ಸುಪ್ರೀಂ ತೀರ್ಪು ಬಂದ ಕೂಡಲೇ ಕೃಷ್ಣ ಮೇಲ್ದಂಡೆ ಕಾಮಗಾರಿಗೆ ಚಾಲನೆ: ಸಿಎಂ ಬೊಮ್ಮಾಯಿ
Team Udayavani, Jul 29, 2021, 11:53 AM IST
ಹುಬ್ಬಳ್ಳಿ: ಕೃಷ್ಣ ಮೇಲ್ದಂಡೆ ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ತಾವು ಬದ್ದರಾಗಿದ್ದು, ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದ್ದು, ತೀರ್ಪು ಹೊರಬಿದ್ದ ತಕ್ಷಣವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಜೇಶ್ ಕುಮಾರ ನೇತೃತ್ವದ ನ್ಯಾಧೀಕರಣ ಜಲಾಶಯ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಆರ್ &ಆರ್ ಕೈಗೊಳ್ಳಬೇಕಾಗಿದೆ. ಯೋಜನೆ ಬಗ್ಗೆ ಅಧಿಸೂಚನೆ ಹೊರಡಿಸುವ ವೇಳೆ ಆಂಧ್ರಪ್ರದೇಶ ಕೋರ್ಟ್ ಮೊರೆ ಹೋಗಿದೆ. ಒಂದೆರಡು ತಿಂಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಮಹಾರಾಷ್ಟ್ರ ಹಾಗೂ ನಾವು ಸೇರಿ ಹೋರಾಟ ನಡೆಸುತ್ತೇವೆ. ನನಗೆ ವಿಶ್ವಾಸವಿದೆ ತೀರ್ಪು ನಮ್ಮ ಪರವಾಗಿ ಬರಲಿದೆ ಎಂದರು.
ನಾಳೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿನಡ್ಡಾ ಇನ್ನಿತರರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವೆ. ಸಂಪುಟ ರಚನೆ ಬಗ್ಗೆ ಕೇಂದ್ರ ವರಿಷ್ಠರ ಸಮಯ ಕೇಳಿ 2-3 ದಿನಗಳಲ್ಲಿ ಮತ್ತೆ ದೆಹಲಿಗೆ ಹೋಗುವೆ ಎಂದರು.
ಇದನ್ನೂ ಓದಿ:ನಾಳೆ ದೆಹಲಿಗೆ ತೆರಳಿ ಪ್ರಧಾನಿ ಜೊತೆ ಚರ್ಚೆ ಮಾಡುತ್ತೇನೆ: ಸಿಎಂ ಬೊಮ್ಮಾಯಿ
ಜಗದೀಶ ಶೆಟ್ಟರ್ ಹಿರಿಯ ನಾಯಕರು, ಸಂಪುಟಕ್ಕೆ ಸೇರದಿರುವ ಬಗ್ಗೆ ಹೇಳಿದ್ದಾರೆ. ಅವರೊಂದಿಗೆ ಮಾತನಾಡಿದ್ದೇನೆ. ನನ್ನ ಮತ್ತು ಅವರ ನಡುವೆ ಉತ್ತಮ ಸಂಬಂಧ ಇದೆ. ಬೇರೆ ಬೇರೆ ಪಕ್ಷದಲ್ಲಿದ್ದಾಗಲು ನಮ್ಮ ನಡುವೆ ಉತ್ತಮ ಬಾಂಧವ್ಯ ಇದೆ ಎಂದರು.
ಹುಬ್ಬಳ್ಳಿ ನನ್ನ ನೆಚ್ಚಿನ ನಗರ, ನನ್ನ ಶಿಕ್ಷಣ ಇಲ್ಲೇ ಆಗಿದೆ. ಸ್ನೇಹಿತರ ದೊಡ್ಡ ದಂಡು ಇದೆ. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ವಿಶೇಷ ಆಸಕ್ತಿ ತೋರುವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಹಿರಿಯರಾದ ಜಗದೀಶ ಶೆಟ್ಟರ, ಪರಿವಾರದವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವೆ ಎಂದರು.