಿಗೇ ಸುಮ್ಮನಾಗಲಿಲ್ಲ. ಸೇನಾಪತಿ, ಕೊತ್ವಾಲ, ಔಷಧ ಕೊಡುವ ಪಂಡಿತ ಎಂದು ಒಬ್ಬೊಬ್ಬರನ್ನೇ ಸೆರೆಮನೆಗೆ ಹಾಕಿಸಿತು. ಇದರಿಂದ ವಜೀರನಿಗೆ ಕಳವಳವಾಯಿತು. ಹೀಗೆಯೇ ಆದರೆ ಅರಮನೆಯಲ್ಲಿ ಅಧಿಕಾರದಲ್ಲಿರುವ ಎಲ್ಲರೂ ಸೆರೆಮನೆ ಸೇರಬೇಕಾಗುತ್ತದೆ. ಅದಕ್ಕಾಗಿ ಈ ಹಕ್ಕಿಗಳಿಗೆ ತಕ್ಕ ವ್ಯವಸ್ಥೆ ಕೈಗೊಳ್ಳಬೇಕು ಎಂದು ಯೋಚಿಸಿ ತನ್ನ ಆಪ್ತರೊಂದಿಗೆ ರಹಸ್ಯವಾಗಿ ಸಭೆ ನಡೆಸಿದ. ಹಕ್ಕಿಗಳನ್ನು ನಾಶ ಮಾಡಲು ಅವರು ಒಂದು ಉಪಾಯ ಆಲೋಚಿಸಿದರು. ಅದರ ಪ್ರಕಾರ ವಜೀರನು ಹಕ್ಕಿ ರಾಜನ ಬಳಿಗೆ ಬಂದು ನಯವಿನಯದಿಂದ ಮುಜುರೆ ಮಾಡಿದ. “”ನಮ್ಮ ಉದ್ಯಾನದಲ್ಲಿ ಘಮಘಮ ಹೂಗಳು ಅರಳುವ ಕಾಲ. ರುಚಿಕರವಾದ ಹಣ್ಣುಗಳು ಮಾಗಿವೆ. ತಾವು ತಮ್ಮ ಬಳಗದೊಂದಿಗೆ ವಿಹಾರಕ್ಕೆ ಅಲ್ಲಿಗೆ ಹೋಗಿ ಸ್ಫಟಿಕದಂತಿರುವ ತಿಳಿನೀರಿನ ಕೊಳದಲ್ಲಿ ಈಜಿ ಮನಸ್ಸನ್ನು ಅರಳಿಸಬಹುದು. ಹೂಗಳ ಸುಗಂಧವನ್ನು ಆಘ್ರಾಣಿಸಿ ಹಣ್ಣುಗಳನ್ನು ತಿಂದು ಖುಷಿಪಟ್ಟು ಬರಬಹುದು” ಎಂದು ಹೇಳಿದ.
ಹಕ್ಕಿಗಳು ಉದ್ಯಾನಕ್ಕೆ ಹೋಗಿ ನೆಲದಲ್ಲಿಳಿದ ಕೂಡಲೇ ವಜೀರನು ಅಲ್ಲಿ ಹಾಕಿಸಿದ ಬಲೆಯಲ್ಲಿ ಸಿಲುಕಿಕೊಂಡು ಒದ್ದಾಡಿದವು. ಅವುಗಳನ್ನು ಕೊಲ್ಲಲು ಹತ್ತಾರು ಸೇವಕರು ದೊಣ್ಣೆಗಳನ್ನೆತ್ತಿಕೊಂಡು ಓಡೋಡಿ ಬಂದರು. ಆಗ ರಾಜ ಹಕ್ಕಿಯು ಜೊತೆಗಾರರಿಗೆ, “”ಎಲ್ಲರೂ ಸರ್ವಶಕ್ತಿಯನ್ನೂ ಉಪಯೋಗಿಸಿ ರೆಕ್ಕೆಗಳನ್ನು ಬಿಡಿಸಿ ಹಾರಲು ಪ್ರಯತ್ನಿಸಿ. ನಮಗೆ ಇನ್ನು ಅಧಿಕಾರ ಬೇಡ. ಇದನ್ನು ನೀಡಿದ ದೊರೆಯ ಬಳಿಗೆ ಹೋಗೋಣ” ಎಂದು ಹೇಳಿತು. ಸೇವಕರು ಬಳಿಗೆ ಬರುವ ಮೊದಲೇ ಹಕ್ಕಿಗಳು ಬಲೆಯ ಸಹಿತ ಆಕಾಶಕ್ಕೇರಿ ಹಾರುತ್ತ ಪ್ರಾರ್ಥನಾ ಮಂದಿರದ ಮುಂದೆ ಕುಳಿತಿದ್ದ ದೊರೆಯ ಬಳಿಗೆ ಬಂದಿಳಿದವು. ದೊರೆ, “”ಯಾಕೆ ಬಂದಿರಿ, ಅಧಿಕಾರ ಸಾಕಾಯಿತೆ?” ಎಂದು ಕೇಳಿದ.
ದೊಡ್ಡ ಹಕ್ಕಿಯು, “”ಹೌದು ದೊರೆಯೇ, ನಿನ್ನ ರಾಜ್ಯವನ್ನು ಮರಳಿ ಸ್ವೀಕರಿಸು. ನಮಗೀಗ ಬಲೆಯಿಂದ ಬಿಡುಗಡೆಯಾಗಬೇಕಿದ್ದರೆ ನಿನ್ನ ರಾಜ್ಯದಲ್ಲಿರುವ ಪ್ರತಿಯೊಬ್ಬ ಯುವತಿಯು ಬಂದು ಬಲೆಯನ್ನು ಮುಟ್ಟಬೇಕು. ಯಾರು ಬಲೆ ಮುಟ್ಟಿದಾಗ ಅದು ತೆರೆದುಕೊಳ್ಳುತ್ತದೋ ಆ ಯುವತಿಯು ನನ್ನ ಕೈಹಿಡಿಯಬೇಕು” ಎಂದು ಹೇಳಿತು. ದೊರೆ ದೇಶದ ಎಲ್ಲ ಯುವತಿಯರನ್ನೂ ಕರೆಸಿದ. ಆದರೆ ಯಾರು ಮುಟ್ಟಿದರೂ ಬಲೆಯ ಬಾಗಿಲು ತೆರೆಯಲಿಲ್ಲ. ಕಡೆಗೆ ಉಳಿದವಳು ದೊರೆಯ ಮಗಳು. ಅವಳು ಬಂದು ಸ್ಪರ್ಶಿಸಿದ ಕೂಡಲೇ ಬಲೆ ತೆರೆಯಿತು. ಹಕ್ಕಿಗಳು ಹೊರಗೆ ಬಂದವು. ಹೇಳಿದ ಮಾತಿನಂತೆ ದೊರೆ ತನ್ನ ಮಗಳನ್ನು ಹಕ್ಕಿಯ ಕೈಗೊಪ್ಪಿಸಿದ. ಮರುಕ್ಷಣವೇ ಹಕ್ಕಿಯು ಮಾಯವಾಗಿ ಒಬ್ಬ ರಾಜಕುಮಾರ ಕಾಣಿಸಿಕೊಂಡ. ದೊರೆಯು, “”ಏನಿದು ಅಚ್ಚರಿ, ಯಾರು ನೀನು?” ಎಂದು ಕೇಳಿದ.
“”ನಾನು ನೆರೆ ದೇಶದ ಯುವರಾಜ. ಮಂತ್ರವಾದಿಗಳ ಮಾಟದಿಂದ ನನ್ನ ಗೆಳೆಯರ ಜೊತೆಗೆ ಹಕ್ಕಿಯಾದೆ. ನಿನ್ನ ಅರಮನೆಯಲ್ಲಿ ಸೇರಿಕೊಂಡ ಆ ಮಂತ್ರವಾದಿಗಳನ್ನೆಲ್ಲ ಸೆರೆಮನೆಗೆ ಸೇರಿಸಿದೆ. ನಿನ್ನ ವಜೀರ ಅವರಿಗೆ ಮುಖ್ಯಸ್ಥ. ಅವನ ಮೋಸದಿಂದ ಸಾವು ಬಂದರೂ ಪಾರಾದೆ. ನನ್ನ ಕೈಹಿಡಿಯುವ ಹುಡುಗಿ ಸ್ಪರ್ಶಿಸಿದಾಗ ಮೊದಲಿನಂತಾಗುವೆನೆಂಬ ವರ ಪಡೆದಿದ್ದೆ” ಎಂದು ರಾಜಕುಮಾರ ಹೇಳಿದ. ದೊರೆಯು ಎಲ್ಲ ಮಂತ್ರವಾದಿಗಳಿಗೂ ಶಿಕ್ಷೆ ವಿಧಿಸಿ ರಾಜಕುಮಾರನೊಂದಿಗೆ ಮಗಳ ವಿವಾಹ ನೆರವೇರಿಸಿದ.
ಪ. ರಾಮಕೃಷ್ಣ ಶಾಸ್ತ್ರಿ