ಏ. 9ರಂದು ‘ಪರ್ವ’ ನಾಟಕ ಪ್ರದರ್ಶನ
ದೇಶದ ಐದು ಪ್ರಮುಖ ಸ್ಥಳಗಳಲ್ಲಿ ನಾಟಕ ಪ್ರದರ್ಶನಕ್ಕೆ ನಿರ್ಧಾರ: ಅಡ್ಡಂಡ ಕಾರ್ಯಪ್ಪ
Team Udayavani, Mar 30, 2022, 2:47 PM IST
ದಾವಣಗೆರೆ: ಮೈಸೂರಿನ ರಂಗಾಯಣವು ಇಲ್ಲಿನ ವೃತ್ತಿ ರಂಗಭೂಮಿ ರಂಗಾಯಣ ಹಾಗೂ ಚಿರಂತನ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದಲ್ಲಿ ಏಪ್ರಿಲ್ 9ರಂದು ನಗರದ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ‘ಪರ್ವ’ ಮಹಾರಂಗ ಪ್ರಯೋಗ ಪ್ರದರ್ಶನ ನಡೆಯಲಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರ್ವ’ ನಾಟಕ ಪ್ರದರ್ಶನ ಏಪ್ರಿಲ್ 9ರಂದು ಸಂಜೆ 4ರಿಂದ ರಾತ್ರಿ 11:30 ಗಂಟೆವರೆಗೆ ನಡೆಯಲಿದೆ. ಇದು ಸಾಹಿತಿ ಎಸ್.ಎಲ್. ಬೈರಪ್ಪ ವಿರಚಿತ, ಪ್ರಕಾಶ ಬೆಳವಾಡಿ ನಿರ್ದೇಶಿಸಿರುವ ನಾಟಕವಾಗಿದ್ದು, ನಾಲ್ಕು ಊಟ, ಚಹಾ ವಿರಾಮಗಳು ಸೇರಿದಂತೆ ಎಂಟು ಗಂಟೆಗಳ ಕಾಲ ಪ್ರದರ್ಶನಗೊಳ್ಳಲಿದೆ ಎಂದರು.
ಮಹಾ ರಂಗಪ್ರಯೋಗ ‘ಪರ್ವ’ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ, ರಾಷ್ಟ್ರದ ಐದು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನಗೊಳ್ಳಬೇಕೆಂಬ ಯೋಜನೆಯನ್ನು ರಂಗಾಯಣ ರೂಪಿಸಿದೆ. 35ಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ತೊಡಗಿಕೊಂಡಿದ್ದಾರೆ. ಪ್ರದರ್ಶನಕ್ಕೆ ಎರಡು ನೂರು ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತರು ಜಿಲ್ಲಾಡಳಿತ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ, ಚಿಂದೋಡಿ ಲೀಲಾ ಕಲಾಕ್ಷೇತ್ರದ ವೃತ್ತಿ ರಂಗಭೂಮಿ ರಂಗಾಯಣ ಕಚೇರಿ, ಶಂಕರಲೀಲಾ ಗ್ಯಾಸ್ ಏಜೆನ್ಸಿ, ಆಹಾರ್- 2000, ರಸವಂತಿ ಕೋಲ್ಡ್ರಿಂಕ್ಸ್, ಶರಭೇಶ್ವರ ಹೋಟೆಲ್, ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೊಟೇಲ್, ಲವ್ ಫುಡ್ಸ್ನಲ್ಲಿ ಟಿಕೆಟ್ ಪಡೆಯಬಹುದು. ಜೊತೆಗೆ ಆನ್ಲೈನ್ ಮೂಲಕ ಟಿಕೆಟ್ ಪಡೆಯಬಹುದಾಗಿದೆ ಎಂದು ವಿವರಿಸಿದರು.
ವೃತ್ತಿ ರಂಗಭೂಮಿ ರಂಗಾಯಣದ ಯಶವಂತ ಸರದೇಶಪಾಂಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಚಿರಂತನ ಸಂಸ್ಥೆಯ ದೀಪಾ ಎನ್. ರಾವ್ ಸುದ್ದಿಗೋಷ್ಠಿಯಲ್ಲಿದ್ದರು.