ಕೊಡಗಿನಲ್ಲಿ ಬಿಡುವು ನೀಡದ ಮಳೆ : ರಸ್ತೆ, ತೋಟ, ಮನೆ ಜಲಾವೃತ, ದೇಗುಲ ಆವರಣಕ್ಕೆ ಕಾವೇರಿ
Team Udayavani, Aug 8, 2022, 8:52 AM IST
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ನಿರಂತರ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡಿವೆ. ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ. ಶ್ರೀ ಭಗಂಡೇಶ್ವರ ದೇವಾಲಯದ ಆವರಣಕ್ಕೆ ಕಾವೇರಿ ನದಿಯ ಪ್ರವಾಹ ಹರಿದು ಬಂದಿದೆ.
ತಲಕಾವೇರಿ ಹಾಗೂ ಭಾಗ ಮಂಡಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಗಡಿಭಾಗ ಕರಿಕೆ ಗ್ರಾ.ಪಂ. ವ್ಯಾಪ್ತಿ ಯಲ್ಲಿ ಮರಗಳು ಧರೆಗುರುಳಿದ್ದು, ಗುಡ್ಡ ಕುಸಿದಿದೆ. ಹಾನಿ ಪರಿಶೀಲನೆ ಗೆಂದು ತೆರಳಿದ್ದ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಮರ ಮತ್ತು ಗುಡ್ಡದ ಮಣ್ಣು ತೆರವುಗೊಳಿಸುವವರೆಗೆ ಸುಮಾರು ಒಂದೂವರೆ ಗಂಟೆ ಕಾಲ ರಸ್ತೆಯಲ್ಲೇ ಉಳಿಯಬೇಕಾಯಿತು.
ಕಾಫಿ ತೋಟ ನಾಶ
ದಕ್ಷಿಣ ಕೊಡಗು ಪೊನ್ನಂಪೇಟೆ ತಾಲೂಕಿನ ಬಿರುನಾಣಿ ವ್ಯಾಪ್ತಿಯಲ್ಲಿ 5 ದಿನಗಳಿಂದ ಧಾರಾಕಾರ ಮಳೆಯಾ ಗುತ್ತಿದೆ. ಚೊಟ್ಟಂಗಡ ಬೋಸ್ ಅವರ ಮನೆಯ ಸಮೀಪದ ಕಾಫಿ ತೋಟ ದಲ್ಲಿ ಜಲಸ್ಫೋಟವಾಗಿದ್ದು, ಕಲ್ಲು, ಕೆಸರು ನೀರಿನ ರಭಸದಿಂದ ಕಾಫಿ ತೋಟ ಸಂಪೂರ್ಣ ನಾಶವಾಗಿದೆ.
ಮಡಿಕೇರಿ ತಾಲೂಕಿನ ಕಣಂìಗೇರಿ ಗ್ರಾಮದ ಎಂ. ಮೊಯ್ದು ಅವರ ಮನೆಗೆ ಮಣ್ಣು ಕುಸಿದು ಹಾನಿಯಾಗಿದೆ. ರಾಜು ಅವರ ಮನೆಯ ಗೋಡೆ ಕುಸಿದಿದೆ. ಕಾಂತೂರು-ಮೂರ್ನಾಡು ಗ್ರಾ.ಪಂ. ವ್ಯಾಪ್ತಿಯ ಎಂ. ಬಾಡಗ ಗ್ರಾಮದ ಗಾಯತ್ರಿ ಅವರ ಮನೆಯ ಗೋಡೆ ಬಿರುಕು ಬಿಟ್ಟು ಬೀಳುವ ಹಂತದಲ್ಲಿದೆ. ಭಾಗಮಂಡಲ ಗ್ರಾಮದ ಶಾರದಾ ಅವರ ಮನೆ ಕುಸಿದಿದೆ. ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸಂಚಾರ ಅಸ್ತವ್ಯಸ್ತ
ಚೆಟ್ಟಳ್ಳಿ-ಮಡಿಕೇರಿ ಮುಖ್ಯ ರಸ್ತೆಯ ದೊಡ್ಡ ಅಬ್ಯಾಲದ ರಸ್ತೆಗೆ ಬರೆ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ನಾಪೋಕ್ಲು-ಬೆಟ್ಟಗೇರಿ ಸಂಪರ್ಕಿಸುವ ಕೊಟ್ಟಮುಡಿಯಲ್ಲಿ ರಸ್ತೆ ಕುಸಿದು
ಅಪಾಯದಂಚಿನಲ್ಲಿದೆ. ನಾಪೋಕ್ಲು- ಮೂರ್ನಾಡು ಸಂಪರ್ಕ ಕಲ್ಪಿಸುವ ರಸ್ತೆಯ ಬೊಳಿಬಾಣೆ ಹಾಗೂ ಚೆರಿಯಪರಂಬು-ಕಲ್ಲು ಮೊಟ್ಟೆಯಲ್ಲಿ ನದಿ ನೀರು ರಸ್ತೆಯನ್ನು ಆವರಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ನೀರಿನ ಮಟ್ಟ ಏರುತ್ತಲೇ ಇರುವುದರಿಂದ ಅಪಾಯದಂಚಿನಲ್ಲಿದ್ದ ಕುಟುಂಬಗಳು ತೆಪ್ಪವನ್ನು ಬಳಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡವು.
ತೋಟಗಳಲ್ಲಿ ನದಿ ಪ್ರವಾಹ
ಸಂಪಾಜೆ ಗ್ರಾಮದ ಪಯಸ್ವಿನಿ ನದಿಯ ಸಮೀಪ ಇರುವ ತೋಟಗಳಿಗೆ ಪ್ರವಾಹದ ನೀರು ನುಗ್ಗಿ ಹಾನಿಯಾಗಿದೆ.
ಶಾಲೆಗಳಿಗೆ ರಜೆ
ಕೊಡಗಿನಲ್ಲಿ ಮಳೆ ಮುಂದುವರಿ ದಿದ್ದು, ಜು. 8ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗು ಜಿಲ್ಲೆಯ ಎಲ್ಲ ಶಾಲೆ ಮತ್ತು ಅಂಗನವಾಡಿಗಳಿಗೆ ಆ. 8ರಂದು ರಜೆ ಘೋಷಿಸಲಾಗಿದೆ.