ಜೀವ ಉಳಿಸಲು ಬೇಕಾಗಿದೆ ಅಂಗಾಂಗ !
Team Udayavani, Aug 13, 2022, 10:00 AM IST
ಮಂಗಳೂರು : ಮರಣ ಹೊಂದಿದ ಬಳಿಕವೂ ಜೀವನ ಸಾರ್ಥಕತೆ ಪಡೆಯುವ ನಿಟ್ಟಿನಲ್ಲಿ ನಡೆಸುವ ಅಂಗಾಂಗ ದಾನ ಪ್ರಕ್ರಿಯೆಗೆ ಕರಾವಳಿ ಭಾಗದಲ್ಲಿ ಮತ್ತಷ್ಟು ಜಾಗೃತಿ ಮೂಡಬೇಕಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ 2015 ರಿಂದ 2022ರ ಅಂತ್ಯದವರೆಗೆ ಒಟ್ಟು 33 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಈ ವರ್ಷ ಜನವರಿ ತಿಂಗಳಿನಿಂದ ಈವರೆಗೆ ಒಟ್ಟು 6 ಮಂದಿ ಅಂಗಾಂಗ ದಾನ ನಡೆಸಿದ್ದಾರೆ. ಉಭಯ ಜಿಲ್ಲೆಗಳ ಆಸ್ಪತ್ರೆಗಳ ಪೈಕಿ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ, ಫಾದರ್ ಮುಲ್ಲರ್, ದೇರಳಕಟ್ಟೆ ಮತ್ತು ಕೊಡಿಯಾಲ್ಬೈಲ್ನಲ್ಲಿರುವ ಯೆನಪೋಯ, ಯುನಿಟಿ, ಎ.ಜೆ., ಕೆ.ಎಸ್. ಹೆಗ್ಡೆ, ಇಂಡಿಯಾನ ಮತ್ತು ಕೆಎಂಸಿ ಮೆಡಿಕಲ್ ಕಾಲೇಜ್ ಮಣಿಪಾಲ ಅಂಗಾಂಗ ದಾನ ಕಸಿ ನಡೆಸಲು ನೋಂದಣಿ ಮಾಡಿಕೊಂಡಿದೆ.
ಉಭಯ ಜಿಲ್ಲೆಗಳಲ್ಲಿ ಸದ್ಯ 13 ಮಂದಿ ಲಿವರ್ ಮತ್ತು 518 ಮಂದಿ ಕಿಡ್ನಿ ಅಂಗಾಂಗದ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದಲ್ಲಿ ಸದ್ಯ 11,695 ಮಂದಿ ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಹೆಚ್ಚಿನ ರೋಗಿಗಳಿದ್ದು, ದಾನ ಮಾಡಿದವರಲ್ಲಿ ಹೆಚ್ಚಿನ ಸಂಖ್ಯೆಯ ಕಿಡ್ನಿಯ ಕಸಿ ಚಿಕಿತ್ಸೆ ಇಲ್ಲೇ ನಡೆಯುತ್ತದೆ.
ಅಂಗಾಂಗ ದಾನದ ಬಗ್ಗೆ ಕರಾವಳಿ ಜಿಲ್ಲೆಗಳಲ್ಲಿ ಈ ಹಿಂದೆ ಅಷ್ಟೊಂದು ಜಾಗೃತಿ ಇರಲಿಲ್ಲ. ಆದರೆ ಇದೀಗ ಈ ಎಲ್ಲ ಚಟುವಟಿಕೆಗಳ ನಿರ್ವಹಣೆಗೆ ವೆನಾÉಕ್ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಜೀವಸಾರ್ಥಕತೆ ಸೊಸೈಟಿಯನ್ನು (ಎಸ್ಒಟಿಟಿಒ) ಆರಂಭಿಸಲಾಗಿದೆ. ಇಬ್ಬರು ಜಿಲ್ಲಾ ಸಂಯೋಜಕರು ಕಾರ್ಯನಿರ್ವಹಿಸುತ್ತಾರೆ. ಮಾನವ ಅಂಗಾಂಗಗಳ ಕಸಿ ಕಾಯ್ದೆಯ ಸಮರ್ಪಕ ಅನುಷ್ಠಾನದ ನಿಟ್ಟಿನಲ್ಲಿ ಇದು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅಂಗಾಂಗ ದಾನದ ಮೂಲಕ ಒಬ್ಬ ವ್ಯಕ್ತಿಯು ಸುಮಾರು 8 ರಿಂದ 10 ಮಂದಿಯ ಜೀವ ಉಳಿಸಲು ಸಾಧ್ಯವಿದೆ.
ಪ್ರತೀ ವರ್ಷ ಆ.13ಕ್ಕೆ ವಿಶ್ವ ಅಂಗಾಂಗ ದಾನ ದಿನಾಚರಣೆ ಆಚರಿಸಲಾಗುತ್ತಿದೆ. ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಮಂದಿಗೆ ಜಾಗೃತಿಯ ಕೊರತೆ ಇದೆ. ಅಂಗಾಂಗ ದಾನ ಮಾಡಲು ಯಾರೂ ಕೂಡ ನೋಂದಣಿ ಮಾಡಿಕೊಳ್ಳಬಹುದು. ಮೃತಪಟ್ಟು ಮೆದುಳು ನಿಷ್ಕ್ರಿàಯ ವಾದ ಬಳಿಕ ಸೀಮಿತ ಗಂಟೆಗಳ ಒಳಗೆ ಅಂಗಾಂಗ ದಾನ ಪ್ರಕ್ರಿಯೆ ನಡೆಯುತ್ತದೆ. ಇದೊಂದು ಶ್ರೇಷ್ಠ ಪ್ರಕ್ರಿಯೆಯಾಗಿದ್ದು, ಆರೋಗ್ಯವಂತ ಅಂಗಗಳನ್ನು ತೆಗೆದು ಅಗತ್ಯವಿದ್ದವರಿಗೆ ನೀಡಲಾಗುತ್ತದೆ.
– ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ