ನಮಗಂದು ಸಿಹಿ ತಿನ್ನುವ ಸಂಭ್ರಮ
Team Udayavani, Aug 15, 2020, 10:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬಾಲ್ಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದ ನೆನಪುಗಳು ತುಂಬಾ ಸುಮಧುರ.
ಆ ಒಂದು ದಿನಕ್ಕಾಗಿ ಇಡೀ ವರ್ಷ ಕಾಯುತ್ತಿದ್ದೆವು.
ಸ್ವಾತಂತ್ರ್ಯ ದಿನದ ಒಂದು ವಾರ ಮೊದಲೇ ಶಾಲೆಯ ಸ್ವತ್ಛತೆ ಪ್ರಾರಂಭವಾಗುತ್ತಿತ್ತು.
ಕಸ ಕಡ್ಡಿ ಹೆಕ್ಕಿ, ತರಗತಿ ಸ್ವತ್ಛಗೊಳಿಸಿ ಶಾಲೆಯನ್ನು ಶುಭ್ರವಾಗಿಡುತ್ತಿದ್ದೆವು. ಜತೆಗೆ ನೃತ್ಯ, ಹಾಡು, ಭಾಷಣ, ಚಿತ್ರಕಲೆ ಮುಂತಾದ ಚಟುವಟಿಕೆಗಳಿಗೆ ಭರ್ಜರಿ ತಯಾರಿಯೂ ನಡೆಯುತ್ತಿತ್ತು.
ಸ್ವಾತಂತ್ರ್ಯ ದಿನದಂದು ಭಯ ಮಿಶ್ರಿತ ಖುಷಿಯಿಂದಲೆ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದೆ, ಹೊರಡುವಾಗ ದೇವರಲ್ಲಿ ನನ್ನ ಭಾಷಣ ಎಲ್ಲಿಯೂ ತಪ್ಪದಿರಲೆಂದು ಹಾಗೂ ನನಗೇ ಪ್ರಥಮ ಬಹುಮಾನ ಸಿಗಲೆಂದು ಬೇಡಿಕೊಳ್ಳುತ್ತಿದ್ದೆ.
ಶಾಲೆ ತಲುಪುತ್ತಿದ್ದಂತೆ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಧ್ವಜಸ್ತಂಭದ ಸುತ್ತ ಹೂ ಹಾಕಿ ಸಿಂಗರಿಸುವ ಜವಾಬ್ದಾರಿ ನೀಡುತ್ತಿದ್ದರು. ಇನ್ನೇನು ಕೆಲಸವೆಲ್ಲ ಮುಗಿದು ಧ್ವಜಾರೋಹಣ ಪ್ರಾರಂಭವಾಗುವ ಹೊತ್ತಿಗೆ ಎಲ್ಲ ಮಕ್ಕಳ ಕೈಯಲ್ಲಿ ಒಂದೊಂದು ಬಾವುಟಗಳನ್ನು ಕೊಟ್ಟು ಸಾಲು ಸಾಲಾಗಿ ನಿಲ್ಲಿಸಲಾಗುತಿತ್ತು. ಧ್ವಜಾರೋಹಣ ಮುಗಿದು ಭಾಷಣದ ಸಮಯ ಬಂದಾಗ ಮನಸ್ಸಿನಲ್ಲಿ ಒಂದು ರೀತಿಯ ಭಯ ಶುರುವಾಗುತ್ತಿತ್ತು.
ನನ್ನ ಸರದಿ ಬಂದಾಗ ಒಂದು ಕೈಯಲ್ಲಿ ಭಾಷಣದ ಚೀಟಿ ಹಿಡಿದುಕೊಂಡು ನೋಡಿ ಹೇಳಲೋ ಬೇಡವೋ ಎಂಬ ಗೊಂದಲದಲ್ಲಿ ಭಾಷಣ ಮುಗಿದಿರುತ್ತಿತ್ತು.
ಭಾಷಣ ಮುಗಿದ ಅನಂತರದ ಸಮಯ ನಮ್ಮೆಲ್ಲರಿಗೂ ಇಷ್ಟವಾಗಿತ್ತು. ಯಾಕೆಂದರೆ ಆಗ ಸಿಹಿ ತಿಂಡಿ ವಿತರಿಸಲಾಗುತ್ತಿತ್ತು. ಟೀಚರ್ ಚಾಕಲೇಟ್ ಕೊಟ್ಟು ಎಲ್ಲರ ಬಾಯಿ ಸಿಹಿ ಮಾಡುತ್ತಿದ್ದರು. ದಿನವೂ ಚಾಕಲೇಟ್ ತಿನ್ನುತ್ತಿದ್ದರೂ ಅಂದು ವಿತರಿಸುತ್ತಿದ್ದ ಚಾಕಲೇಟ್ ಹೆಚ್ಚು ಖುಷಿ ನೀಡುತ್ತಿತ್ತು. ಜತೆಗೆ ಸ್ವಾತಂತ್ರÂದ ಬಗ್ಗೆ, ಸ್ವಾತಂತ್ರÂ ವೀರರ ಬಗ್ಗೆ ಹಾಗೂ ಅವರ ಹೋರಾಟದ ಬದುಕನ್ನು ಬಂದಿರುವ ಅತಿಥಿಗಳ ಭಾಷಣಗಳಿಂದ ತಿಳಿದುಕೊಳ್ಳುವ ಅವಕಾಶ ನಮಗೆ ಸಿಗುತ್ತಿತ್ತು. ಬಳಿಕ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದದ್ದು ಬಹುಮಾನ ವಿತರಣೆಗೆ. ನಮ್ಮ ಶಾಲೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಬಹುಮಾನ ಸಿಗುತಿತ್ತು.
ಯಾರಿಗೂ ಬೇಸರವಿಲ್ಲ. ಎಲ್ಲರಿಗೂ ಸಂತೋಷವೇ. ನಾವೂ ಈಗಲೂ ಸ್ವಾತಂತ್ರÂ ದಿನ ಪ್ರತಿವರ್ಷ ಆಚರಿಸುತ್ತೇವೆ. ಆದರೆ ಬಾಲ್ಯದಲ್ಲಿ ಆಚರಿಸುತ್ತಿದ್ದ ದಿನದ ಸ್ವಾತಂತ್ರೋತ್ಸವ, ಭಾಗವಹಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಂದರ ಅನುಭವಕ್ಕೆ ಬೇರೆ ಯಾವುದೂ ಸರಿಸಾಟಿಯಾಗದು.
ಆಶಿಕಾ ಸಾಲೆತ್ತೂರು, ವಿವೇಕಾನಂದ ಕಾಲೇಜು, ಪುತ್ತೂರು