ಕತಾರ್ : ವಿಶ್ವ ಪರಿಸರ ದಿನಾಚರಣೆ
Team Udayavani, Jul 1, 2021, 11:11 PM IST
ಕರ್ನಾಟಕ ಸಂಘ ಕತಾರ್ ವತಿಯಿಂದ ವಿಶ್ವ ಪರಿಸರ ದಿನವನ್ನು ಗಅಲ್ಫಾರ್ ಅಲ್ ಮಿಸ್ನಾದ್ ಸಂಸ್ಥೆಯ ನೂತನ ಜೆಯರ್ ಅಲ್ ಸಮೂರ್ನ ಆವರಣದಲ್ಲಿ ಜೂ. 11ರಂದು ಆಚರಿಸಲಾಯಿತು.
ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಬಾಬುರಾಜನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಗಅಲ್ಫಾರ್ ಅಲ್ ಮಿಸ್ನಾದ್ ಸಂಸ್ಥೆಯ ಮೂಲ ಸೌಕರ್ಯಗಳ ವಿಭಾಗದ ಹಿರಿಯ ಪ್ರಧಾನ ವ್ಯವಸ್ಥಾಪಕ ಹೇಮಚಂದ್ರನ್ ಅವರು ಉಪಸ್ಥಿತರಿದ್ದರು. ಕರ್ನಾಟಕ ಮೂಲದ ಇತರ ಸಹೋದರ ಸಂಘಗಳಾದ ತುಳು ಕೂಟ, ಬಂಟ್ಸ್ ಕತಾರ್, ಕೆ.ಎಂ.ಸಿ.ಎ., ಎಂ.ಸಿ.ಎ., ಎಂ.ಸಿ.ಸಿ. ಹಾಗೂ ಎಸ್.ಕೆ.ಎಂ.ಡಬ್ಲೂé.ಎ. ಇವುಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೋವಿಡ್ ಮುಂಜಾಗ್ರತ ಕ್ರಮಗಳನ್ನು ಪಾಲಿಸಿಕೊಂಡು ಸುಮಾರು ಒಂದು ವರ್ಷದ ಬಳಿಕ ಎಲ್ಲರೂ ಒಗ್ಗೂಡಿ ಹೊರ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಮೊದಲೇ ನಿರ್ಮಿಸಿದ್ದ ಹೊಂಡದಲ್ಲಿ ಗಣ್ಯರು, ಸಭಿಕರೆಲ್ಲರೂ ಸೇರಿ ಮಾವು, ಬೇವು ಮೊದಲಾದ ಗಿಡ ನೆಟ್ಟು ಸಂತಸ ವ್ಯಕ್ತಪಡಿಸಿದರು.
ಒಳಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಾಬು ರಾಜನ್ ಮಾತನಾಡಿದರು. ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ ರಾವ್ ಅವರು ಎಲ್ಲರನ್ನೂ ಸ್ವಾಗತಿಸಿದರು, ಪರಿಸರ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಕುಮಾರ ಸ್ವಾಮಿ ಧನ್ಯವಾದ ಸಲ್ಲಿಸಿದರು.