ರಾಜಿನಾಮೆಗೆ ಬಿಜೆಪಿ ಪಟ್ಟು: ಬಂಧಿತ ನವಾಬ್ ಮಲಿಕ್ ಗೆ ಮಮತಾ ಬ್ಯಾನರ್ಜಿ ಬೆಂಬಲ
Team Udayavani, Feb 23, 2022, 7:21 PM IST
ಮುಂಬಯಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಬಂಧಿಸಿದ ನಂತರ, ಬಿಜೆಪಿಯು ಎನ್ಸಿಪಿ ನಾಯಕನ ರಾಜೀನಾಮೆಗೆ ಒತ್ತಾಯಿಸಿದೆ ಮತ್ತು ರಾಜೀನಾಮೆ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಮಾತನಾಡಿ “ನವಾಬ್ ಮಲಿಕ್ ಅವರನ್ನು ಬಂಧಿಸಲಾಗಿದೆ, ಅವರು ಈಗ ರಾಜೀನಾಮೆ ನೀಡಬೇಕು, ನಾವು ಅವರ ರಾಜೀನಾಮೆಗೆ ಒತ್ತಾಯಿಸುತ್ತೇವೆ, ಅವರು ನೀಡದಿದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ, ಅವರು ಸರ್ಕಾರವನ್ನು ಹೇಗೆ ನಡೆಸುತ್ತಿದ್ದಾರೆ? ಮಹಾರಾಷ್ಟ್ರದ ಸಚಿವರ ಮೇಲಿನ ಆರೋಪಗಳನ್ನು ಓದಿದರೆ ಸುಸ್ತಾಗುತ್ತದೆ ಅಂತಹ ದೊಡ್ಡ ಪಟ್ಟಿ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ದಾವೂದ್ ನಂಟು: ಇಡಿಯಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನ
ಮಮತಾ ಬ್ಯಾನರ್ಜಿ ಬೆಂಬಲ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದು, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನದ ನಂತರ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರಿಗೆ ರಾಜೀನಾಮೆ ನೀಡಲು ಒತ್ತಾಯಿಸಬೇಡಿ ಎಂದು ಹೇಳಿರುವುದಾಗಿ ವರದಿಯಾಗಿದೆ.
ಮಲಿಕ್ ಬಂಧನದ ಬಳಿಕ ಪಕ್ಷದ ಅಧ್ಯಕ್ಷ ಶರದ್ ಪವಾರ್ ನಿವಾಸದಲ್ಲಿ ಎನ್ಸಿಪಿ ನಾಯಕರ ಸಭೆ ನಡೆಸಲಾಗಿದೆ.
ರಾಜೇಶ್ ಟೋಪೆ, ಛಗನ್ ಭುಜಬಲ್ ಮತ್ತು ಅಜಿತ್ ಪವಾರ್ ಸೇರಿ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.