ರಕ್ಷಾ ಬಂಧನ ವಿಶೇಷ: ದ್ರೌಪದಿಯ ಋಣ ತೀರಿಸಿದ ಕೃಷ್ಣ
Team Udayavani, Aug 3, 2020, 2:53 PM IST
ಸಂಸ್ಕೃತಿ, ಆಚಾರ ವಿಚಾರ ಹಬ್ಬಗಳ ಮನೆ ಎಂದೇ ಪ್ರಸಿದ್ಧಿ ಆಗಿರುವ ನಮ್ಮ ದೇಶದಲ್ಲಿ ಶ್ರಾವಣ ಮಾಸ ಬಂದರೆ ಸಾಕು ಮಳೆ ಶುರುವಾಗುತ್ತದೆ.
ಅದರ ಜೊತೆಗೆ ನಾಗರ ಪಂಚಮಿ, ವರಮಹಾಲಕ್ಷ್ಮೀ ಹಬ್ಬ, ರಕ್ಷಾ ಬಂಧನ, ಗೌರಿ ಗಣೇಶ ಹಬ್ಬ, ಹೀಗೆ ದೇಶದಾದ್ಯಂತ ಹಲವಾರು ಸಂಪ್ರದಾಯಗಳನ್ನು ಆಚರಿಸಿಕೊಂಡು ಇಂದಿಗೂ ನಡೆಸಿಕೊಂಡು ಬಂದಿದೆ.
ಹಾಗೆಯೇ ಈ ರಕ್ಷಾ ಬಂಧನ ಅಣ್ಣ ತಂಗಿಯರಿಗೆ ವಿಶೇಷವಾದ ಹಬ್ಬ ಎಂದೇ ಹೇಳಬಹುದು. ತಂಗಿಯು ತನ್ನಣ್ಣನ ಸುರಕ್ಷೆಗೆ ಮತ್ತು ಅಣ್ಣ-ತಂಗಿಯರ ರಕ್ಷೆಯ ಪ್ರತೀಕವಾಗಿ ಶ್ರಾವಣಮಾಸದ ಪೌರ್ಣಮಿಯಂದು (ನೂಲಹುಣ್ಣಿಮೆ) ರಾಖೀ ಕಟ್ಟಿಸಿದರ ರಕ್ಷೆಗೆ ಇರು ಎಂದು ಕೇಳಿಕೊಳ್ಳುವ ಹಬ್ಬವೇ ಈ ರಕ್ಷಾ ಬಂಧನ ಹಬ್ಬವಾಗಿದೆ.
ಸಹೋದರಿಯರು ಜನುಮದುದ್ದಕ್ಕೂ ನಮಗೆ ರಕ್ಷೆಯಾಗಿ ಈ ಜೀವಕ್ಕೆ ದೇಹಕ್ಕೆ ನೆರಳಾಗಿ, ಇರು ಎಂದು ಪ್ರೀತಿಯ ಅಣ್ಣನಿಗೆ ಮತ್ತು ತಮ್ಮಂದಿರಿಗೆ ಹಣೆಗೆ ತಿಲಕವನ್ನಿಟ್ಟು, ಆರತಿ ಮಾಡಿ, ಸಿಹಿತಿನಿಸು ತಿನಿಸಿ ರಾಖೀ ಕಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ.
ಸಹೋದರರು ಅವರ ಆಸೆಯಂತೆ ರಕ್ಷೆಯಾಗಿ ಇರುತ್ತೇನೆ ಎಂದು ಸಂತಸದಿಂದ ಹಾರೈಸಿ ರಕ್ಷಣೆಯ ಜವಾಬ್ದಾರಿಯನ್ನು ಒತ್ತುಕೊಳ್ಳುತ್ತಾರೆ. ಅಣ್ಣ-ತಂಗಿಯರ ಸಂಬಂಧವನ್ನು ಸಕಲ ನೂರುಕಾಲ ಆರೋಗ್ಯದಿಂದ ಬಾಳು ಎಂದು ಆಭರಣ ನಗದು ಹೀಗೆ ಹಲವು ಪ್ರಕಾರದ ಪ್ರೀತಿಯ ಉಡುಗೊರೆಯನ್ನು ನೀಡುವುದು ಸಾಮಾನ್ಯವಾದರೂ ಅದರ ಮೌಲ್ಯಕ್ಕೆ ಎಲ್ಲೇಯೇ ಇಲ್ಲ.
ಐತಿಹಾಸಿಕ ಹಿನ್ನೆಲೆ
ನಮ್ಮ ದೇಶದಲ್ಲಿ ಆಚರಿಸುವ ಹಬ್ಬಗಳಲ್ಲಿ ಅವುಗಳದೇ ಆದ ಪೌರಾಣಿಕ ಐತಿಹಾಸಿಕ ಹಿನ್ನೆಲೆಗಳನ್ನು ಹೊಂದಿವೆ ಅದರಲ್ಲಿ ರಕ್ಷಾ ಬಂಧನ ಒಂದು. ಇದರ ಹಿನ್ನೆಲೆಯನ್ನು ನೋಡುವುದಾದರೆ ಶಿಶುಪಾಲನನ್ನು ಸಂಹರಿಸಲು ಶ್ರೀಕೃಷ್ಣನು ಸುದರ್ಶನ ಚಕ್ರವನ್ನು ಬಳಸಿದಾಗ ಕೃಷ್ಣನ ಕೈಬೆರಳಿಗೆ ಗಾಯವಾಗುತ್ತದೆ. ಅಂತೆ ಆಗ ದ್ರೌಪದಿ ಸೀರೆಯನ್ನು ಹರಿದು ಶ್ರೀಕೃಷ್ಣನಿಗೆ ಕಟ್ಟುತ್ತಾಳೆ. ಆಗ ಕೃಷ್ಣನು ಮುಂದೊಂದು ಋಣವನ್ನು ತೀರಿಸುತ್ತೇನೆ ಎಂದು ದ್ರೌಪದಿಗೆ ಮಾತು ಕೊಡುತ್ತಾನೆ. ಅದರಂತೆಯೇ ಅದಕ್ಕೆ ಪ್ರತಿಯಾಗಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆಯುವ ಸಂದರ್ಭದಲ್ಲಿ ಕೃಷ್ಣನು ಸೀರೆಯನ್ನು ದ್ರೌಪದಿಗೆ ದಯಪಾಲಿಸುತ್ತಾನೆ. ಈ ಒಂದು ಪರಿಕಲ್ಪನೆ ರಕ್ಷಾ ಬಂಧನದ ಒಂದು ಆರಂಭವೆಂದೂ ಹಿರಿಯರು ಪೂರ್ವಜರು ಹೇಳುತ್ತಾರೆ.
ಸುಂದರ ರಾಖೀಗಳಿಗೆ ದುಬಾರಿ ಬೇಡಿಕೆ
ಹಿಂದಿನ ದಿನಗಳಲ್ಲಿ ಒಂದು ನೂಲಿನ ದಾರವನ್ನು ಕಟ್ಟುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಈ ರಾಖೀ ಹಬ್ಬದಲ್ಲಿ ಮಾರುಕಟ್ಟೆಗಳಲ್ಲಿ ರೂಪಾಯಿಯಿಂದ ಹಿಡಿದು ಲಕ್ಷದ ವರೆಗೆ ಇರುವುದನ್ನು ಕಾಣುತ್ತೇವೆ. ಸಹೋದರಿಯರು ಮಾರುಕಟ್ಟೆಗಳಲ್ಲಿ ಹಲವಾರು ಅಂಗಡಿಗಳಿಗೆ ಹೋಗಿ ಅಣ್ಣನ ಇಷ್ಟದ ಬಣ್ಣದ ರಾಖೀಗಳ ಸಲುವಾಗಿ ಪದೇ ಪದೇ ನೋಡಿ ಯೋಚಿಸಿ ಅಣ್ಣನಿಗೆ ರಾಖೀಗಳನ್ನು ಕೊಂಡುತಂದು ಅವರ ಕೈಗೆ ಕಟ್ಟಿ ಉಡುಗೊರೆಯನ್ನು ಪಡೆದು ಖುಷಿಪಡುತ್ತಾರೆ.
ಅಣ್ಣ-ತಂಗಿಯರ ಬಾಂಧವ್ಯ ಶಾಶ್ವತ
ಹಳ್ಳಿಗಳಲ್ಲಿ ತನ್ನ ಸ್ವಂತ ಸಹೋದರಿಗೆ ರಾಖೀಕಟ್ಟಬೇಕೆಂದಿಲ್ಲ. ತಮ್ಮ ನೆರೆಹೊರೆಯ ಸಹೋದರರು ಹೆಣ್ಣುಮಕ್ಕಳು ತಮಾಷೆಗೆ ರಾಖೀ ಕಟ್ಟಿ ಹೇಗಾದರೂ ಮಾಡಿ ಉಡುಗೊರೆ ಕೇಳಿ ಪಡೆಯುತ್ತಾರೆ. ಇದು ಒಂದು ಕಡೆಯಾದರೆ ಇನ್ನು ಕೆಲವು ಹೆಣ್ಣುಮಕ್ಕಳು ಗಂಡು ಮಕ್ಕಳಿಗೆ ರಾಖೀ ಕಟ್ಟಿ ಅವರಿಂದ ಎಂದು ಉಡುಗೊರೆಯ ನಿರೀಕ್ಷೆ ಇಲ್ಲದೆ ಅಣ್ಣ-ತಂಗಿಯರ ಬಾಂಧವ್ಯ ಕಾಣುವವರು ಇದ್ದಾರೆ.
ಹಾಗೆಯೇ ಕೆಲವು ಕಾಲೇಜುಗಳಲ್ಲಿ ಹುಡುಗರು ರಕ್ಷಾ ಬಂಧನದ ದಿನ ಕಾಲೇಜಿನ ಮೆಟ್ಟಿಲು ಹತ್ತುವುದನ್ನೇ ಮರೆತುಬಿಡುತ್ತಾರೆ ಅಲ್ಲವೇ? ಹೀಗೆ ರಕ್ಷಾ ಬಂಧನ ಅಣ್ಣ-ತಂಗಿಯರ ರಕ್ಷೆಯ ಪ್ರತೀಕವಾಗಿ ಆಚರಿಸುವ ಹಬ್ಬ ಕೇವಲ ಒಂದು ಆಚರಣೆಗಷ್ಟೇ ಸೀಮಿತವಾಗಿಲ್ಲ. ಯಾವುದೇ ಹೆಣ್ಣಿನ ರಕ್ಷಣೆಗೆ ಗಂಡು ಮುಂದಾಗಬೇಕೆಂದು ಹಿರಿಯ ತಲೆಮಾರಿನವರು ಹಾಕಿಕೊಟ್ಟ ಒಂದು ಬುನಾದಿ ಎಂತೆ ಹೆಣ್ಣಿನ ರಕ್ಷಣೆ ಎಲ್ಲರ ಹೊಣೆಯಾಗಬೇಕು. ಅಣ್ಣ-ತಂಗಿಯರ ಬಾಂಧವ್ಯ ಶಾಶ್ವತವಾಗಿ ನೆಲೆಯೂರ ಬೇಕು.
ಪೂರ್ಣಿಮ ಬಿ., ಪತ್ರಿಕೋದ್ಯಮ ವಿದ್ಯಾರ್ಥಿ, ವಿಶ್ವವಿದ್ಯಾನಿಲಯ ಕಲಾ ಕಾಲೇಜು ತುಮಕೂರು