ಮಧ್ಯ ಕಾಡಿನಲ್ಲಿ ಕೊಡೆ ಕೊಟ್ಟ ಪುಣ್ಯಾತ್ಮ
ಮೂರು ನಿಮಿಷದ ಮನುಷ್ಯ
Team Udayavani, Apr 23, 2019, 6:00 AM IST
ಅವತ್ತು ಗೆಳೆಯರೊಂದಿಗೆ ನಾನು ಕಾಡಿನಲ್ಲಿ ಹಣ್ಣುಗಳನ್ನು ಹುಡುಕುತ್ತಾ ಹೊರಟಿದ್ದೆ. ಆ ಹಸಿರು ವಾತಾವರಣ, ದೈನಂದಿನ ಒತ್ತಡಗಳನ್ನು ನಿವಾರಿಸಿ, ಮನಸ್ಸನ್ನು ತಾಜಾದತ್ತ ಕೊಂಡೊಯ್ಯುತ್ತಿತ್ತು. ಹಕ್ಕಿಗಳ ಚಿಲಿಪಿಲಿ ನಮ್ಮಗಳ ಹೃದಯವನ್ನು ತುಂಬಿ, ಏನೋ ಉಲ್ಲಾಸ ಕೊಡುತ್ತಿತ್ತು.
ಕಾಡಿನ ಈ ಸೌಂದರ್ಯ ಸವಿಯುತ್ತಾ, ನಾವೆಲ್ಲ ಮೈಮರೆಯುತ್ತಿರುವಾಗಲೇ ಮಳೆ ಬಂತು. ಮಳೆ ಅಂದರೆ, ಅದು ಸಣ್ಣಪುಟ್ಟದ್ದೇನಲ್ಲ. ಗಂಟೆಗಟ್ಟಲೆ, ಇಡೀ ಕಾಡನ್ನೇ ಒದ್ದೆ ಮಾಡಿ, ಮರೆಯಲ್ಲಿ ನಿಂತ ನಮ್ಮನ್ನೂ ತೊಪ್ಪೆ ಮಾಡಿತು. ಒಂದು ದೊಡ್ಡ ಮರದ ಕೆಳಗೆ ನಾನು ಮತ್ತು ಗೆಳೆಯರು ಹೋಗಿ ನಿಂತರೂ, ಪ್ರಯೋಜನವಾಗಲಿಲ್ಲ. ಅಷ್ಟರಲ್ಲೇ ಆ ಕಾಡಿನಲ್ಲಿ ದೇವರ ಹಾಗೆ ಒಬ್ಬರು ತಾತಾ ಬಂದರು. ಅವರು ಆ ಕಾಡಿಗೆ ಬಹಳ ಪರಿಚಿತರು ಅಂತ ಕಾಣ್ಸುತ್ತೆ… ಅಂಥ ಮಳೆಗೂ ಅವರೇನೂ ಜಗ್ಗಿರಲಿಲ್ಲ. ಆದರೆ, ಅವರ ಕೈಯಲ್ಲಿ ಛತ್ರಿ ಇತ್ತು. ಅದನ್ನು ನಮಗೆ ಕೊಟ್ಟು, “ಇಲ್ಲಿಂದ ಬೇಗ ಹೊರಡಿ. ಹೀಗೆ ಜೋರು ಮಳೆ ಬರುವಾಗ ಕಾಡಿನಲ್ಲಿ ನಿಲ್ಲಬಾರದು. ಮರಗಳು ಧೊಪ್ಪನೆ ಉರುಳಿಬಿದ್ದರೆ ಕತೆ ಅಷ್ಟೇ…’ ಎಂದರು. ನಾವು ಅವರಿಂದ ಛತ್ರಿ ಪಡೆದು, ಹೇಗೋ ಅಡ್ಜೆಸ್ಟ್ ಮಾಡಿಕೊಂಡು ಹೊರಟೆವು. ನಿಜಕ್ಕೂ ಆ ತಾತಾ ಯಾರು? ತಾವು ನೆನೆದರೂ, ನಮಗೇ ಛತ್ರಿ ಕೊಟ್ಟರು?- ಇವೆಲ್ಲ ತಿಳಿಯದಾದೆ.
ಪ್ರಶಾಂತ ಜಿ. ಹೂಗಾರ