ಕಾರ್ಗಿಲ್ ವಿಜಯಕ್ಕೆ ಇಪ್ಪತ್ತು ; ಯೋಧರ ಬಲಿದಾನವನ್ನುನೆನೆಯೋಣ
Team Udayavani, Jul 26, 2019, 9:53 PM IST
1999ರ ಕಾರ್ಗಿಲ್ ವಿಜಯಕ್ಕೆ ಇಂದು 20ರ ಹರೆಯ. ಪಾಕಿಸ್ಥಾನದ ಸೇನಾ ಮುಖ್ಯಸ್ಥ ಜನರಲ್ ಫರ್ವೇಝ್ ಮುಷರಫ್ ನ ಮಾಸ್ಟರ್ ಮೈಂಡ್ ನಲ್ಲಿ ಪಡಿಮೂಡಿದ ಈ ಅತಿಕ್ರಮಣಕ್ಕೆ ಭಾರತೀಯ ಸೇನೆ ಕಲಿಸಿದ ಪಾಠವಿದೆಯಲ್ಲಾ ಅದು 20 ವರ್ಷಗಳ ಬಳಿಕ ಇಂದಿಗೂ ನಮ್ಮ ನೆರೆಯ ಕಿರಿಕ್ ರಾಷ್ಟ್ರವನ್ನು ದುಃಸ್ವಪ್ನದಂತೆ ಕಾಡುತ್ತಿದೆ. ನಮ್ಮ ಮೂರೂ ಸೇನಾ ಪಡೆಗಳ ಚತುರ ಮತ್ತು ವೀರೋಚಿತ ಹೋರಾಟದ ಫಲವಾಗಿ 1999ರ ಜುಲೈ 26ರಂದು ಭಾರತವು ಕಾರ್ಗಿಲ್ ಸಮರವನ್ನು ಗೆಲ್ಲುವುದರ ಮೂಲಕ ಪಾಕಿಸ್ಥಾನದ ಸಂಚನ್ನು ಮೆಟ್ಟಿನಿಂತಿತ್ತು. ಜಾತಿ-ಮತಗಳ, ನಾಡು-ನುಡಿಗಳ ಹಂಗನ್ನು ತೊರೆದು ತಾಯ್ನಾಡಿನ ರಕ್ಷಣೆಗಾಗಿ ಅದೆಷ್ಟೋ ಯೋಧರ ಶೌರ್ಯದ ಪ್ರತೀಕವೇ ಈ ಕಾರ್ಗಿಲ್ ವಿಜಯ. ನಮ್ಮ ರಾಜ್ಯದಿಂದಲೂ ಹಲವಾರು ಯೋಧರು ಈ ಕಾರ್ಗಿಲ್ ಸಮರದಲ್ಲಿ ತಾಯ್ನಾಡಿನ ರಕ್ಷಣೆಗಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.