“ಸ್ಮಾರ್ಟ್ ವಿಲೇಜ್’ಗೂ ಆದ್ಯತೆ: ಸಂಸದ ಬಿ.ವೈ. ರಾಘವೇಂದ್ರ
63.45 ಕೋ.ರೂ. ವೆಚ್ಚದಲ್ಲಿ ಬೈಂದೂರಿನ ಗ್ರಾಮೀಣ ರಸ್ತೆ ಅಭಿವೃದ್ಧಿ
Team Udayavani, Dec 6, 2021, 4:09 AM IST
ಕುಂದಾಪುರ: ಪ್ರಧಾನಿ ಮೋದಿ ಪರಿಕಲ್ಪನೆಯ ಸ್ಮಾರ್ಟ್ ಸಿಟಿಯ ಜತೆ “ಸ್ಮಾರ್ಟ್ ವಿಲೇಜ್’ಗೂ ಆದ್ಯತೆ ನೀಡಿ ಗ್ರಾಮ ಸಡಕ್ ಯೋಜನೆಯ ಮೂಲಕ ಬೈಂದೂರು ವಿಧಾನಸಭಾ ಕ್ಷೇತ್ರದ ಒಟ್ಟು 25.9 ಕೀ.ಮೀ. ರಸ್ತೆಯನ್ನು 21.75 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 32.20 ಕೋ.ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ 10 ಕೋ.ರೂ. ಸೇರಿದಂತೆ ಒಟ್ಟಾರೆ 63.95 ಕೋ.ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದ್ದಾರೆ.
ಶೀಘ್ರ ಕಾಮಗಾರಿ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಲಜೀವನ್ ಮಿಷನ್-ಮನೆಮನೆ ಗಂಗಾ ಯೋಜನೆಯಡಿ 560 ಕೋ.ರೂ. ವೆಚ್ಚದಲ್ಲಿ ಕ್ಷೇತ್ರದ ಪ್ರತೀ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. ಸದ್ಯ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಶಾಸಕ ಬಿ.ಎಂ. ಸುಕುಮಾರ ಶೆಟ್ಟರ ಸಹಕಾರ ದೊಂದಿಗೆ ಮಾದರಿ ಕ್ಷೇತ್ರವನ್ನಾಗಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಇ.ಡಿ. ಬಲೆಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್
ಪ್ರಾಕೃತಿಕ ವಿಪತ್ತು:
1.16 ಕೋ.ರೂ.ಪರಿಹಾರ
ಪ್ರಾಕೃತಿಕ ವಿಕೋಪದಡಿ ಸಂಭವಿಸಿದ ಮಾನವ ಜೀವ ಹಾನಿ, ಭತ್ತದ ಕೃಷಿ, ತೋಟಗಾರಿಕಾ ಬೆಳೆ, ಜಾನುವಾರು ಜೀವ ಹಾನಿ, ಜಾನುವಾರು ಕೊಟ್ಟಿಗೆ ಹಾನಿ, ವಾಸ್ತವ್ಯದ ಮನೆ ಭಾಗಶ: ಹಾಗೂ ಸಂಪೂರ್ಣ ನಾಶ ಸೇರಿದಂತೆ ಒಟ್ಟು 816 ಪ್ರಕರಣ ವರದಿಯಾಗಿದ್ದು, ಒಟ್ಟು 1.16 ಕೋ.ರೂ. ಪರಿಹಾರವನ್ನು ಸಂತ್ರಸ್ತರಿಗೆ ತ್ವರಿತವಾಗಿ ನೀಡಲಾಗಿದೆ ಎಂದು ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.