ನನ್ನಿಷ್ಟದ ಸಿನೆಮಾ ಯುವ ಜನರ ಅಯ್ಕೆ: ಮುತ್ತಿನ ಹಾರ ; ಬದುಕಿನ ಸವಾಲು ತೆರೆದಿಡುವ ಚಿತ್ರ
Team Udayavani, Jul 8, 2020, 12:24 AM IST
ಮುತ್ತಿನ ಹಾರ ವೀರ ಯೋಧರ ಬದುಕಿನ ಕುರಿತಾದ ಚಲನಚಿತ್ರ.1990 ರಲ್ಲಿ ರೂಪುಗೊಂಡ ಚಲನಚಿತ್ರದ ಮೂರ್ನಾಲ್ಕು ಗೀತೆಗಳು ಬಹಳ ಜನಪ್ರಿಯವಾಗಿದ್ದವು. ಕೊಡಗಿನ ಹಿನ್ನೆಲೆಯಲ್ಲಿ ಸಾಗುವ ಚಲನಚಿತ್ರಕ್ಕೆ 1990-91 ರಲ್ಲಿ ರಾಷ್ಟ್ರೀಯ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪುರಸ್ಕಾರ ಲಭಿಸಿತ್ತು. ರಾಜ್ಯ ಸರಕಾರದ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿತ್ತು. ಹಿರಿಯ ನಟ ಕೆ.ಎಸ್. ಅಶ್ವತ್ಥ್ರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು.
***********************************************
ಸಿನಿಮಾ ಎಂಬುದು ಕೇವಲ ಮನರಂಜನೆ ನೀಡುವುದಕ್ಕೆ ಮಾತ್ರ ಸೀಮಿತವಲ್ಲ. ಸಿನಿಮಾ ಸ್ಫೂರ್ತಿದಾಯಕವಾಗಿರಬೇಕು. ಅಂತಹ ಸಿನಿಮಾಗಳಲ್ಲಿ ಮೊದಲು ನಾ ಕಂಡ ಸಿನಿಮಾ ಮುತ್ತಿನಹಾರ.
ಎಸ್. ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ. ತೊಂಬತ್ತರ ದಶಕದಲ್ಲಿ ಮೂಡಿಬಂದಿರುವ ಚಿತ್ರ ಇಂದಿಗೂ ಪ್ರಸ್ತುತ. ಚಿತ್ರದಲ್ಲಿ ವಿಷ್ಣುವರ್ಧನ್, ಸುಹಾಸಿನಿ ನಟಿಸಿದ್ದಾರೆ. ಈ ಸಿನಿಮಾ ಯುದ್ಧದ ಪಿಡುಗಿನ ಬಗೆಗೆ ಸೈನಿಕನ ತೊಳಲಾಟವನ್ನು ವಿವರಿಸುತ್ತದೆ.
ಯುದ್ಧ ಎಂಬುದು ತನ್ನನ್ನು ತಾನೇ ಬಲಿ ಪಡೆದುಕೊಳ್ಳುವಂತೆ ಮಾಡುವ ದೃಶ್ಯವನ್ನು ತನ್ನ ಗಂಡ, ಅತ್ತೆ , ಮಗ ಎಲ್ಲರನ್ನೂ ಸಾಲು ಸಾಲಾಗಿ ಕಳೆದುಕೊಳ್ಳುವ ಒಂದು ಹೆಣ್ಣಿನ ನೋವಿನ ಚಿತ್ರಣವನ್ನು ಈ ಚಿತ್ರ ಬಿಂಬಿಸುತ್ತದೆ.
ಭಾರತ ಮತ್ತು ಚೀನಾದ ನಡುವೆ ನಡೆಯುವ ಯುದ್ಧದಲ್ಲಿ ಸೈನಿಕ ಮೇಜರ್ ಅಚ್ಚಪ್ಪ (ವಿಷ್ಣುವರ್ಧನ್) ಗಾಯಗೊಳ್ಳುತ್ತಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುವಾಗ ದಾದಿ ಅನ್ನಪೂರ್ಣ ಜೊತೆಗೆ ಪ್ರೇಮವಾಗಿ ಇಬ್ಬರು ವಿವಾಹವಾಗುತ್ತಾರೆ.
ಅಪ್ಪ ಅಮ್ಮ ಹೆಂಡತಿ ಮಗನ ಜೊತೆ ಸಂತೋಷವಾಗಿ ಇದ್ದ ಅಚ್ಚಪ್ಪ ಎಲ್ಲರನ್ನೂ ಬಿಟ್ಟು ಯುದ್ಧಕ್ಕೆ ಹೋಗುವ ಅನಿವಾರ್ಯತೆ ಉಂಟಾಗುತ್ತದೆ. ಎಲ್ಲರನ್ನೂ ತೊರೆದು ಯುದ್ಧಕ್ಕೆ ಹೊರಡುತ್ತಾನೆ. ಕೆಲ ದಿನಗಳ ನಂತರ ಅಚ್ಚಪ್ಪನಿಗೆ ತನ್ನ ಮಗನನ್ನು ತೋರಿಸಲು ಅನ್ನಪೂರ್ಣ ಕರೆದುಕೊಂಡು ಹೋಗುವಾಗ ಶತ್ರುಗಳ ದಾಳಿಗೆ ತನ್ನ ಮಗನನ್ನು ಕಳೆದುಕೊಳ್ಳುತ್ತಾಳೆ.
ರಾಜಸ್ಥಾನದ ಮರಳುಗಾಡಿನಲ್ಲಿ ಮಗನನ್ನು ಕಳೆದುಕೊಂಡ ಆಕೆ ದಿಕ್ಕು ತೋಚದೇ ಮಗನನ್ನು ಹೇಗಾದರೂ ಮಾಡಿ ತನ್ನ ಗಂಡನಿಗೆ ತೋರಿಸಬೇಕೆಂದು ಶವವನ್ನು ಇಟ್ಟುಕೊಂಡು ಅಲೆದಾಡುತ್ತಾಳೆ. ಕೊನೆಗೂ ಗಂಡನಿಗೆ ಮಗನ ಮುಖವನ್ನು ತೋರಿಸಲು ಆಗುವುದಿಲ್ಲ. ನೋವಿನಿಂದ ಹೊರಬರಲಾಗದೆ ಗಂಡ ಹೆಂಡತಿ ಇಬ್ಬರೂ ದುಃಖವನ್ನು ಅನುಭವಿಸುತ್ತಾರೆ. ನೋವನ್ನು ಮರೆಯಲು ಇಬ್ಬರೂ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.
ಅತ್ತ ತನ್ನ ಮೊಮ್ಮಗನನ್ನು ನೋಡುವ ಕಾತುರ ಹೆಚ್ಚಾಗಿ ಅಜ್ಜ ಅಜ್ಜಿ ಇಬ್ಬರೂ ಇವರಿದ್ದಲ್ಲಿಗೆ ಬರುತ್ತಾರೆ. ಮೊಮ್ಮಗ ಸತ್ತ ವಿಷಯ ತಿಳಿದ ಅಜ್ಜಿ ಆಘಾತದಿಂದ ಸಾವನ್ನಪ್ಪುತ್ತಾರೆ. ಶತ್ರುಗಳಿಂದ ಬಿಡಿಸಿಕೊಳ್ಳಲು ಹೋರಾಡಿ ಅಚ್ಚಪ್ಪ ವೀರ ಮರಣ ಹೊಂದುತ್ತಾನೆ. ತನ್ನ ಗಂಡ ಮೊದಲೇ ಸತ್ತು ಹೋಗಿದ್ದ ಎಂದುಕೊಂಡಿದ್ದ ಅನ್ನಪೂರ್ಣ ಗೆ ಗಂಡ ಬದುಕಿರುವ ಸುದ್ದಿ ಕೇಳಿ ಸಂತೋಷ ಪಡುತ್ತಾಳೆ.
ತನ್ನ ವಿವಾಹ ವಾರ್ಷಿಕೋತ್ಸವವನ್ನು ಗಂಡನೊಂದಿಗೆ ಆಚರಿಸಿಕೊಳ್ಳಲು ಅವನು ಕೊಟ್ಟ ಸೀರೆ ಉಟ್ಟು ಮುತ್ತಿನಹಾರ ತೊಟ್ಟು ಓಡೋಡಿ ಬರುವ ಆಕೆಗೆ ಗಂಡ ಬದುಕಿಲ್ಲ ಎಂಬ ಸುದ್ದಿ ಆಘಾತ ಉಂಟು ಮಾಡುತ್ತದೆ. ಈ ಎಲ್ಲಾ ನೋವುಗಳನ್ನು ಅನುಭವಿಸಿದ ಅನ್ನಪೂರ್ಣ ಧೈರ್ಯಗೆಡದೆ ದಿಟ್ಟ ಯೋಧನ ಪತ್ನಿಯಾಗಿ ಎಲ್ಲಾ ನೋವನ್ನು ಮನದಲ್ಲಿಯೇ ಇಟ್ಟುಕೊಂಡು ಮರಳಿ ದಾದಿಯಾಗಿ ಸೇವೆ ಸಲ್ಲಿಸುತ್ತಾರೆ.
ಈ ಸಿನಿಮಾ ಒಬ್ಬ ಯೋಧನ ಪತ್ನಿಯ ನೋವಿನ ಆಕ್ರಂದನ ತೋರಿಸುತ್ತದೆ. ಮೊನ್ನೆಯಷ್ಟೆ ಚೀನಾದ ಕುತಂತ್ರಕ್ಕೆ ನಮ್ಮಯೋಧರನ್ನು ಕಳೆದುಕೊಂಡೆವು. ಅ ಸಮಯದಲ್ಲಿ ನನಗೆ ನೆನಪಾದದ್ದು ಮುತ್ತಿನಹಾರ ಸಿನಿಮಾ. ಈ ಸಿನಿಮಾದಿಂದ ತಿಳಿಯುವುದೇನೆಂದರೆ ಎಲ್ಲಾ ಸುಖ ಸಂಬಂಧ, ಪ್ರೀತಿಗಳನ್ನ ಬದಿಗೊತ್ತಿ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಯೋಧನ ಜೀವನ ಎಷ್ಟು ಕಷ್ಟಕರ ಎಂಬುದು ಹಾಗೂ ಒಂದು ಹೆಣ್ಣು ಎಷ್ಟೇ ನೋವು ಅನುಭವಿಸಿದರೂ ಅದನ್ನು ಧೈರ್ಯವಾಗಿ ಎದುರಿಸುವವಳು ಎಂಬುದು. ಬಹಳ ಪ್ರೇರಣಾದಾಯಕವಾದ ಚಲನಚಿತ್ರ.
– ವಿಜಯ್ ಕುಮಾರ್ ಎಸ್ ಎಮ್, ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ