ಕರಾವಳಿಯಲ್ಲಿ ದಿನವಿಡೀ ಉತ್ತಮ ಮಳೆ : ಇನ್ನೆರಡು ದಿನ ಭಾರೀ ಮಳೆ ಸುರಿಯುವ ನಿರೀಕ್ಷೆ
Team Udayavani, Aug 6, 2022, 7:50 AM IST
ಮಂಗಳೂರು/ಉಡುಪಿ : ಕರಾವಳಿಯಲ್ಲಿ ಮುಂಗಾರು ಬಿರುಸು ಪಡೆದಿದ್ದು, ಶುಕ್ರವಾರ ದಿನವಿಡೀ ಉತ್ತಮ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ಶುಕ್ರವಾರ ಮುಂಜಾನೆಯಿಂದ ಜಿಟಿ ಜಿಟಿ ಮಳೆ ಆರಂಭಗೊಂಡಿದ್ದು, ಮಧ್ಯಾಹ್ನ ವೇಳೆ ತುಸು ಬಿಡುವು ನೀಡಿತ್ತು. ಸಂಜೆ ಮತ್ತು ರಾತ್ರಿ ಬಿರುಸು ಜೋರಾಗಿತ್ತು. ಶೀತಗಾಳಿಯೂ ಇತ್ತು. ಪುತ್ತೂರು, ಉಪ್ಪಿ ನಂಗಡಿ, ಕಡಬ, ಸುಬ್ರಹ್ಮಣ್ಯ, ಸುಳ್ಯ, ಜಾಲೂÕರು, ಕಲ್ಮಕಾರು, ಬೆಳ್ತಂಗಡಿ, ಧರ್ಮಸ್ಥಳ, ನಾರಾವಿ, ಮಡಂ ತ್ಯಾರು, ಬಂಟ್ವಾಳ, ಕನ್ಯಾನ, ಸುರತ್ಕಲ್, ಉಳ್ಳಾಲ, ಮೂಡುಬಿದಿರೆ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.
ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಕೆಲವು ದಿನಗಳಿಗೆ ಹೋಲಿಸಿದರೆ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ.
ಉಡುಪಿ, ಕಾರ್ಕಳ, ಬೈಂದೂರು, ಕುಂದಾಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಬ್ರಹ್ಮಾವರ, ಉಡುಪಿ ನಗರ ಸುತ್ತಮುತ್ತ, ಮಲ್ಪೆ, ಮಣಿಪಾಲ, ಪೆರ್ಡೂರು, ಹಿರಿಯಡಕ, ಕಾಪು, ಪಡುಬಿದ್ರಿ, ಅಜೆಕಾರು, ಹೆಬ್ರಿ ಭಾಗದಲ್ಲಿ ನಿರಂತರ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಆವರಿಸಿದೆ. ಉಡುಪಿ ನಗರದ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ಹರಿಯುವ ಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆ ಮೇಲೆ ಅಗಾದ ಪ್ರಮಾಣದಲ್ಲಿ ಮಳೆ ನೀರು ನಿಂತು, ವಾಹನ ಸವಾರರು ಪರದಾಡುವಂತಾಯಿತು.
ಇದನ್ನೂ ಓದಿ : ಕುಂಬಳೆ : ಪ್ರವಾಹದಲ್ಲಿ ಕೊಚ್ಚಿ ಹೋದ ನಿವೃತ್ತ ಶಿಕ್ಷಕಿಯ ಮೃತದೇಹ ಪತ್ತೆ
ಭಾರೀ ಮಳೆ ನಿರೀಕ್ಷೆ
ಕರಾವಳಿಯಲ್ಲಿ ಮಳೆ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದ್ದು, ಆ. 5ರಂದು ಬೆಳಗ್ಗೆ 8.30ರ ವರೆಗೆ ರೆಡ್ ಅಲರ್ಟ್ ಇದ್ದು, ಬಳಿಕ ಆ. 7ರ ಬೆಳಗ್ಗೆ 8.30ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಮಳೆ, ಗಾಳಿ, ಸಮುದ್ರದ ಅಬ್ಬರ ಹೆಚ್ಚಿರುವ ನಿರೀಕ್ಷೆ ಇದೆ.
ಮನೆಯಂಗಳದಲ್ಲಿ ಬಿರುಕು
ಸುಬ್ರಹ್ಮಣ್ಯ: ಪ್ರಕೃತಿ ವಿಕೋಪಕ್ಕೆ ನಲುಗಿರುವ ಕೊಲ್ಲಮೊಗ್ರುವಿನಲ್ಲಿ ದಿನಕ್ಕೊಂದು ಆತಂಕಕಾರಿ ಬೆಳವಣಿಗೆ ಕಂಡುಬರುತ್ತಿದೆ. ಇದೀಗ ಗ್ರಾಮದ ಬಳ್ಳಡ್ಕ ಪದ್ಮಯ್ಯ ಗೌಡ ಅವರ ಮನೆಯ ಅಂಗಳದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಿರುಕು ಸುಮಾರು ದೂರದ ವರೆಗೆ ವ್ಯಾಪಿಸಿದ್ದು, ಅದಕ್ಕೆ ನೀರು ನುಗ್ಗದಂತೆ ಟಾರ್ಪಲ್ ಹಾಕಲಾಗಿದೆ ಎಂದು ಮನೆಯವರು ತಿಳಿಸಿದ್ದಾರೆ. ಕೊಲ್ಲಮೊಗ್ರು, ಕಲ್ಮಕಾರಿನಲ್ಲಿ ಮಳೆ ಶುಕ್ರವಾರವೂ ಮುಂದುವರಿದಿದೆ. ತೋಡು, ಹೊಳೆಗಳು ತುಂಬಿ ಹರಿಯುತ್ತಿವೆ.